ADVERTISEMENT

‘ನೆಲದ ಮೊದಲ ತೌಳವ ಕುಲಪತಿ’

ವಿದ್ಯಾರ್ಥಿ ತುಳು ಸಮ್ಮೇಳನದ ಲಾಂಛನ ಅನಾವರಣ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 14:56 IST
Last Updated 7 ನವೆಂಬರ್ 2019, 14:56 IST
ವಿದ್ಯಾರ್ಥಿ ತುಳು ಸಮ್ಮೇಳನದ ಲಾಂಛನ
ವಿದ್ಯಾರ್ಥಿ ತುಳು ಸಮ್ಮೇಳನದ ಲಾಂಛನ   

ಮಂಗಳೂರು: ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನದ ಲಾಂಛನವನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ನಗರದ ವಿಶ್ವವಿದ್ಯಾಲಯದ ಕಾಲೇಜು ಸಭಾಂಗಣದಲ್ಲಿ ಗುರುವಾರ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಅವರು, ‘ಸಮ್ಮೇಳನಗಳನ್ನು ಹೆಚ್ಚಾಗಿ ವಿದ್ವಾಂಸರು, ಸಂಶೋಧಕರು, ಹಿರಿಯರನ್ನು ಉದ್ದೇಶಿಸಿ ಮಾಡುತ್ತಾರೆ. ಆದರೆ, ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿಕೊಂಡು ಸಮ್ಮೇಳನ ಆಯೋಜಿಸಿರುವುದು ಅಭಿನಂದನಾರ್ಹ. ವಿದ್ಯಾರ್ಥಿಗಳೇ ಭವಿಷ್ಯದ ಸಂಶೋಧಕರು, ಬರಹಗಾರರು, ಸಾಧಕರಾಗಿದ್ದಾರೆ. ಅವರಿಗೆ ನಾವು ಪ್ರೇರಣೆ ನೀಡಬೇಕು’ ಎಂದು ಶ್ಲಾಘಿಸಿದರು.

‘ಸಮ್ಮೇಳನ ಲಾಂಛನದ ಪರಿಕಲ್ಪನೆಯೂ ಮೌಲ್ಯಯುತವಾಗಿದ್ದು, ಚೆನ್ನಾಗಿ ವಿನ್ಯಾಸ ಮಾಡಿದ್ದಾರೆ. ಲಾಂಛನದಲ್ಲಿರುವ ಭೂತಕೋಲ, ಯಕ್ಷಗಾನ, ಪರಿಸರ ಪ್ರೇಮ, ಕಹಳೆ, ಹುಲಿವೇಷವೆಲ್ಲವೂ ತುಳು ಸಂಸ್ಕೃತಿಯನ್ನು ಸಮಗ್ರವಾಗಿ ಬಿಂಬಿಸಿವೆ. ತುಳು ಸಂಸ್ಕೃತಿ, ಅಸ್ಮಿತೆಯ ಉಳಿವಿನ ನಿಟ್ಟಿನಲ್ಲಿ ಸಮ್ಮೇಳನವು ಅರ್ಥಪೂರ್ಣ ಹಾಗೂ ಚಾರಿತ್ರಿಕವಾಗಲಿದೆ’ ಎಂದರು.

ADVERTISEMENT

‘ವಿದ್ಯಾರ್ಥಿ ಸಮ್ಮೇಳನವು ವಿಶ್ವ ಸಮ್ಮೇಳನದ ದಿಶೆಯನ್ನು ತೋರಿಸಬೇಕು. ನಾನೂ, ಮಂಗಳೂರು ವಿಶ್ವವಿದ್ಯಾಲಯದ ಮೊದಲ ತೌಳವ ಕುಲಪತಿ, ಹೀಗಾಗಿ ನನಗೂ ಜವಾಬ್ದಾರಿ ಹೆಚ್ಚಿದ್ದು, ನಿಷ್ಠೆಯಿಂದ ನಿಭಾಯಿಸುತ್ತೇನೆ’ ಎಂದು ಭರವಸೆ ನೀಡಿದರು.

ತುಳು ಪರಿಷತ್ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ 2020ರ ಜನವರಿ 16ರಂದು ನಗರದಲ್ಲಿ ಸಮ್ಮೇಳನ ನಡೆಯಲಿದೆ. ಲಾಂಛನವನ್ನು ಮಂಗಳೂರಿನ ಸ್ವಾತಿ ಕುಮಾರ್ ರೂಪಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯರಾದ ಮಮತಾ ಗಟ್ಟಿ, ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಡಾ.ಉದಯಕುಮಾರ್ ಇರ್ವತ್ತೂರು, ತುಳು ವಿಭಾಗದ ಸಂಚಾಲಕ ಡಾ. ಮಾಧವ, ತುಳು ಪರಿಷತ್ ವಿದ್ಯಾರ್ಥಿ ಸಮ್ಮೇಳನದ ಗೌರವಾಧ್ಯಕ್ಷ ಸ್ವರ್ಣ ಸುಂದರ, ಅಧ್ಯಕ್ಷ ಡಾ. ಪ್ರಭಾಕರ ನೀರುಮಾರ್ಗ, ಪ್ರಮುಖರಾದ ಶಿವಾನಂದ ಕರ್ಕೇರ, ಸುಭೋದಯ ಆಳ್ವಾ, ತಾರನಾಥ ಕಾಪಿಕಾಡ್, ಡಾ.ವಾಸುದೇವ ಬೆಳ್ಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.