ADVERTISEMENT

ಸುಬ್ರಹ್ಮಣ್ಯ; ವಿಪತ್ತು ನಿರ್ವಹಣೆಗೆ ಸದಾ ಸಿದ್ಧ: ಡಾ.ಮುರಲೀ ಮೋಹನ್ ಚೂಂತಾರು

ಸುಬ್ರಹ್ಮಣ್ಯ ಗೃಹರಕ್ಷಕ ಘಟಕಕ್ಕೆ ಬೋಟ್ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 6:04 IST
Last Updated 7 ಜೂನ್ 2021, 6:04 IST
ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ.ಮುರಲೀ ಮೋಹನ್ ರಕ್ಷಣಾ ಸಲಕರಣೆ ಹಸ್ತಾಂತರಿಸಿದರು.
ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ.ಮುರಲೀ ಮೋಹನ್ ರಕ್ಷಣಾ ಸಲಕರಣೆ ಹಸ್ತಾಂತರಿಸಿದರು.   

ಸುಬ್ರಹ್ಮಣ್ಯ: ‘ಪ್ರತಿವರ್ಷ ಮಳೆಗಾಲ ಬಂದಾಗ ಸುಬ್ರಹ್ಮಣ್ಯದಲ್ಲಿ ಪ್ರವಾಹ ಬರುವುದು ಸಹಜ. ನೆರೆ ಬಂದಾಗ ರಕ್ಷಣಾ ಕಾರ್ಯಾಚರಣೆಗಾಗಿ ಬಳಸುವ ಉದ್ದೇಶದಿಂದ ಗೃಹರಕ್ಷಕ ದಳದಿಂದ ಗಾಳಿ ತುಂಬಿಸಿ ಚಲಾಯಿಸಬಹುದಾದ ಬೋಟ್ ಅನ್ನು ಸುಬ್ರಹ್ಮಣ್ಯದಲ್ಲೇ ಇರಿಸಿದ್ದೇವೆ’ ಎಂದು ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ.ಮುರಲೀ ಮೋಹನ್ ಚೂಂತಾರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮತ್ತು ಪೌರ ರಕ್ಷಣಾ ತಂಡದ ವತಿಯಿಂದ ಸುಬ್ರಹ್ಮಣ್ಯ ಗೃಹರಕ್ಷಕ ಘಟಕಕ್ಕೆ ರಬ್ಬರ್ ಬೋಟ್ ಹಾಗೂ ರಕ್ಷಣಾ ಸಲಕರಣೆಯನ್ನು ಸುಬ್ರಹ್ಮಣ್ಯ ಘಟಕಕ್ಕೆ ಭಾನುವಾರ ಅವರು ಹಸ್ತಾಂತರಿಸಿ ಮಾತನಾಡಿದರು. ‘ನೆರೆ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಗೃಹ ರಕ್ಷಕ ಘಟಕ ಈಗಿಂದಲೇ ಪೂರ್ವ ಸಿದ್ಧತೆ ಮಾಡಿಕೊಂಡಿದ್ದು, ಘಟಕ ಸದಾ ಸಿದ್ಧವಾಗಿದೆ’ ಎಂದು ಹೇಳಿದರು.

‘ರಬ್ಬರ್‌ ಬೋಟ್‌ನಲ್ಲಿ 10 ಜನ ಪ್ರಯಾಣಿಬಹುದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ಬೋಟ್‌ಗಳಿದ್ದು ಎರಡು ಪ್ರಧಾನ ಕಚೇರಿಯಲ್ಲಿ ಹಾಗೂ ಉಳಿದವು ಉಪ್ಪಿನಂಗಡಿ, ಮೂಲ್ಕಿ, ಬಂಟ್ವಾಳ ಘಟಕದಲ್ಲಿ ಇರಿಸಲಾಗಿದೆ. ಕಳೆದ ವರ್ಷ ಸುಬ್ರಹ್ಮಣ್ಯದಲ್ಲಿ ನೆರೆ ಬಂದು ತುಂಬಾ ಸಮಸ್ಯೆಯಾಗಿತ್ತು. ಈ ಸಂದರ್ಭದಲ್ಲಿ ಮಂಗಳೂರಿನಿಂದ ಬೋಟ್ ತಂದು ರಕ್ಷಣೆ ಕಾರ್ಯ ಕಷ್ಟವಾದ ಕಾರಣ ಜಿಲ್ಲಾಧಿಕಾರಿಯ ಆದೇಶದಂತೆ ಸುಬ್ರಹ್ಮಣ್ಯ ಗೃಹ ರಕ್ಷಕ ದಳದ ಘಟಕಕ್ಕೆ ಬೋಟ್ ಹಾಗೂ ರಕ್ಷಣಾ ಸಲಕರಣೆಗಳನ್ನು ಹಸ್ತಾಂತರ ಮಾಡುತ್ತಿದ್ದೇವೆ’ ಎಂದರು.

ADVERTISEMENT

ಘಟಕಕ್ಕೆ ನೀಡಲಾದ ಸ್ಯಾನಿಟೈಸರ್, ಗ್ಲೌಸ್, ಮಾಸ್ಕ್‌ಗಳನ್ನು ಸಿಬ್ಬಂದಿಗೆ ವಿತರಿಸಲಾಯಿತು.

ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಪಿಡಿಒ ಮುತ್ತಪ್ಪ ಡಿ, ಕಾರ್ಯದರ್ಶಿ ಮೋನಪ್ಪ, ಗ್ರಾಮಕರಣಿಕ ರಂಜನ್, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸವಿತಾ ಭಟ್, ಸದಸ್ಯರಾದ ಭಾರತಿ ದಿನೇಶ್, ಗಿರೀಶ್, ನಾರಾಯಣ ಅಗ್ರಹಾರ, ಎಚ್.ಎಲ್. ವೆಂಕಟೇಶ್, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಗೃಹರಕ್ಷಕ ದಳದ ಘಟಕಾಧಿಕಾರಿ ನಾರಾಯಣ, ಹರಿಚಂದ್ರ, ಮಂಗಳೂರು ಘಟಕ ಗೃಹರಕ್ಷಕ ದಳದ ಸಿಬಂದಿ, ಸುಬ್ರಹ್ಮಣ್ಯ ಗೃಹರಕ್ಷಕ ದಳದ ಸಿಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.