ಮಂಗಳೂರು: ನಗರದ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಅಪರೂಪದ ಹಾಗೂ ಮಾರಣಾಂತಿಕ ಕಾಯಿಲೆ ಹಿಮೊಫೀಲಿಯಾದಿಂದ ಬಳಲುತ್ತಿದ್ದ ಗರ್ಭಿಣಿಗೆ ಯಶಸ್ತಿ ಶಸ್ತ್ರಚಿಕಿತ್ಸೆ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.
ಜನಿಸಿದಾಗಲೇ ಹಿಮೊಫೀಲಿಯಾದಿಂದ ಬಳಲುತ್ತಿದ್ದ ಮಹಿಳೆ ತಮ್ಮೂರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಮದುವೆಯಾಗಿ ಗರ್ಭ ಧರಿಸಿದ ನಂತರ ಅದು ಅಪಾಯಕಾರಿ ಎಂದು ಅರಿವಾಯಿತು. ರಕ್ತಸ್ರಾವ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವ ಫ್ಯಾಕ್ಟರ್ 8ರ ಕೊರತೆ ಈ ಕಾಯಿಲೆಗೆ ಕಾರಣ. ಲಕ್ಷದಲ್ಲಿ ಒಬ್ಬರಿಗೆ ಇರುವ ಅಪರೂಪದ ಕಾಯಿಲೆ ಇದು. ಗರ್ಭಿಣಿಗೆ ಹಿಮೊಫೀಲಿಯಾ ಇದ್ದರೆ ಯಾವ ಸಂದರ್ಭದಲ್ಲೂ ರಕ್ತಸ್ರಾವ ಆಗಿ ತಾಯಿ ಸಾವಿಗೀಡಾಗುವ ಸಾಧ್ಯತೆ ಇರುತ್ತದೆ.
ಪ್ಲಾಸ್ಮಾದಿಂದ ಸಂಸ್ಕರಿಸಿ ಉತ್ಪಾದಿಸುವ ಇಂಜೆಕ್ಷನ್ ರೂಪದ ಔಷಧಿ ಮಾರುಕಟ್ಟೆಯಲ್ಲಿ ದುಬಾರಿ. ಇದನ್ನು ಕೊಟ್ಟರೂ ತಾಯಿಯ ಮರಣ ಸಾಧ್ಯತೆ ಹೆಚ್ಚು. ಇದನ್ನು ಅವರಿಗೆ ತಿಳಿಸಲಾಯಿತಾದರೂ ಸಂದಿಗ್ಧತೆಯಲ್ಲಿ ಸಿಲುಕಿದ್ದ ಆಕೆ ತನ್ನ ಬಲಿದಾನವಾದರೂ ಸರಿ, ಮಗುವಿನ ತಾಯಿಯಾಗಲೇಬೇಕು ಎಂಬ ತೀರ್ಮಾನ ಹೇಳಿದರು.
ಲೇಡೀಗೋಷನ್ ಆಸ್ಪತ್ರೆಯಲ್ಲಿ ನಿಯಮಿತವಾಗಿ ಗರ್ಭಿಣಿಯ ಪರೀಕ್ಷೆ ಮಾಡಲಾಯಿತು. ರಾಜ್ಯಮಟ್ಟದಲ್ಲಿ ಚರ್ಚಿಸಿ ನಿರೀಕ್ಷಿತ ಹೆರಿಗೆ ದಿನಾಂಕದ 20 ದಿನಗಳ ಮೊದಲು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು ಫ್ಯಾಕ್ಟರ್ 8 ಇಂಜೆಕ್ಷನ್ ಪೂರೈಕೆ ಖಾತರಿಪಡಿಸಿಕೊಂಡು ಸಿಝೇರಿಯನ್ ಮೂಲಕ ಹೆರಿಗೆ ನಡೆಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ತಿಳಿಸಿದ್ದಾರೆ.
ಕೆಎಂಸಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಅನುಪಮಾ ರಾವ್, ಡಾ.ಸಿರಿ ಗಣೇಶ್, ಡಾ.ನಮಿತಾ, ಅರಿವಳಿಕೆ ತಜ್ಞರಾದ ಡಾ.ಸುಮೇಶ್ ರಾವ್ ಹಾಗೂ ಡಾ.ರಂಜನ್ ಈ ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.