ಮಂಗಳೂರು: ಕೋವಿಡ್ -19 ಸೋಂಕು ಹರಡುವುದನ್ನು ತಡೆಗಟ್ಟಲು ಒಂದು ವಾರದ ಲಾಕ್ಡೌನ್ ವಿಧಿಸಲಾಗಿದೆ. ಈ ಲಾಕ್ಡೌನ್ ಮಧ್ಯೆ ಭಾನುವಾರದ ಸಂಪೂರ್ಣ ಲಾಕ್ಡೌನ್ ಮತ್ತಷ್ಟು ಕಟ್ಟುನಿಟ್ಟಾಗಿತ್ತು. ಜನರೇ ಸ್ವಯಂ ಪ್ರೇರಿತರಾಗಿ ಮನೆಯಲ್ಲಿಯೇ ಉಳಿದಿದ್ದು, ಭಾನುವಾರ ಬೆಳಿಗ್ಗೆಯಿಂದಲೇ ನಗರವು ಬಹುತೇಕ ಸ್ತಬ್ಧವಾಗಿತ್ತು.
ಹಾಲು, ವೈದ್ಯಕೀಯ ಸೇವೆ, ತುರ್ತು ಸೇವಾ ಕೇಂದ್ರಗಳಿಗಷ್ಟೇ ವಿನಾಯತಿ ನೀಡಲಾಗಿತ್ತು. ಉಳಿದ ಎಲ್ಲ ಅಂಗಡಿಗಳು ಬಂದ್ ಆಗಿದ್ದು, ಮಾರುಕಟ್ಟೆ ಪ್ರದೇಶಗಲ್ಲಿ ಜನರು, ವ್ಯಾಪಾರಿಗಳಿಲ್ಲದೆ ಬಿಕೋ ಎನ್ನುತ್ತಿದ್ದವು. ಬೆಳಿಗ್ಗೆ 8 ರಿಂದ 11 ಗಂಟೆಯವರೆಗೆ ಎಲ್ಲೆಡೆ ನಂದಿನಿ ಪಾರ್ಲರ್ಗಳು ತೆರೆದಿದ್ದು, ಕೆಲ ಗ್ರಾಹಕರು ಹಾಲು, ಹಾಲಿನ ಉತ್ಪನ್ನ ಖರೀದಿ ಮಾಡಿದರು.
ಒಂದು ವಾರದ ಲಾಕ್ಡೌನ್ ಇದ್ದರೂ ಬೆಳಿಗ್ಗೆ 8ರಿಂದ 11 ಗಂಟೆಯವರೆಗೆ ತರಕಾರಿ ಸೇರಿದಂತೆ ಅಗತ್ಯ ಸಾಮಗ್ರಿ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ ಭಾನುವಾರ ಇದಕ್ಕೆ ಅನುಮತಿ ಇರಲಿಲ್ಲ. ಬೆಳಿಗ್ಗೆ 11 ಗಂಟೆಯವರೆಗೆ ಹಾಲು ಖರೀದಿಗೆ ಅವಕಾಶ ನೀಡಲಾಗಿತ್ತು.
ಮಂಗಳೂರು ನಗರ ಪ್ರವೇಶಿಸಲು ನಿರ್ಬಂಧ ವಿಧಿಸಲಾಗಿದ್ದು, ನಗರದ ಹಲವೆಡೆ ನಾಕಾಬಂದಿ ಮಾಡಲಾಗಿತ್ತು. ಅನಗತ್ಯವಾಗಿ ಓಡಾಡುವವರಿಗೆ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿ, ವಾಪಸ್ ಕಳುಹಿಸಿದರು. ಭಾನುವಾರದ ಲಾಕ್ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದ್ದು, ಪೊಲೀಸ್ ಇಲಾಖೆಯಿಂದ ವಿವಿಧ ಸ್ಥಳಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ನಗರದ ಹಂಪನಕಟ್ಟೆ, ಎಂ.ಜಿ. ರಸ್ತೆ, ಪಿವಿಎಸ್ ವೃತ್ತ, ಅಂಬೇಡ್ಕರ್ ವೃತ್ತ ಸೇರಿದಂತೆ ಎಲ್ಲ ರಸ್ತೆಗಳು ಬಹುತೇಕ ಖಾಲಿಯಾಗಿದ್ದವು. ಕೆಲವೇ ಕೆಲವು ವಾಹನಗಳು ಅಲ್ಲಲ್ಲಿ ಓಡಾಡುತ್ತಿರುವುದು ಕಂಡು ಬಂತು. ಮಧ್ಯಾಹ್ನದ ನಂತರವಂತೂ ನಗರ ಸಂಪೂರ್ಣವಾಗಿ ಬಂದ್ ಆಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.