ಮಂಗಳೂರು: ಸುರತ್ಕಲ್ ಎನ್ಐಟಿಕೆಯಲ್ಲಿ ಮಂಗಳವಾರ ಬೆಳಿಗ್ಗೆ ಯೋಗ ದಿನವನ್ನು ಆಚರಿಸಲಾಯಿತು. ಯೋಗಗುರು ರಾಧೇಶ್ ಮೋಹನದಾಸ್ ಯೋಗಾಭ್ಯಾಸ ನಡೆಸಿಕೊಟ್ಟರು. ಯೋಗ ಮತ್ತು ಪಾರಂಪರಿಕ ಔಷಧಗಳ ಕುರಿತು ಡಾ. ಅರುಣ್ ಮಾಹಿತಿ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣದ ನೇರ ಪ್ರಸಾರವನ್ನು ನಿರ್ದೇಶಕರು, ರಜಿಸ್ಟ್ರಾರ್, ಡೀನ್, ಸಿಬ್ಬಂದಿ, ವಿದ್ಯಾರ್ಥಿಗಳು ವೀಕ್ಷಿಸಿದರು. 200ಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಯೋಗದಿಂದ ಜೀವನೋತ್ಸಾಹ
ಮಂಗಳೂರು: ‘ಯೋಗವು ಕೇವಲ ಆಸನಕ್ಕೆ ಸೀಮಿತವಾಗಿಲ್ಲ, ಇದರ ಹೊರತಾಗಿ ಪ್ರಾಣಾಯಾಮ-ಧ್ಯಾನ-ಪ್ರತ್ಯಾಹಾರ-ಧಾರಣ ಇತ್ಯಾದಿ ಅಷ್ಟಾಂಗ ಯೋಗವಿದೆ. ಬುದ್ಧಿಯು ಹೇಳಿರುವುದನ್ನು ಮನಸ್ಸು ಕೇಳಬೇಕಿದ್ದರೆ ಅದು ಯೋಗದಿಂದ ಮಾತ್ರ ಸಾಧ್ಯ. ಯೋಗಾಭ್ಯಾಸದಿಂದ ನಿರಂತರ ಜೀವನೋತ್ಸಾಹ ಪಡೆಯಬಹುದು ಎಂದು ಕುಂದಾಪುರದ ಪತಂಜಲಿ ಆರೋಗ್ಯಧಾಮದ ಡಾ. ಸಾತಪ್ಪ ಹೇಳಿದರು.
ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯ ಮತ್ತು ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್ ಆಶ್ರಯದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕ ದೋಮ ಚಂದ್ರಶೇಖರ್ ಮಾತನಾಡಿ, ‘ಯೋಗವು ಕಲೆ, ವಿಜ್ಞಾನ, ಅಧ್ಯಾತ್ಮ, ವ್ಯಾಯಾಮ ಇತ್ಯಾದಿ ರೂಪ ಪಡೆದಿದೆ. ಮನುಷ್ಯ ಮನಸ್ಸಿನ ಮೇಲೆ ನಿಯಂತ್ರಣ ಪಡೆಯಬೇಕಿದ್ದರೆ ಯೋಗ ಅಗತ್ಯವಿದೆ’ ಎಂದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರೆಹಮಾನ್ ಅಧ್ಯಕ್ಷತೆ ವಹಿಸಿದ್ದರು. ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಸಿದ್ದಪ್ಪ ಕೆ.ಎಸ್, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಫಿರ್ದೋಸ್, ಡಾ. ಶಮೀರ್, ಅಶ್ವಿನಿ ಉಪಸ್ಥಿತರಿದ್ದರು. ಯೋಗ ಸಂದೇಶ ಸಾರುವ ಹಣ್ಣು -ತರಕಾರಿ ಪ್ರದರ್ಶನಏರ್ಪಡಿಸಲಾಗಿತ್ತು. ಪ್ರಶಿಕ್ಷಣಾರ್ಥಿ ಸಂಧ್ಯಾ ನಿರೂಪಿಸಿದರು. ರೀಮಾ ಸ್ವಾಗತಿಸಿದರು. ಸುಧಾ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.