ಉಳ್ಳಾಲ: ‘ಮಾನವೀಯತೆಗಾಗಿ ಶಿಕ್ಷಣ ಪಡೆಯಬೇಕು. ಸಂಸ್ಥೆಯು ನೀಡಿದ ಶಿಕ್ಷಣವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು, ಮಾನವೀಯತೆಯನ್ನು ಎತ್ತಿಹಿಡಿಯುವ ಮುಖೇನ ವಿದ್ಯಾರ್ಥಿಗಳೇ ಸಂಸ್ಥೆಯ ಜಾಹೀರಾತುದಾರರಾಗಬೇಕು. ಯಶಸ್ಸಿಗೆ ಕಠಿಣ ಶ್ರಮವೊಂದು ಮಾರ್ಗ’ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಅಭಿಪ್ರಾಯಪಟ್ಟರು.
ನಾಟೆಕಲ್ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಆಡಿಟೋರಿಯಂನಲ್ಲಿ ಜರಗಿದ ಕಣಚೂರು ವೈದ್ಯಕೀಯ ಸ್ನಾತಕೋತ್ತರ ವಿಭಾಗದ ದ್ವಿತೀಯ ಬ್ಯಾಚ್ನ ಪ್ರವೇಶಾತಿ ದಿನ ಹಾಗೂ ಹೆಲ್ತ್ ಸೈನ್ಸಸ್ ಅಡ್ವೈಸರಿ ಕೌನ್ಸಿಲ್ನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
‘ಯಾವುದೇ ಸನ್ನಿವೇಶಕ್ಕೆ ತಕ್ಷಣ ಪ್ರತಿಕ್ರಿಯಿಸಬಾರದು. ಪರಾಂಬರಿಸಿ ಮುನ್ನಡೆಯುವುದೇ ಬುದ್ಧಿವಂತರ ಲಕ್ಷಣ. ಕಣಚೂರು ಸಂಸ್ಥೆಯಲ್ಲಿ ವಿದ್ಯಾರ್ಥಿನಿಯರೇ ಹೆಚ್ಚಿರುವುದರಿಂದ ಸಂಸ್ಥೆ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದೆ’ ಎಂದರು.
ಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಮಹಮ್ಮದ್ ಇಸ್ಮಾಯಿಲ್ ಹೆಜಮಾಡಿ ಮಾತನಾಡಿ, ಮಾನವೀಯತೆಯನ್ನು ಮೈಗೂಡಿಸಿಕೊಂಡು ವೈದ್ಯಕೀಯ ಬದುಕು ರೂಪಿಸಬೇಕು ಎಂದು ಸಲಹೆ ನೀಡಿದರು.
ಕಣಚೂರು ಇನ್ನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಧ್ಯಕ್ಷ ಯು.ಕಣಚೂರು ಮೋನು ಮಾತನಾಡಿ, ‘ವೈದ್ಯಕೀಯ ಕ್ಷೇತ್ರದ ಪಾದಾರ್ಪಣೆ ನನ್ನ ಕನಸಾಗಿತ್ತು. ಮಕ್ಕಳೆಲ್ಲರೂ ದೊಡ್ಡವರಾದ ನಂತರ ಅವರಿಂದ ಸಿಕ್ಕಂತಹ ಪ್ರೋತ್ಸಾಹದಿಂದ ಇಂದು ವೈದ್ಯಕೀಯ ಕಾಲೇಜು ಸ್ಥಾಪಿಸಿ, ಎರಡನೇ ವರ್ಷದ ಸ್ನಾತಕೋತ್ತರ ವಿಭಾಗವನ್ನು ಮುಂದುವರಿಸಲು ಸಾಧ್ಯವಾಗಿದೆ. ನುರಿತ ವೈದ್ಯರ ತಂಡ ವೈದ್ಯಕೀಯ ಸ್ನಾತಕೋತ್ತರ ವಿಭಾಗದಲ್ಲಿ ಕಾರ್ಯಾಚರಿಸಲಿರುವುದು ಸಂಸ್ಥೆಗೆ ಹೆಮ್ಮೆಯ ವಿಚಾರ’ ಎಂದರು.
ಕಣಚೂರು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಹರೀಶ್ ಶೆಟ್ಟಿ, ಆಡಳಿತಾಧಿಕಾರಿ ಡಾ.ರೋಹನ್ ಮೋನಿಸ್ ಇದ್ದರು.
ಕಣಚೂರು ವೈದ್ಯಕೀಯ ಕಾಲೇಜು ಡೀನ್ ಕರ್ನಲ್ ಡಾ.ಕೆ.ಜಿ ಕಿರಣ್ ಸ್ವಾಗತಿಸಿದರು. ಡಾ.ಪ್ರಿಯಾಂಕ ನಿರೂಪಿಸಿದರು.
ಕಿಮ್ಸ್ ನಿರ್ದೇಶಕ ಅಬ್ದುಲ್ ರೆಹಮಾನ್ ಕಣಚೂರು ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.