ಉಳ್ಳಾಲ: ತೊಕ್ಕೊಟ್ಟು ಬಳಿಯ ಉಳ್ಳಾಲಬೈಲಿನಲ್ಲಿ ಸೋಮವಾರ ಸಂಜೆ ಟ್ಯಾಂಕರ್ ಡಿಕ್ಕಿ ಹೊಡೆದು 5 ವರ್ಷದ ಮಗು ಗಂಭೀರವಾಗಿ ಗಾಯಗೊಂಡಿದೆ. ಗಾಯಾಳು ಮಗುವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ತರಪ್ರದೇಶದ ದಂಪತಿ ಪುತ್ರ ಕೃಷ್ಣ (5) ಗಾಯಗೊಂಡಿರುವ ಮಗು. ಪಾಲಕರ ಜೊತೆಗೆ ರಸ್ತೆ ದಾಟುವ ಸಂದರ್ಭದಲ್ಲಿ ತೊಕ್ಕೊಟ್ಟು ಕಡೆಯಿಂದ ಉಳ್ಳಾಲದತ್ತ ನೀರು ಸರಬರಾಜು ಮಾಡುತ್ತಿದ್ದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಮಗುವಿನ ಹೊಟ್ಟೆ ಹಾಗೂ ಕೈಯ ಮೇಲೆ ಟ್ಯಾಂಕರ್ ಹರಿದಿರುವುದರಿಂದ ಸ್ಥಿತಿ ಗಂಭೀರವಾಗಿದೆ. ನಾಗುರಿ ಸಂಚಾರಿ ಠಾಣಾ ಪೊಲೀಸರು ಟ್ಯಾಂಕರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ವಶಕ್ಕೆ ಪಡೆದಿದ್ದಾರೆ.
ಹೆತ್ತವರ ಕಣ್ಮುಂದೆಯೇ ಅಪಘಾತ: ಮಗು ಜೊತೆಗೆ ತಾಯಿ ಹಾಗೂ ಸಂಬಂಧಿಕರು ನಡೆದುಕೊಂಡು ಬರುವ ಸಂದರ್ಭವೇ ಅಪಘಾತ ನಡೆದಿದೆ. ಪಾಲಕರ ಕಣ್ಮುಂದೆಯೇ ಅಪಘಾತ ಸಂಭವಿಸಿದ್ದು, ಮಗುವಿನ ತಾಯಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಸ್ಥಳೀಯರು ಮಗುವಿಗೆ ನೀರು ನೀಡಿ ಕೂಡಲೇ ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.