ADVERTISEMENT

ಕಡು ಬಡತನದಲ್ಲೂ ಹೆಣ್ಣು ಮಕ್ಕಳಿಗೆ ಶಿಕ್ಷಣ: ಮನೆ ‘ಉಡುಗೊರೆ’ ನೀಡಿದ ಶಿಕ್ಷಕಿ

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಆಲೋಚನೆ, ಶಿಕ್ಷಕಿ ಗೀತಾಮಣಿ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 4:12 IST
Last Updated 28 ಜೂನ್ 2022, 4:12 IST
ಪುತ್ತೂರಿನ ತಾಲ್ಲೂಕಿನ ಕೊಡಿಪ್ಪಾಡಿ ಗ್ರಾಮದ ಪೆರಿಯತ್ತೋಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮನೆ
ಪುತ್ತೂರಿನ ತಾಲ್ಲೂಕಿನ ಕೊಡಿಪ್ಪಾಡಿ ಗ್ರಾಮದ ಪೆರಿಯತ್ತೋಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮನೆ   

ಪುತ್ತೂರು (ದಕ್ಷಿಣ ಕನ್ನಡ): ಸಂಕಷ್ಟದಲ್ಲಿದ್ದ ಬಡ ವಿದ್ಯಾರ್ಥಿನಿಗೆ ದಾನಿಗಳ ನೆರವಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಕಿಯೊಬ್ಬರು ಮನೆ ನಿರ್ಮಿಸಿಕೊಟ್ಟಿದ್ದು, ಜುಲೈ 1ರಂದು ಅದರ ಹಸ್ತಾಂತರ ನಡೆಯಲಿದೆ.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯಾಗಿದ್ದ ಅನಿತಾ, ತಾಲ್ಲೂಕಿನ ಕೊಡಿ ಪ್ಪಾಡಿ ಗ್ರಾಮದ ಪೆರಿಯತ್ತೋಡಿಯಲ್ಲಿ ಮಣ್ಣಿನಗೋಡೆ, ಟಾರ್ಪಲ್ಹೊದಿಕೆ, ಸೀರೆಯನ್ನೇ ಅಡ್ಡಲಾಗಿ ಕಟ್ಟಿದ್ದ ಶಿಥಿಲ ಗೊಂಡ ಮನೆಯಲ್ಲಿ ವಾಸವಿದ್ದಳು.

ಅನಿತಾ ಅವರ ತಾಯಿ ಸುನಂದಾ, ಕೂಲಿ ಮಾಡಿ ತನ್ನಿಬ್ಬರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದು, ಹಿರಿಯ ಪುತ್ರಿ ಲಾವಣ್ಯ ಪದವಿಯಲ್ಲಿ ಓದುತ್ತಿದ್ದಾರೆ.

ADVERTISEMENT

ಭೇಟಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ ಸಿ. ಹಾಗೂ ಶಾಲೆಯ ಶಿಕ್ಷಕರು ಅನಿತಾ ಮನೆಗೆ ಭೇಟಿ ನೀಡಿದ್ದರು. ಕಿತ್ತು ತಿನ್ನುವ ಬಡತನದಲ್ಲೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿರುವ ತಾಯಿ ಸುನಂದಾ ಅವರ ಛಲ ಕಂಡ ಕ್ಷೇತ್ರ ಶಿಕ್ಷಣಾಧಿಕಾರಿ, ಈ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಬಗ್ಗೆ ಪ್ರೌಢ ಶಾಲೆಯ ಶಿಕ್ಷಕಿ ಗೀತಾಮಣಿ ಜೊತೆ ಚರ್ಚಿಸಿದ್ದರು.

ಗೀತಾಮಣಿ ಅವರು ಸಂಘ ಸಂಸ್ಥೆ ಗಳ ಸಹಾಯ ಯಾಚಿಸುವ ಮೂಲಕ ಕಾರ್ಯ ಪ್ರವೃತ್ತರಾಗಿದರು. ಪುತ್ತೂರಿನ ರೋಟರಿ ಸಂಸ್ಥೆ ಹಾಗೂ ದಾನಿಗಳು ಕೈ ಜೋಡಿಸಿದರು. ನಗರಸಭೆ ಹಾಗೂ ಪ್ರಮುಖರು ಸಹಕರಿಸಿದರು. ₹6 ಲಕ್ಷ ವೆಚ್ಚದಲ್ಲಿ 750 ಚದರ ಅಡಿಯ ಆರ್‌ಸಿಸಿ ಮನೆ ನಿರ್ಮಾಣವು ಅಂತಿಮ ಹಂತಕ್ಕೆ ಬಂದಿದೆ.

ಇನ್ನರ್‌ವೀಲ್ ಕ್ಲಬ್ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ವಿವೇಕಾನಂದ ಕಾಲೇಜಿನ ಎನ್‌ಎಸ್‌ಎಸ್‌ ವಿದ್ಯಾರ್ಥಿ ಗಳು ಶ್ರಮದಾನದ ಮೂಲಕ ಸಹಕರಿಸಿ ದರು. ಪುತ್ತೂರು ಸೇಂಟ್‌ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘವು ಶೌಚಾಲಯ, ಸ್ನಾನಗೃಹದ ಜತೆಗೆ ಶೆಡ್ ನಿರ್ಮಿಸಲು ಮುಂದೆ ಬಂದಿದೆ.

ಅನಿತಾ ಎಸ್ಸೆಸ್ಸೆಲ್ಸಿಯಲ್ಲಿ 568 ಅಂಕ ಪಡೆದಿದ್ದು, ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದಾರೆ.

ಅನಿತಾ ಕುಟುಂಬದ ಸ್ಥಿತಿ ತೀರಾ ಶೋಚನೀಯವಾಗಿತ್ತು. ನಾವು ಕುಟುಂಬಕ್ಕೆ ಸೂರು ಒದಗಿಸುವ ಪ್ರಯತ್ನಕ್ಕಿಳಿದಿದ್ದೆವು. ಎಲ್ಲರೂ ಸಹಕರಿಸಿದರು.

- ಗೀತಾಮಣಿ,‌ ಶಿಕ್ಷಕಿ, ಕೊಂಬೆಟ್ಟು ಪ್ರೌಢಶಾಲೆ

ಅನಿತಾ ಮನೆಯ ಸ್ಥಿತಿ ಕಂಡು, ಮನೆ ನಿರ್ಮಿಸುವ ಬಗ್ಗೆ ಶಿಕ್ಷಕಿ ಗೀತಾಮಣಿ ಅವರಲ್ಲಿ ಹೇಳಿದ್ದೆ. ಅವರು ಕಾರ್ಯಗತಗೊಳಿಸಿದರು.

- ಲೋಕೇಶ್ ಸಿ., ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.