ADVERTISEMENT

ಪ್ರಿಯಕರ ಕಾಟಕ್ಕೆ ನಾಟಕವಾಡಿದ್ದ ಮಹಿಳೆ

ವಿಟ್ಲ ದರೋಡೆ ಪ್ರಕರಣ ಬೇಧಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 5:18 IST
Last Updated 6 ಜನವರಿ 2021, 5:18 IST

ವಿಟ್ಲ: ಮನೆಯಲ್ಲಿ ಯಾರೂ ಇಲ್ಲದಾಗ ದುಷ್ಕರ್ಮಿಗಳು ಕಟ್ಟಿ ಹಾಕಿ ದರೋಡೆ ನಡೆಸಿದರು ಎಂದು ಮಹಿಳೆಯೊಬ್ಬರು ನಾಟಕವಾಡಿದ ಪ್ರಕರಣವನ್ನು ಬೇಧಿಸುವಲ್ಲಿ ವಿಟ್ಲ ಪೊಲೀಸ್ ತಂಡ ಯಶಸ್ವಿಯಾಗಿದೆ.

ಆಟೋ ಚಾಲಕ ರಫೀಕ್ ಹಾಗೂ ಆತನ ಪುತ್ರ ಮಧ್ಯಾಹ್ನ ನಮಾಜಿಗೆ ತೆರಳಿದ್ದ ಸಂದರ್ಭದಲ್ಲಿ, ಮನೆಯೊಳಗೆ ನುಗ್ಗಿ ವ್ಯಕ್ತಿಯೊಬ್ಬ ಜೈನಾಬಿಯನ್ನು ಕಟ್ಟಿ ಹಾಕಿ, ಮೈಮೇಲಿದ್ದ ಕಿವಿಯೊಲೆ, ಉಂಗುರ, ಹಾಗೂ ಚೈನ್ ಕಿತ್ತುಕೊಂಡು ಮುಂಬಾಗಿಲಿನ ಚಿಲಕ ಹಾಕಿ ಹಿಂಬದಿ ಬಾಗಿಲಿನಿಂದ ಪರಾರಿಯಾಗಿದ್ದಾನೆ ಎಂದು ಜೈನಾಬಿ ದೂರಿನಲ್ಲಿ ವಿವರಿಸಿದ್ದಳು.

ಈ ಸಂದರ್ಭದಲ್ಲಿ ಮಹಿಳೆಯೇ ಚಿನ್ನವನ್ನು ಬೇರೆಡೆಗೆ ಸಾಗಿಸಿದ್ದು ಬೆಳಕಿಗೆ ಬಂದಿದೆ. ಮನೆಯ ಪಕ್ಕದಲ್ಲಿ ವಾಸವಿರುವ ಪ್ರಿಯಕರನ ಕಾಟಕ್ಕೆ ಬಾಡಿಗೆ ಮನೆ ಬದಲಿಸುವ ನಿರ್ಧಾರಕ್ಕೆ ಬಂದಿದ್ದು, ಯಾವ ರೀತಿಯಿಂದ ಹೇಳಿದರೂ, ಒಪ್ಪದಿದ್ದಾಗ ದರೋಡೆಯ ನಾಟಕಕ್ಕೆ ಮುಂದಾಗಿದ್ದಳು ಎನ್ನಲಾಗಿದೆ.

ADVERTISEMENT

ಬಂಟ್ವಾಳ ಡಿವೈಎಸ್ಪಿ ವೆಲೆಂಟನ್ ಡಿಸೋಜ್ ಮಾರ್ಗದರ್ಶನದಲ್ಲಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಡಿ.ನಾಗರಾಜ್ ನೇತೃತ್ವದಲ್ಲಿ ವಿಟ್ಲ ಠಾಣಾ ಸಬ್‌ ಇನ್‌ಸ್ಪೆಕ್ಟರ್‌ ವಿನೋದ್ ರೆಡ್ಡಿ, ಸಿಬ್ಬಂದಿ ಪ್ರಸನ್ನ, ಜಯಕುಮಾರ್, ಪ್ರತಾಪ, ವಿನಾಯಕ, ಹೇಮರಾಜ್ ಅವರ ತಂಡ ಕಾರ್ಯಾಚರಣೆ ನಡೆಸಿ, ಚಿನ್ನವನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಪೊಲೀಸ್ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಭಯಗೊಂಡ ಮಹಿಳೆ, ಅದನ್ನು ಬೇರೆಡೆಗೆ ತೆಗೆದುಕೊಂಡು ಹೋಗಿ ಎಸೆದಿದ್ದಾಳೆ ಎನ್ನಲಾಗಿದೆ. ಆಕೆಯ ಪ್ರಿಯಕರನ ತನಿಖೆಯ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಭಾಗಶಃ ಬಂಗಾರವನ್ನು ವಶಕ್ಕೆ ಪಡೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.