ಸುರತ್ಕಲ್: ‘ಸಂಸದ ನಳಿನ್ ಕುಮಾರ್ ಕಟೀಲ್ ಈವರೆಗೆ ನೀಡಿದ ಭರವಸೆಗಳು ಯಾವುದೂ ಈಡೇರಿಲ್ಲ. ಸುರತ್ಕಲ್ ಟೋಲ್ಗೇಟ್ ವಿರುದ್ಧದ ಹೋರಾಟ, ಮಾತು ತಪ್ಪಿದ ಸಂಸದರಿಗೆ ಜನರಿಗೆ ಮುಖ ತೋರಿಸಲಾಗದ ಸ್ಥಿತಿ ನಿರ್ಮಾಣಗೊಂಡಿದೆ. ಜನರ ಆಕ್ರೋಶ, ಕಪ್ಪು ಬಾವುಟಗಳಿಗೆ ಹೆದರಿ ಅವರು 10 ದಿನಗಳ ಅಜ್ಞಾತ ವಾಸಕ್ಕೆ ತೆರಳಿದ್ದಾರೆ’ ಎಂದು ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಟೀಕಿಸಿದ್ದಾರೆ.
ಸುರತ್ಕಲ್ ಟೋಲ್ಗೇಟ್ ತೆರವಿಗಾಗಿ ನಡೆಯುತ್ತಿರುವ ಹಗಲು ರಾತ್ರಿ ಧರಣಿಯ 11ನೇ ದಿನವಾದ ಸೋಮವಾರ ಕಪ್ಪುಬಟ್ಟೆ ಧರಿಸಿ, ಕಪ್ಪು ಬಾವುಟ ಪ್ರದರ್ಶಿಸಿ ನಡೆಸಿದ ಧರಣಿಯಲ್ಲಿ ಅವರು ಮಾತನಾಡಿದರು. ₹ 2,000ಕ್ಕೆ ಒಂದು ಲೋಡ್ ಮರಳು ಒದಗಿಸುವ, ಜಿಲ್ಲೆಯ ಜನರಿಗೆ ಎಂಆರ್ಪಿಎಲ್, ಎಸ್ಇಝಡ್ ಮುಂತಾದ ಉದ್ಯಮಗಳಲ್ಲಿ ಕಡ್ಡಾಯ ಉದ್ಯೋಗ ಒದಗಿಸುವ ಮಾತು ನೀಡಿ ಒಂದನ್ನೂ ಈಡೇರಿಸಿಲ್ಲ ಎಂದು ದೂರಿದರು.
‘ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಸದನದಲ್ಲಿ ನೀಡಿದ ಭರವಸೆಯನ್ನು ಈಡೇರಿಸಲಾಗದೆ, ಕಾಪು ತಲುಪಲು ಹೆಲಿಕಾಪ್ಟರ್ ಮೂಲಕ ಆಕಾಶ ಮಾರ್ಗ ಬಳಸಿರುವುದರ ಹಿಂದಿನ ಉದ್ದೇಶ ಹೋರಾಟಗಾರರನ್ನು ಎದುರಿಸಲಾಗದೆ ತಪ್ಪಿಸಿಕೊಳ್ಳಲು ಆರಿಸಿದ ಮಾರ್ಗ ಎಂದರೆ ಸುಳ್ಳಾಗದು. ಈ ಬಿಜೆಪಿ ಸರ್ಕಾರಕ್ಕೆ ಜನರ ಕನಿಷ್ಠ ಬೇಡಿಕೆಗಳನ್ನೇ ಈಡೇರಿಸಲಾಗುತ್ತಿಲ್ಲ’ ಎಂದು ಹೇಳಿದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಸಿಪಿಎಂ ಮುಖಂಡರಾದ ಸುಕುಮಾರ್ ತೊಕ್ಕೊಟ್ಟು, ವಕೀಲರಾದ ಎಸ್ ಬಾಲನ್, ದಿನೇಶ್ ಹೆಗ್ಡೆ ಉಳೇಪಾಡಿ ಮಾತನಾಡಿದರು.
ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಯಾದವ ಶೆಟ್ಟಿ, ಮಾಜಿ ಉಪಮೇಯರ್ ಮಹಮ್ಮದ್ ಕುಂಜತ್ತಬೈಲ್, ದಿನೇಶ್ ಕುಂಪಲ, ಇಂಟೆಕ್ ಮುಖಂಡ ಸದಾಶಿವ ಶೆಟ್ಟಿ, ಶ್ರೀನಾಥ್ ಕುಲಾಲ್, ಆಯಾಝ್ ಕೃಷ್ಣಾಪುರ, ಸಿಪಿಎಂ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್, ಜಯಂತ ನಾಯ್ಕ್, ಮಹಾಬಲ ದೆಪ್ಪೆಲಿಮಾರ್, ಶೇಖರ ಕುಂದರ್, ಡಿವೈಎಫ್ಐ ಮುಖಂಡರಾದ ಬಿ.ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಸಂಕೇತ್ ಕುತ್ತಾರ್, ಕಾಂಗ್ರೆಸ್ ಮುಖಂಡರಾದ ಯೋಗೀಶ್ ನಾಯಕ್, ಶಾಹುಲ್ ಹಮೀದ್, ಬಶೀರ್ ಕುಳಾಯಿ, ಪ್ರಮೀಳಾ ದೇವಾಡಿಗ, ಹುಸೈನ್ ಕಾಟಿಪಳ್ಳ, ರಮೇಶ್ ಉಳ್ಳಾಲ್, ವಿದ್ಯಾರ್ಥಿ ಮುಖಂಡರಾದ ವಿನಿತ್ ದೇವಾಡಿಗ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.