ADVERTISEMENT

‘ಪ್ರಾದೇಶಿಕ ಭಾಷೆಯ ಸಿನಿಮಾ ಪ್ರೋತ್ಸಾಹಿಸಿ’

ಕರಾವಳಿಯಾದ್ಯಂತ ‘ರಡ್ಡ್ ಎಕ್ರೆ’ ತುಳು ಸಿನಿಮಾ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 15:41 IST
Last Updated 10 ಜನವರಿ 2020, 15:41 IST

ಮಂಗಳೂರು: ಒನ್‌ಲೈನ್ ಸಿನಿಮಾ ಲಾಂಛನದಲ್ಲಿ ಸಂದೇಶ್ ರಾಜ್ ಬಂಗೇರ, ರೋಹನ್ ಕೋಡಿಕಲ್ ನಿರ್ಮಾಣದಲ್ಲಿ, ವಿಸ್ಮಯ ವಿನಾಯಕ್ ನಿರ್ದೇಶನದಲ್ಲಿ ತಯಾರಾದ ‘ರಡ್ಡ್ ಎಕ್ರೆ’ ತುಳು ಸಿನಿಮಾ ನಗರದ ಭಾರತ್ ಮಾಲ್‌ನ್ ಬಿಗ್ ಸಿನಿಮಾಸ್‌ನಲ್ಲಿ ಶುಕ್ರವಾರ ಬಿಡುಗಡೆಗೊಂಡಿತು.

ಉದ್ಘಾಟಿಸಿದ ಶ್ರೀನಿವಾಸ ಯುನಿರ್ವಸಿಟಿಯ ಕುಲಾಧಿಪತಿ ರಾಘವೇಂದ್ರ ರಾವ್ ಮಾತನಾಡಿ, ‘ರಡ್ಡ್ ಎಕ್ರೆ’ ಸಿನಿಮಾದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಲಿ. ಪ್ರಾದೇಶಿಕ ಭಾಷೆಯಲ್ಲಿ ಬರುತ್ತಿರುವ ಸಿನಿಮಾಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ನಿರ್ಮಾಪಕ, ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ, ‘ರಡ್ಡ್ ಎಕ್ರೆ’ ಸಿನಿಮಾ ಉತ್ತಮ ಹಾಸ್ಯ ಮತ್ತು ಒಳ್ಳೆಯ ಕತೆಯನ್ನು ಒಳಗೊಂಡಿದ್ದು, ಸಿನಿಮಾ ಪ್ರೇಕ್ಷಕರ ಇಂದಿನ ಸ್ಥಿತಿಗತಿಗೆ ಹತ್ತಿರವಾಗಿದೆ. ಹೀಗಾಗಿ ಸಿನಿಮಾವನ್ನು ಪ್ರೇಕ್ಷಕರು ಹೆಚ್ಚು ಇಷ್ಟ ಪಡುತ್ತಾರೆ ಎಂದರು.

ADVERTISEMENT

ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಸತೀಶ್ ಆಚಾರ್ಯ, ನಿರ್ಮಾಪಕರಾದ ಸಂದೇಶ್ ರಾಜ್ ಬಂಗೇರ, ರೋಹನ್ ಕೋಡಿಕಲ್, ನಿರ್ದೇಶಕ ವಿಸ್ಮಯ ವಿನಾಯಕ್, ರಾಕೇಶ್ ಕದ್ರಿ, ಮೈಮ್ ರಾಮದಾಸ್, ಮಂಜು ರೈ, ಸಂಗೀತ ನಿರ್ದೇಶಕ ಕಿಶೋರ್ ಕುಮಾರ್ ಶೆಟ್ಟಿ, ನಿರೀಕ್ಷಾ ಶೆಟ್ಟಿ ಉಪಸ್ಥಿತರಿದ್ದರು. ಆರ್.ಜೆ.ಅರ್ಪಿತ್ ನಿರೂಪಿಸಿದರು.

‘ರಡ್ಡ್ ಎಕ್ರೆ’ ಸಿನಿಮಾ ಉತ್ತಮ ಹಾಸ್ಯ, ಮನರಂಜನೆಯನ್ನು ಒಳಗೊಂಡಿದ್ದು, ಮಂಗಳೂರಿನಲ್ಲಿ ಬಿಗ್ ಸಿನಿಮಾಸ್, ಪಿವಿಆರ್, ಸಿನಿಪೊಲೀಸ್, ಉಡುಪಿಯಲ್ಲಿ ಅಲಂಕಾರ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಅರುಣಾ, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರದಲ್ಲಿ ತೆರೆಕಂಡಿದೆ.

ತಾರಾಗಣದಲ್ಲಿ ಪೃಥ್ವಿ ಅಂಬಾರ್, ನಿರೀಕ್ಷಾ ಶೆಟ್ಟಿ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ್, ಮೈಮ್ ರಾಮದಾಸ್, ಉಮೇಶ್ ಮಿಜಾರ್, ದೀಪಕ್ ರೈ ಪಾಣಾಜೆ, ಮಂಜು ರೈ ಮುಳೂರು ಅಭಿನಯಿಸಿದ್ದಾರೆ.

ಅಣ್ಣ ತಮ್ಮಂದಿರು ತಂದೆಯಿಂದ ದೊರೆತ ಆಸ್ತಿಯನ್ನು ಡೀಲ್ ಮಾಡುವ ಹಾಸ್ಯ ಕಥೆಯನ್ನು ಆಧರಿತ ‘ರಡ್ಡ್ ಎಕ್ರೆ’ ಸಿನಿಮಾ ಎರಡು ಗಂಟೆಗಳ ಕಾಲ ಪ್ರೇಕ್ಷಕರಿಗೆ ರಸದೌತಣ ನೀಡುತ್ತಿದೆ ಎಂದು ನಿರ್ದೇಶಕ ವಿಸ್ಮಯ್‌ ವಿನಾಯಕ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.