ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಗೀತೆ ರಚನೆಕಾರ, ಸಾಹಿತಿ ಎಂ.ಕೆ. ಸೀತಾರಾಮ್ ಕುಲಾಲ್ (78) ಭಾನುವಾರ ನಿಧನರಾದರು.
ನಗರದ ಬಿಜೈ ಕಾಪಿಕ್ಕಾಡ್ ನಿವಾಸಿಯಾಗಿದ್ದ ಅವರು, ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಪತ್ನಿ ಶುಭಾ ಇದ್ದಾರೆ.
1940ರ ಅಕ್ಟೋಬರ್ 17ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕೊಲ್ನಾಡ್ ಗ್ರಾಮದ ಎಂ. ಕಾಂತಪ್ಪ ಮಾಸ್ತರ್ ಮತ್ತು ದೇವಕಿ ದಂಪತಿಯ ಪುತ್ರನಾಗಿ ಜನಿಸಿದ್ದು, ಮೆಟ್ರಿಕ್ ಶಿಕ್ಷಣ ಪೂರೈಸಿದ್ದರು. ಅನಂತರ ಯುನೈಟೆಡ್ ಇನ್ಶೂರೆನ್ಸ್ ಕಂಪೆನಿಯಲ್ಲಿ ಅಧಿಕಾರಿಯಾಗಿದ್ದರು. 2005ರ ಮಾರ್ಚ್ 22ರಿಂದ 2008ರ ಮಾರ್ಚ್ 31ರ ತನಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು.
1970ರ ದಶಕದಲ್ಲಿ ತುಳು ಸಿನಿಮಾಗಳಿಗೆ ಗೀತೆಗಳನ್ನು ಬರೆದಿದ್ದು, ಪಿ.ಬಿ.ಶ್ರೀನಿವಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಜೇಸುದಾಸ್, ಎಸ್.ಜಾನಕಿ ಕಂಠಸಿರಿಯಲ್ಲಿ ಖ್ಯಾತಿ ಪಡೆದಿದ್ದವು. 1973ರಲ್ಲಿ ತೆರೆಕಂಡ ‘ಉಡಲ್ದ ತುಡರ್’ ಚಿತ್ರಕಥೆಗೆ ಪ್ರಶಸ್ತಿ ಪಡೆದಿದ್ದರು. ಕನ್ನಡ–ತುಳು ಸಿನಿಮಾ ಮತ್ತು ನಾಟಕಗಳಿಗೆ 350ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದರು. 69 ನಾಟಕ ಹಾಗೂ ಸಿನಿಮಾಗಳಿಗೆ (ಗೀತೆ, ಕಥೆ, ಚಿತ್ರಕತೆ, ಸಂಭಾಷಣೆ) ಸಾಹಿತ್ಯಿಕ ಕೊಡುಗೆ ನೀಡಿದ್ದರು. ‘ಮಣ್ಣ್ ದ ಮಗಲ್ ಅಬ್ಬಕ್ಕ‘ ಮತ್ತು ‘ಧರ್ಮೊಗು ಧರ್ಮದ ಸವಾಲ್’ ಅವರ ಕೃತಿಗಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.