ಪುತ್ತೂರು: ನಗರದ ಬೈಪಾಸ್ ರಸ್ತೆಯಲ್ಲಿ ಶನಿವಾರ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಅಕ್ರಮ ಸಾಗಣೆ ಮಾಡುತ್ತಿದ್ದ 2 ಆನೆದಂತಗಳನ್ನು ವಶಪಡಿಸಿಕೊಂಡಿದ್ದು, ಸಾಗಾಟಕ್ಕೆ ಬಳಸಿದ ಕಾರಿನ ಸಹಿತ ಆರು ಮಂದಿಯನ್ನು ಬಂಧಿಸಿದ್ದಾರೆ.
ತಮಿಳುನಾಡಿನ ತಿರುಕಿಲ್ಕೊಂಟ್ರ ತಾಲ್ಲೂಕಿನ ಸತೀಶ್(30), ಕೊಯಮತ್ತೂರು ಪೊಲ್ಲಟ್ಟಿ ತಾಲ್ಲೂಕಿನ ಶಶಿಕುಮಾರ್ (35), ಸಂಪತ್ ಕುಮಾರ್(33) ಮತ್ತು ವಿಘ್ನೇಶ್ (34) ಕೇರಳದ ಕೋಯಿಕ್ಕೋಡು ಜಿಲ್ಲೆಯ ಕೊಡುಮ ತಾಲ್ಲೂಕಿನ ವಿನೀತ್ (35), ತಿರುವನಂತಪುರದ ಮಗವೂರು ಕರಿಪುರದ ರತೀಶ್ ನಾಯರ್ (35) ಬಂಧಿತರು.
ಆರೋಪಿಗಳು ಕೇರಳ ಕಡೆಯಿಂದ ಪೆರ್ಲ ಪಾಣಾಜೆ ರಸ್ತೆಯಾಗಿ ಪುತ್ತೂರಿಗೆ ಬಂದು ಮಂಗಳೂರು ಕಡೆಗೆ ತೆರಳುತ್ತಿದ್ದರು.
ಅರಣ್ಯ ಇಲಾಖೆಯ ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್.ಬಿ.ಎಂ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಲೋಕೇಶ್.ಎಸ್.ಎನ್, ಶಿವಾನಂದ ಆಚಾರ್ಯ, ಬಿ.ಟಿ.ಪ್ರಕಾಶ್, ಕುಮಾರ ಸ್ವಾಮಿ, ಮೆಹಬೂಬಸಾಬ್, ಪ್ರಸಾದ್ ಕೆ.ಜಿ, ಅರಣ್ಯ ರಕ್ಷಕರಾದ ನಿಂಗರಾಜ್, ಸುಧೀರ್, ಸತ್ಯನ್, ದೀಪಕ್, ಉಮೇಶ್, ಚಾಲಕರಾದ ಜಗದೀಶ್ ಮತ್ತು ರೋಹಿತ್ ಹಾಗೂ ಶೇಖರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸಾಲೆತ್ತೂರು: ಹಲ್ಲೆ
ವಿಟ್ಲ: ಬಜರಂಗದಳದ ವಿಟ್ಲ ಪ್ರಖಂಡ ಸಂಚಾಲಕ ಚಂದ್ರಹಾಸ ಕನ್ಯಾನ ಅವರಿಗೆ ಅದೇ ಸಂಘಟನೆಯ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಸಾಲೆತ್ತೂರಿನಲ್ಲಿ ನಡೆದಿದೆ.
ಮಾರಕಾಸ್ತ್ರಗಳೊಂದಿಗೆ ಬಂದ 12 ಮಂದಿಯ ತಂಡವು ಚಂದ್ರಹಾಸ್ ಮೇಲೆ ಹಲ್ಲೆ ನಡೆಸಿದೆ. ಗಾಯಗೊಂಡ ಅವರು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.