ADVERTISEMENT

ಪ್ರತ್ಯೇಕ ಪ್ರಕರಣ: ಇಬ್ಬರು ಯುವಕರ ಕೊಲೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 11:28 IST
Last Updated 30 ನವೆಂಬರ್ 2019, 11:28 IST

ಮಂಗಳೂರು: ನಗರದ ಹೊರವಲಯದ ಉಳ್ಳಾಲ ಮತ್ತು ಸುರತ್ಕಲ್‌ಗಳಲ್ಲಿ ಶುಕ್ರವಾರ ತಡರಾತ್ರಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಯುವಕರನ್ನು ಕೊಲೆ ಮಾಡಲಾಗಿದೆ. ಸುರತ್ಕಲ್‌ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಉಳ್ಳಾಲದ ತೊಕ್ಕೊಟ್ಟು ಕಾಪಿಕಾಡು ಸಮೀಪ ರೈಲ್ವೆ ಹಳಿಯ ಪಕ್ಕದಲ್ಲೇ ಕೇರಳದ ಕಾಸರಗೋಡು ಜಿಲ್ಲೆಯ ಪುತ್ತಿಗೆ ನಿವಾಸಿ ಸುದರ್ಶನ್‌ ಸಿ.ಎಚ್‌. (20) ಎಂಬ ಯುವಕನನ್ನು ರಾತ್ರಿ ಮಾರಕಾಸ್ತ್ರಗಳಿಂದ ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ.

ರೌಡಿಶೀಟರ್‌ ಡಿ.ಕೆ.ರಕ್ಷಿತ್‌ ಮತ್ತು ಸಹಚರರು ವೈಯಕ್ತಿಕ ದ್ವೇಷದಿಂದ ಸುದರ್ಶನ್‌ನನ್ನು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಮೃತನ ತಂದೆ ಆನಂದ ಶರ್ಮ ನೀಡಿರುವ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ADVERTISEMENT

ಮದ್ಯದಂಗಡಿಯಲ್ಲಿ ಕೊಲೆ: ಸುರತ್ಕಲ್‌ನ ಜೀವನ್‌ ತಾರಾ ಎಂಬ ವೈನ್‌ ಶಾಪ್‌ನಲ್ಲಿ ಸಮೀಪದ ಗುಡ್ಡೆಕೊಪ್ಲ ನಿವಾಸಿ ಸಂದೇಶ್‌ ಎಂಬಾತನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಮದ್ಯದ ಅಮಲಿನಲ್ಲಿ ಸ್ನೇಹಿತರ ನಡುವೆ ಜಗಳ ನಡೆದಿದ್ದು, ಆಗ ರಾಜಾ, ಗಣೇಶ್‌ ಮತ್ತು ಸುಹೈಲ್‌ ಎಂಬುವವರು ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಹೈಲ್‌ ಮತ್ತು ರಾಜಾ ಅಲಿಯಾಸ್‌ ರಾಘವೇಂದ್ರ ಎಂಬುವವರನ್ನು ಬಂಧಿಸಲಾಗಿದೆ. ಗಣೇಶ್‌ ಪತ್ತೆಗೆ ಶೋಧ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.