ADVERTISEMENT

ಉಳ್ಳಾಲ ಉರುಸ್‌ 24ರಿಂದ: ನಿತ್ಯ ಒಂದು ಲಕ್ಷ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 13:58 IST
Last Updated 22 ಏಪ್ರಿಲ್ 2025, 13:58 IST
ಉಳ್ಳಾಲ ದರ್ಗಾ:  ಪ್ರಜಾವಾಣಿ ಚಿತ್ರ
ಉಳ್ಳಾಲ ದರ್ಗಾ:  ಪ್ರಜಾವಾಣಿ ಚಿತ್ರ   

ಮಂಗಳೂರು: ‘ದಕ್ಷಿಣ ಭಾರತದ ಅಜ್ಮೀರ್’ ಎಂದು ಪ್ರಸಿದ್ಧವಾಗಿರುವ ಉಳ್ಳಾಲ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾದ 432ನೇ ವಾರ್ಷಿಕ ಉರುಸ್  ಇದೇ 24ರಿಂದ ಮೇ 18ವರೆಗೆ ಜರುಗಲಿದೆ.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ದರ್ಗಾ ಸಮಿತಿ ಅಧ್ಯಕ್ಷ ಹನೀಫ್ ಹಾಜಿ ಅವರು, ಖಾಝಿ ಸುಲ್ತಾನ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ನೇತೃತ್ವ ವಹಿಸಲಿದ್ದು, 24ರಂದು ಅಸರ್ ನಮಾಜ್‌ ಬಳಿಕ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉರೂಸ್‌ ಉದ್ಘಾಟಿಸುವರು. ವಾರ್ಷಿಕ ದ್ಸಿಕ್ರ್ ನಡೆಯಲಿದ್ದು, ದರ್ಗಾ ಝಿಯಾರತ್ ನೇತೃತ್ವವನ್ನು ಸಯ್ಯೀದ್ ಆಟಕೋಯ ತಂಙಳ್ ವಹಿಸುವರು ಎಂದು ಹೇಳಿದರು.

ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ದುಆ ನೆರವೇರಿಸುವರು. ಸಯ್ಯಿದ್ ಅಲಿ ಬಾಫಕಿ ತಂಙಳ್, ಇಬ್ರಾಹಿಂ ಖಲೀಲ್ ತಂಙಳ್ ಕಡಲುಂಡಿ, ಉಡುಪಿ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಶರೀಯತ್ ಕಾಲೇಜು ಪ್ರಾಂಶುಪಾಲ ಪ್ರೊ.ಅಹ್ಮದ್ ಕುಟ್ಟಿ ಸಖಾಫಿ, ಅತ್ತಾವುಲ್ಲ ತಂಙಳ್ ಉದ್ಯಾವರ, ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ವಸತಿ ಸಚಿವ ಜಮೀರ್ ಅಹಮ್ಮದ್, ಯೆನೆಪೋಯ ಅಬ್ದುಲ್ಲಾ ಕುಂಞಿ, ಬಿ.ಎಂ. ಫಾರೂಕ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮತ್ತಿತರರು ಭಾಗವಹಿಸುವರು ಎಂದರು.

ADVERTISEMENT

25ರಿಂದ ಮೇ 14ವರೆಗೆ ಧಾರ್ಮಿಕ ಮುಖಂಡರು ಉಪನ್ಯಾಸ ನೀಡುವರು. ಮೇ 15ರಂದು ಬೆಳಿಗ್ಗೆ 10ಕ್ಕೆ ಅಲ್ ಕನಫ್ ಓಲ್ಡ್ ಸ್ಟೂಡೆಂಟ್ ಸಮ್ಮಿಟ್, ಮಧ್ಯಾಹ್ನ 2ಕ್ಕೆ ಸನದುದಾನ ಮಹಾ ಸಮ್ಮೇಳನ, ರಾತ್ರಿ ಧಾರ್ಮಿಕ ಉಪನ್ಯಾಸ ಸಮಾರೋಪ ನಡೆಯಲಿದೆ. 16ರಂದು ಬೆಳಿಗ್ಗೆ 10ಕ್ಕೆ ಸೆಯ್ಯದ್ ಮದನಿ ಗ್ರ್ಯಾಂಡ್ ಮಸೀದಿಗೆ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಶಿಲಾನ್ಯಾಸ ನೆರವೇರಿಸುವರು. ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಾಮಾಜಿಕ ಸಮಾವೇಶ ನಡೆಯಲಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸ್ಪೀಕರ್‌ ಯು.ಟಿ. ಖಾದರ್, ಸಚಿವರಾದ ದಿನೇಶ ಗುಂಡೂರಾವ್, ಜಿ. ಪರಮೇಶ್ವರ್,  ಜಮೀರ್ ಅಹ್ಮದ್, ರಹೀಂ ಖಾನ್, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಂಸದ ಬೃಜೇಶ್ ಚೌಟ ಭಾಗವಹಿಸುವರು ಎಂದು ಅವರು ಹೇಳಿದರು.

ಏ. 27ರಂದು ಮಧ್ಯಾಹ್ನ 2ಕ್ಕೆ ಅವಾ ಕಾಲೇಜು ಸಮ್ಮೇಳನ, ಮೇ 2ರಂದು ಸಂಜೆ 4ಕ್ಕೆ ತಾಜುಲ್ ಉಲಮಾ, ಕೂರತ್ ತಂಙಳ್ ಅನುಸ್ಮರಣೆ, ಅಬ್ದುಲ್ ಲತೀಫ್ ಸಖಾಫಿ ನೇತೃತ್ವದಲ್ಲಿ ಮದನೀಯಮ್ ದಿಕ್ರ್ ಮಜ್ಲಿಸ್, 3ರಂದು ಸಂಜೆ 4ಕ್ಕೆ ಸಯ್ಯಿದ್ ಮದನಿ ನ್ಯಾಷನಲ್ ಪೀಸ್ ಕಾನ್ಫರೆನ್ಸ್, ಸಾಧಕರಿಗೆ ಸನ್ಮಾನ, ನೂರೇ ಅಜ್ಮೀರ್, 4ರಂದು ಮಧ್ಯಾಹ್ನ 2ಕ್ಕೆ ಮದನಿ ಸಂಗಮ, 6ರಂದು ಮಧ್ಯಾಹ್ನ 2ಕ್ಕೆ ಶರೀಯತ್ ಕಾಲೇಜು ಕಾರ್ಯಕ್ರಮ, 8ರಂದು ಮಧ್ಯಾಹ್ನ 2ಕ್ಕೆ ಮುಅಲ್ಲಿಮ್ ಸಮಾವೇಶ, 9ರಂದು ಸಂಜೆ 4ಕ್ಕೆ ಮದನಿ ಮೌಲೀದ್ ಪಾರಾಯಣ, 12ರಂದು ಮಧ್ಯಾಹ್ನ 2ಕ್ಕೆ, ಸಯ್ಯಿದ್ ಮದನಿ ಹಿಪ್ಲುಲ್ ಕುರ್ ಆನ್ ವಿದ್ಯಾರ್ಥಿಗಳ ಕಾರ್ಯಕ್ರಮ, 13ರಂದು ಸಂಜೆ 4ಕ್ಕೆ ಗಲ್ಫ್ ಮೀಟ್, 17ರಂದು ಸಂದಲ್ ಮೆರವಣಿಗೆ. 18ರಂದು ಅನ್ನದಾನ ನಡೆಯಲಿದೆ ಎಂದರು.

ಉರುಸ್‌ಗೆ ರಾಜ್ಯ, ಹೊರ ರಾಜ್ಯಗಳಿಂದ ಭಕ್ತರು ಬರಲಿದ್ದು, ಪ್ರತಿ ದಿನ 1 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ. ಮೇ 18ರಂದು ನಡೆಯುವ ಅನ್ನದಾನ ಕಾರ್ಯಕ್ರಮದಲ್ಲಿ 5 ಲಕ್ಷ ಭಕ್ತರು ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ದರ್ಗಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಮಾತನಾಡಿ, 75 ವರ್ಷ ಹಳೆಯ ಮಸೀದಿಯನ್ನು ಕೆಡವಿ ಅದೇ ಜಾಗದಲ್ಲಿ ₹25 ಕೋಟಿ ವೆಚ್ಚದಲ್ಲಿ ಮಸೀದಿ ನಿರ್ಮಿಸಲಾಗುತ್ತದೆ. ಮುಂದಿನ 2030ರ ಉರುಸ್‌ ಸಂದರ್ಭದಲ್ಲಿ ಮಸೀದಿ ನಿರ್ಮಾಣ ಪೂರ್ಣಗೊಳ್ಳಲಿದ್ದು, ಭಾರತದ 2ನೇ ಅತಿದೊಡ್ಡ ಮಸೀದಿಯಾಗಲಿದೆ ಎಂದು ಮಾಹಿತಿ ನೀಡಿದರು.

ದರ್ಗಾ ಸಮಿತಿ ಖಜಾಂಚಿ ನಾಝಿಮ್ ಮುಕಚೇರಿ, ಉಪಾಧ್ಯಕ್ಷ ಅಶ್ರಫ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.