ADVERTISEMENT

‘ಸಮಸ್ಯೆಗೆ ಸ್ಪಂದಿಸಲು ಕಾರ್ಯೋನ್ಮುಖರಾಗಿ’

ಉಪ್ಪಿನಂಗಡಿಯಲ್ಲಿ ಪುತ್ತೂರು ತಾಲ್ಲೂಕು ಮಟ್ಟದ ಪ್ರಕೃತಿ ವಿಕೋಪ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 29 ಮೇ 2025, 7:27 IST
Last Updated 29 ಮೇ 2025, 7:27 IST
ಉಪ್ಪಿನಂಗಡಿ ಪ್ರಾಕೃತಿಕ ವಿಕೋಪ ಪೂರ್ವಭಾವಿ ಸಭೆಯಲ್ಲಿ ಶಾಸಕ ಅಶೋಕ್ ರೈ ಮಾತನಾಡಿದರು
ಉಪ್ಪಿನಂಗಡಿ ಪ್ರಾಕೃತಿಕ ವಿಕೋಪ ಪೂರ್ವಭಾವಿ ಸಭೆಯಲ್ಲಿ ಶಾಸಕ ಅಶೋಕ್ ರೈ ಮಾತನಾಡಿದರು   

ಉಪ್ಪಿನಂಗಡಿ: ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ತಕ್ಷಣ ಕಾರ್ಯೋನ್ಮುಖರಾಗಬೇಕು, ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡುವ ಮೂಲಕ ಸಾರ್ವಜನಿಕರ ನೆರವಿಗೆ ತಕ್ಷಣ ಧಾವಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜನರು ಆತಂಕಪಡಬೇಕಾಗಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಬುಧವಾರ ಉಪ್ಪಿನಂಗಡಿಯಲ್ಲಿ ಪುತ್ತೂರು ತಾಲ್ಲೂಕು ಮಟ್ಟದ ಪ್ರಕೃತಿ ವಿಕೋಪ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿದ್ಯುತ್, ನೀರಿನ ಸಮಸ್ಯೆ ಉಂಟಾದರೆ ಮತ್ತು ಗುಡ್ಡ ಕುಸಿತ, ಧರೆ ಕುಸಿತ ಸಂಭವಿಸಿದರೆ ತಕ್ಷಣ ಅಧಿಕಾರಿಗಳ ಗಮನಕ್ಕೆ ತರಬೇಕು. ಅಧಿಕಾರಿಗಳ ಟಾಸ್ಕ್‌ ಫೋರ್ಸ್‌ ಸಮಿತಿ ರಚಿಸಲಾಗಿದೆ. ಎನ್‌ಡಿಆರ್‌ಎಫ್ ತಂಡವೂ ಸನ್ನದ್ಧವಾಗಿದೆ ಎಂದರು.

ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವೇಗಸ್ ಮಾತನಾಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಟಾಸ್ಕ್‌ ಫೋರ್ಸ್‌ ಸಮಿತಿ ರಚಿಸಲಾಗಿದ್ದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅದನ್ನು ನಿರ್ವಹಣೆ ಮಾಡಬೇಕು, ಪಂಚಾಯಿತಿ ವ್ಯಾಪ್ತಿಯಲ್ಲಿ ಏನೇ ಸಮಸ್ಯೆ ಎದುರಾದರೂ ತಕ್ಷಣ ಸ್ಪಂದಿಸಬೇಕು, ಅಧಿಕಾರಿಗಳಿಂದ ಪೂರಕ ಸಹಕಾರ ಸಿಗದೇ ಇದ್ದಲ್ಲಿ ಮೇಲಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ADVERTISEMENT

ಅಪಾಯಕಾರಿ ಮರ ತೆರವಿಗೆ ಸೂಚನೆ: ಅರಣ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡುತ್ತಿದ್ದಂತೆ ಮಾತನಾಡಿದ ಗ್ರಾಮಸ್ಥರು ಉಪ್ಪಿನಂಗಡಿ ಮಾದರಿ ಶಾಲಾ ಬಳಿಯಲ್ಲಿ ಮರವೊಂದು ವಾಲಿಕೊಂಡಿದ್ದು ಅಪಾಯದ ಸ್ಥಿತಿಯಲ್ಲಿದೆ. ವಿದ್ಯಾರ್ಥಿಗಳು ಆತಂಕದಿಂದಲೇ ಇದರ ಮುಂದೆ ನಡೆದು ಹೋಗುತ್ತಿದ್ದಾರೆ. ಕಳೆದ ವರ್ಷದ ಸಭೆಯಲ್ಲಿ ಅದರ ತೆರವಿಗೆ ಮನವಿ ಸಲ್ಲಿಸಿದ್ದು ಆ ಸಂದರ್ಭದಲ್ಲಿ ಸಭೆಯಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗೆ ಸೂಚನೆ ನೀಡಲಾಗಿತ್ತು. ಆದರೆ ತೆರವು ಆಗಿಲ್ಲ ಎಂದು ಸಭೆಯ ಗಮನ ಸೆಳೆದರು.

ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಕೂಟೇಲ್ ದರ್ಗಾದ ಬಳಿ ಮತ್ತು ಬೆದ್ರೋಡಿಯಲ್ಲಿ ಭಾರಿ ಗಾತ್ರದ ಮರಗಳು ರಸ್ತೆಗೆ ಬೀಳುವ ಸ್ಥಿತಿಯಲ್ಲಿ ವಾಲಿಕೊಂಡಿವೆ. ರಸ್ತೆಯಲ್ಲಿ ವಾಹನದ ಮೇಲೆ ಬಿದ್ದರೆ ಪ್ರಾಣಾಪಾಯದ ಆತಂಕ ಇದೆ. ಆದ ಕಾರಣ ಇವುಗಳನ್ನು ತೆರವು ಮಾಡಬೇಕು ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು. ಆಗ ಶಾಸಕರು ವಲಯ ಅರಣ್ಯಾಧಿಕಾರಿಯನ್ನು ಉದ್ದೇಶಿಸಿ ಮಾತನಾಡಿ ಯಾಕೆ ಹೀಗೆ ಮಾಡುತ್ತೀರಿ, ಸಮಸ್ಯೆಗಳನ್ನು ಹಾಗೇ ಉಳಿಸಿಕೊಳ್ಳುತ್ತೀರಿ, ಅಪಾಯ ಉಂಟಾಗಿ ಜೀವ ಹಾನಿಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಅದಕ್ಕೆ ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಹಾಗೂ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಬೋಷನರಿ ಎಸಿಎಫ್‌ ಹಸ್ತ ಅವರು ಅಪಾಯಕಾರಿ ಮರಗಳನ್ನು ತೆರವು ಮಾಡುವುದಕ್ಕೆ ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಸರಿಪಡಿಸಿ: ಈ ಹಿಂದೆ ಪೇಟೆಯಿಂದ ರಾಜಕಾಲುವೆ ಮೂಲಕ ಮತ್ತು ಸೂರಪ್ಪ ಕಂಪೌಂಡ್ ಕಡೆಯಿಂದ ಬರುವ ತೋಡಿನ ನೀರು ಹರಿದು ಬಂದು ನದಿ ಸೇರುವಂತಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯ ಕಾಮಗಾರಿಯಿಂದಾಗಿ ಮೋರಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದೆ, ಒಂದೆಡೆ ನಿಲ್ಲುವಂತಾಗಿದೆ. ಮುಂದೆ ಮಳೆಗಾಲದಲ್ಲಿ ಇಲ್ಲಿಯ ನೀರು ಪೇಟೆಯ ಒಳಗಡೆ ನುಗ್ಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ತಿಳಿಸಿದರು.
ಹೆದ್ದಾರಿ ಇಂಜಿನಿಯರ್ ಪ್ರತಿಕ್ರಿಯಿಸಿ ತೋಡಿನಲ್ಲಿ ಕಸಕಡ್ಡಿ ಬಂದು ಹೀಗಾಗಿದೆ ಎಂದು ಸಮಜಾಯಿಸಿ ನೀಡಿದರು. ಆಗ ಗ್ರಾಮಸ್ಥರು ಮತ್ತೆ ಪ್ರತಿಕ್ರಿಯಿಸಿ ‘ಹೆದ್ದಾರಿ ಇಲಾಖೆಯವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ರಾಜಕಾಲುವೆಯಲ್ಲಿ ಬರುವ ನೀರು ಹೆದ್ದಾರಿಯವರು ಹಾಕಿರುವ ಮೋರಿಗೆ ಸೇರುವಲ್ಲಿ ಎತ್ತರದಲ್ಲಿದೆ. ಹೀಗಾಗಿ ನೀರು ಮುಂದಕ್ಕೆ ಹರಿದು ಹೋಗದೆ ನಿಲುಗಡೆಗೊಳ್ಳುತ್ತದೆ ಎಂದರು.

ಕೀ ಕೊಡದ ಕಾರ್ಯದರ್ಶಿಗೆ ತರಾಟೆ:

ಹಿರೇಬಂಡಾಡಿಯ ಪಾಲೆತ್ತಡಿ ಎಂಬಲ್ಲಿ ಅಂಗನವಾಡಿಗೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಏನೋ ಕಾರಣ ಹೇಳಿ ಉದ್ಘಾಟನೆ ಮಾಡಿಲ್ಲ ಎಂದು ಗ್ರಾಮಸ್ಥರು ಸಭೆಯಲ್ಲಿ ಹೇಳಿದರು. ಇದಕ್ಕೆ ಅಂಗನವಾಡಿ ಮೇಲ್ವಿಚಾರಕಿ ಕಟ್ಟಡದ ಕೀ ಗ್ರಾಮ ಪಂಚಾಯಿತಿನಲ್ಲಿದೆ, ಪಿಡಿಒ ಕೀ ಕೊಡುತ್ತಿಲ್ಲ, ಕಟ್ಟಡ ಕಾಮಗಾರಿ ಹಣ ಬಾಕಿ ಉಂಟಂತೆ ಎಂದು ಹೇಳಿದರು. ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ, ಪುತ್ತೂರು ನಗರ ಸಭೆ ಮುಖ್ಯಾಧಿಕಾರಿ ಮನೋಹರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಶಿಕ್ಷಣ ಇಲಾಖೆಯ ಲೋಕೇಶ್, ಲೋಕೋಪಯೋಗಿ ಇಲಾಖೆಯ ರಾಜೇಶ್ ರೈ, ಮೆಸ್ಕಾಂ ಇಲಾಖೆಯ ಶಿವಶಂಕರ್, ಅರಣ್ಯ ಇಲಾಖೆಯ ಕಿರಣ್, ಹಸ್ತ, ಪಶು ಸಂಗೋಪನಾ ಇಲಾಖೆಯ ಡಾ.ಧರ್ಮಪಾಲ, ಆರೋಗ್ಯ ಇಲಾಖೆಯ ಡಾ.ದೀಪಕ್ ರೈ ಮಾಹಿತಿ ನೀಡಿದರು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ಸಮಿತಿ ಸದಸ್ಯ ಕೃಷ್ಣ ರಾವ್, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಯು.ಟಿ ತೌಸೀಫ್, ಅಬ್ದುಲ್ ರಸೀದ್, ಆದಂ ಕೊಪ್ಪಳ, ಕೈಲಾರ್
ರಾಜ್‌ಗೋಪಾಲ್ ಭಟ್, ಅಬ್ದುಲ್ ರಹಿಮಾನ್ ಯುನಿಕ್, ಮಹಮ್ಮದ್ ಕೆಂಪಿ, ಯು.ಟಿ. ಇಷರ್ಾದ್ ಮಾತನಾಡಿದರು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ರಾಜಾರಾಮ್, ಅನಿಮೆನೇಜಸ್, ನಝೀರ್ ಮಠ ಇದ್ದರು. ಹಿರೇಬಂಡಾಡಿ ಗ್ರಾಮ ಆಡಳಿತಾಧಿಕಾರಿ ನರಿಯಪ್ಪ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ವಂದಿಸಿದರು. 

ಮೂಲ್ಕಿ : ಮಳೆಯಿಂದ ಮನೆಗಳಿಗೆ ಹಾನಿ

ಮೂಲ್ಕಿ: ಇಲ್ಲಿನ ಮೂಲ್ಕಿ ತಾಲ್ಲೂಕಿನ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯ ಕಾಡು ಎಂಬಲ್ಲಿ ಸುಮ ಅವರ ಮನೆಯ ಗೋಡೆಯು ಕುಸಿದು ಬಿದ್ದು ಹಾನಿಯಾಗಿದೆ. ಪಾವಂಜೆ ಗ್ರಾಮದ ಜಯಶ್ರೀ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆಯ ಮೇಲ್ಚಾವಣಿ ಹಾನಿಯಾಗುತ್ತದೆ. ಅತಿಕಾರಿಬೆಟ್ಟು ಗ್ರಾಮದ ಕಕ್ವದ ಶಾರದ ಅವರ ಮನೆಯ ಮೇಲೆ ಬೃಹತ್ ಮರಬಿದ್ದು ಹಾನಿಯಾಗಿದೆ. ಮೂಲ್ಕಿ ವೆಂಕಟರಮಣ ದೇವಳದ ರಸ್ತೆಯಲ್ಲಿ‌ ಚಲಿಸುತ್ತಿದ್ದ ಕಾರಿಗೆ ಮರ ಬಿದ್ದು ಕಾರಿನಲ್ಲಿದ್ದ ಮೂರು ಮಂದಿಗೆ ಗಾಯಗಳಾಗಿದೆ. ಘಟನೆಯಲ್ಲಿ ಕಾರು ಜಖಂಗೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.