ಮಂಗಳೂರು: ದೇಶದ ಪ್ರತಿಷ್ಠಿತ 11 ವೇದಿಕೆಗಳಲ್ಲಿ ಆಯೋಜನೆಯಾಗಿರುವ ‘ಉತ್ತರ್-ದಕ್ಷಿಣ್’ ಸಂಗೀತ ಕಾರ್ಯಕ್ರಮಸಂಗೀತ ಭಾರತಿ ಪ್ರತಿಷ್ಠಾನದ ಸಹಯೋಗದಲ್ಲಿ ನವೆಂಬರ್ 26ರಂದು ಸಂಜೆ 5.30ರಿಂದ ನಗರದ ಪುರಭವನದಲ್ಲಿ ನಡೆಯಲಿದೆ.
ವಿವಿಧ್ ಆರ್ಟ್ಸ್ ಆ್ಯಂಡ್ ಎಂಟರ್ಟೇನ್ಮೆಂಟ್ ಹಾಗೂ ದಿ ಪಯನೀರ್ ಆರ್ಟ್ಸ್ ಎಜುಕೇಷನ್ ಸೊಸೈಟಿ ಪ್ರಸ್ತುತಪಡಿಸಲಿರುವ ಕಾರ್ಯಕ್ರಮದಲ್ಲಿ ಹೆಸರಾಂತ ಗಾಯಕಿ ಅಶ್ವಿನಿ ಭಿಡೆ ದೇಶಪಾಂಡೆ ಅವರ ಹಿಂದೂಸ್ತಾನಿ ಗಾಯನ ಹಾಗೂಕರ್ಣಾಟಕ ಸಂಗೀತ ಶೈಲಿಯಲ್ಲಿ ವಿದ್ವಾನ್ ಗಣೇಶ್ ಮತ್ತು ವಿದ್ವಾನ್ ಕುಮರೇಶ್ ಅವರ ವಯಲಿನ್ ಜುಗಲ್ಬಂದಿ ನಡೆಯಲಿದೆ.
ಅಶ್ವಿನಿ ಭಿಡೆ ಅವರಿಗೆ ಹಾರ್ಮೋನಿಯಂನಲ್ಲಿ ಪಂ.ವ್ಯಾಸಮೂರ್ತಿ ಕಟ್ಟಿ ಹಾಗೂ ತಬಲಾದಲ್ಲಿ ಪಂ.ರವೀಂದ್ರ ಯಾವಗಲ್ ಸಹಕರಿಸಲಿದ್ದಾರೆ. ವಯಲಿನ್ ಜುಗಲ್ಬಂದಿಗೆ ಮೃದಂಗನಲ್ಲಿ ವಿದ್ವಾನ್ ಬಿ.ಹರಿಕುಮಾರ್ ಹಾಗೂ ಘಟಂನಲ್ಲಿ ವಿದ್ವಾನ್ ತ್ರಿಚಿ ಕೃಷ್ಣಸ್ವಾಮಿ ಸಹಕರಿಸಲಿದ್ದಾರೆ. ಮುಂಬೈಯ ಅಶ್ವಿನಿ ಭಿಡೆ ಅವರು ಮೈಕ್ರೊಬಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು, ಬಾಬಾ ಅಟೋಮಿಕ್ ರಿಸರ್ಚ್ ಸೆಂಟರ್ನಿಂದ ಬಯೊಕೆಮೆಸ್ಟ್ರಿಯಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ದೇಶ ವಿದೇಶಗಳ ಶ್ರೇಷ್ಠ ವೇದಿಕೆಗಳಲ್ಲಿ ಕಛೇರಿ ಪ್ರಸ್ತುತಪಡಿಸಿರುವ ಅವರಿಗೆ ಹಲವು ಪ್ರಶಸ್ತಿಗಳು ಒಲಿದಿವೆ.
ಕರ್ನಾಟಕ ಸಂಗೀತದ ಪ್ರಸಿದ್ಧ ಕಲಾವಿದರಾದ ಗಣೇಶ್ ಮತ್ತು ಕುಮರೇಶ್ ಸಹೋದರರು ಜನಿಸಿದ್ದು ಉತ್ತರಪ್ರದೇಶದ ಕಾನ್ಪುರದಲ್ಲಿ. ಬಾಲ್ಯದಿಂದಲೇ ಸಂಗೀತಾಭ್ಯಾಸ ಮಾಡಿರುವ ಅವರು ದೇಶ ವಿದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಅಕಾಡೆಮಿ ಆಫ್ ಮ್ಯೂಸಿಕ್ ಚೌಡಯ್ಯ ಪುರಸ್ಕಾರ, ಶ್ರೀ ಕಂಚಿ ಕಾಮಕೋಟಿ ಪೀಠದ ಆಸ್ಥಾನ ವಿದ್ವಾಂಸ ಪುರಸ್ಕಾರ, ಕಲೈಮಣಿ, ಸುನಾದ ಸಂಗೀತ ಸಾರಂಗ್ಯ ಮುಂತಾದ ಪ್ರಶಸ್ತಿಗಳು ಅವರಿಗೆ ಲಭಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.