ಮಂಗಳೂರು: ‘ಒಂದೆರಡು ತಿಂಗಳುಗಳಲ್ಲಿ ವಂದೇ ಭಾರತ್ ರೈಲಿಗೆ ಸ್ಲೀಪರ್ ಕೋಚ್ಗಳು ಬರಲಿದ್ದು, ಮಂಗಳೂರಿಗೂ ವಂದೇ ಭಾರತ್ ಸ್ಲೀಪರ್ ಕೋಚ್ ಸೌಲಭ್ಯ ಸಿಗಲಿದೆ’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಮಂಗಳೂರು ಸೆಂಟ್ರಲ್- ಕಬಕ ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರೋಡ್ವರೆಗೆ ವಿಸ್ತರಿಸಲಾಗಿದ್ದು, ಸೋಮಣ್ಣ ಅವರು ಇಲ್ಲಿನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಶನಿವಾರ ಈ ಸೇವೆಗೆ ಹಸಿರು ನಿಶಾನೆ ತೋರಿಸಿದರು.
ಇದಕ್ಕೂ ಮುನ್ನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಂಗಳೂರು ಜಂಕ್ಷನ್ ನಿಲ್ದಾಣ ₹ 19 ಕೋಟಿಯಲ್ಲಿ ಅಭಿವೃದ್ಧಿಗೊಳ್ಳುತ್ತಿದ್ದು, ಶೇ 85ರಷ್ಟು ಕಾಮಗಾರಿ ನಡೆದಿದೆ. ಆಗಸ್ಟ್ನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇಲ್ಲಿನ ಸೆಂಟ್ರಲ್ ರೈಲು ನಿಲ್ದಾಣವನ್ನು ವಿಶ್ವದರ್ಜೆಯ ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸಲು ಶೀಘ್ರವೇ ಟೆಂಡರ್ ಆಹ್ವಾನಿಸಲಿದ್ದೇವೆ. ಕಾಮಗಾರಿ 2 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಸುಬ್ರಹ್ಮಣ್ಯ ರೋಡ್ ನಿಲ್ದಾಣವೂ ಅಮೃತ್ ಭಾರತ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದರು.
‘ಜಿಲ್ಲೆಯಲ್ಲಿ ಅಗತ್ಯ ಇರುವ ಕಡೆಗೆ ರೈಲು ಮೇಲ್ಸೇತುವೆ ಅಥವಾ ಕೆಳಸೇತುವೆ ಮಂಜೂರು ಮಾಡಲಿದ್ದೇವೆ. ಹಿಂದೆ ಇದರ ಅರ್ಧದಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕಿತ್ತು. ಈಗ ಇದರ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಸುರಕ್ಷತಾ ಕ್ರಮಗಳ ಬಗ್ಗೆ ಇಲಾಖೆ ಹೆಚ್ಚಿನ ನಿಗಾ ವಹಿಸಿದೆ. ಅಪಘಾತಗಳ ಪ್ರಮಾಣ ಬಹಳ ಕಡಿಮೆ ಆಗಿದೆ. ಒಂದೇ ಹಳಿಯಲ್ಲಿ ಎರಡು ರೈಲುಗಳು ಏಕಾಏಕಿ ಮುಖಾಮುಖಿಯಾದರೂ ಡಿಕ್ಕಿ ಆಗುವುದನ್ನು ತಪ್ಪಿಸುವ ಕವಚ್ ವ್ಯವಸ್ಥೆ ರೂಪಿಸಲಾಗಿದೆ’ ಎಂದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, 'ಮೀಟರ್ ಗೇಜ್ ಹಳಿ ಇದ್ದಾಗ ಮಂಗಳೂರು– ಸುಬ್ರಹ್ಮಣ್ಯ ನಡುವೆ ಪ್ಯಾಸೆಂಜರ್ ರೈಲು ಸಂಚರಿಸುತ್ತಿತ್ತು. ಸ್ಥಗಿತಗೊಂಡಿದ್ದ ಈ ಸೇವೆಯನ್ನು ಮತ್ತೆ ಪಡೆಯಲು ಸಾಕಷ್ಟು ಹೋರಾಟ ನಡೆಸಬೇಕಾಯಿತು. ವಿದ್ಯುದೀಕರಣ ಪೂರ್ಣಗೊಂಡ ಬಳಿಕ ಈ ರೈಲನ್ನು ಮೆಮು ರೈಲನ್ನಾಗಿ ಪರಿವರ್ತಿಸಬೇಕು. ಪಶ್ಚಿಮ ಘಟ್ಟದ ತಪ್ಪಲು ಹಾಗೂ ಕಡಲ ತೀರವನ್ನು ಸಂಪರ್ಕಿಸುವ ಈ ರೈಲು ವಿದ್ಯಾರ್ಥಿಗಳಿಗೆ, ಕೃಷಿಕರಿಗೆ ಯಾತ್ರಾರ್ಥಿಗಳಿಗೆ ಅನುಕೂಲಕಲ್ಪಿಸಲಿದೆ’ ಎಂದರು.
ಕೇರಳ ಹಾಗೂ ತಮಿಳುನಾಡಿಗೆ ಹೋಲಿಸಿದರೆ ರೈಲು ಸೌಕರ್ಯದಲ್ಲಿ ನಾವು ಸಾಕಷ್ಟು ಹಿಂದಿದ್ದೇವೆ. ಪಂಚೆ ಎತ್ತಿ ಕಟ್ಟಿ ಗಲಾಟೆ ಮಾಡುವ ಬದಲು ಸಿಕ್ಕ ಅವಕಾಶ ಬಳಸಿ ಸೌಕರ್ಯ ಪಡೆಯಬೇಕು. ಅದಕ್ಕಿದು ಸುವರ್ಣ ಕಾಲವಿ.ಸೋಮಣ್ಣ, ರೈಲ್ವೆ ಖಾತೆ ರಾಜ್ಯ ಸಚಿವ
ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, 'ಸಾರಿಗೆ ಸಂಪರ್ಕ ವಿಸ್ತರಣೆಯಿಂದ ಊರೇ ಅಭಿವೃದ್ಧಿ ಆಗುತ್ತದೆ. ಮಂಗಳೂರು ಪುತ್ತೂರು– ಕಬಕ ರೈಲನ್ನು ಸುಬ್ರಹ್ಮಣ್ಯಕ್ಕೆ ವಿಸ್ತರಿಸಿರುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಪ್ರೇರಣೆ ಸಿಗಲಿದೆ. ದೇಶದಾದ್ಯಂತ ಭಕ್ತರನ್ನು ಸೆಳೆಯುವ ಪವಿತ್ರ ಕ್ಷೇತ್ರವಾದ ಸುಬ್ರಹ್ಮಣ್ಯದ ಅಭಿವೃದ್ಧಿಗೂ ಇದರಿಂದ ಸಹಾಯವಾಗಲಿದೆ' ಎಂದರು.
ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಭಾಗಿರಥಿ ಮುರುಳ್ಯ, ಪಾಲಕ್ಕಾಡ್ ವಿಭಾಗದ ಉಪಪ್ರಧಾನ ವ್ಯವಸ್ಥಾಪಕ ಅರುಣ್ ಕುಮಾರ್ ಚತುರ್ವೇದಿ ಭಾಗವಹಿಸಿದ್ದರು.
ಸುಬ್ರಹ್ಮಣ್ಯ– ಸಕಲೇಶಪುರ ಡಿಪಿಆರ್
‘ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸಕಲೇಶಪುರ ನಡುವಿನ ಹಳಿಯ ಸಮಸ್ಯೆ ಸರಿಪಡಿಸಲು ಡಿಪಿಆರ್ ಸಿದ್ಧವಾಗಿದೆ. ಪಶ್ಚಿಮ ಘಟ್ಟದ ಮೂಲಕ ಹಾದುಹೋಗುವ ರೈಲು ಮಾರ್ಗ ಮತ್ತು ರಾಷ್ಟ್ರೀಯ ಹೆದ್ದಾರಿಯನ್ನು ಜಂಟಿಯಾಗಿ ಮೇಲ್ದರ್ಜೆಗೇರಿಸುವ ಕುರಿತು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ರಾಜ್ಯದ ಲೋಕೋಪಯೋಗಿ ಸಚಿವರ ಸತೀಶ ಜಾರಕಿಹೊಳಿ ಜೊತೆಗೂ ಸಮಾಲೋಚನೆ ನಡೆಸಲಾಗಿದೆ. ಈ ಯೋಜನೆಯೂ ಕಾರ್ಯಗತಗೊಳ್ಳಲಿದೆ’ ಎಂದು ವಿ.ಸೋಮಣ್ಣ ತಿಳಿಸಿದರು.
ಬೆಂಗಳೂರು – ಮಂಗಳೂರು ನಡುವಿ ಸಂಪರ್ಕ ಇನ್ನಷ್ಟು ಸುಧಾರಣೆ ಆಗಬೇಕಾದರೆ ಹೆದ್ದಾರಿ ಹಾಗೂ ರೈಲು ಮಾರ್ಗ ಸಮಾನಾಂತರವಾಗಿ ಸಾಗುವಂತಾಗಬೇಕು ಎಂದು ಕ್ಯಾ.ಬ್ರಿಜೇಶ್ ಚೌಟ ಒತ್ತಾಯಿಸಿದರು. ‘ಮೂರು ರೈಲ್ವೆ ವಲಯಗಳ ವ್ಯಾಪ್ತಿಯಲ್ಲಿ ಹಂಚಿಹೋಗಿರುವ ದಕ್ಷಿಣ ಕನ್ನಡ ಜಿಲ್ಲೆಯ ರೈಲು ವ್ಯವಸ್ಥೆಯನ್ನು ಒಂದೇ ಸೂರಿನಡಿಗೆ ತರಬೇಕು. ಮಂಗಳೂರಿಗೆ ಪ್ರತ್ಯೇಕ ವಿಭಾಗವನ್ನು ರಚಿಸಬೇಕು’ ಎಂದು ರೈಲ್ವೆ ಹೋರಾಟಗಾರರು ಸಚಿವರಲ್ಲಿ ಮನವಿ ಮಾಡಿದರು. ಈ ಕುರಿತು ಪ್ರಯತ್ನಿಸುವುದಾಗಿ ಸಚಿವರು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.