ಸುರತ್ಕಲ್: ಇಲ್ಲಿನ ಎನ್ಐಟಿಕೆ ಕಾಲೇಜು ಪರಿಸರಸ್ನೇಹಿ ‘ವಿಧ್ಯುಗ್ 2.1’ ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ಧಿ ಪಡಿಸಿದ್ದು, ಕಾಲೇಜು ಆವರಣದಲ್ಲಿ ಕಡತ ಹಾಗೂ ಇತರ ಕಾಗದ ಪತ್ರಗಳನ್ನು ಸಾಗಿಸಲು ಬಳಸಲಾಗುತ್ತಿದೆ.
‘ಎನ್ಐಟಿಕೆ ನಿರ್ದೇಶಕ ಪ್ರೊ.ಕರ್ಣಂ ಉಮಾಮಹೇಶ್ವರ್ ಪ್ರಾಯೋಗಿಕ ಚಾಲನೆ ನಡೆಸಿದ್ದು, ಕ್ಯಾಂಪಸ್ನ ಸಿಬ್ಬಂದಿ ಉಪಯೋಗಿಸುತ್ತಾರೆ’ ಎಂದು ಕಾಲೇಜಿನ ಅಡಳಿತಾಧಿಕಾರಿ ತಿಳಿಸಿದ್ದಾರೆ.
‘ಕಚೇರಿ ಆವರಣದಲ್ಲಿ ಇಂಧನ ಚಾಲಿತ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ, ವಾಯುಮಾಲಿನ್ಯ ನಿಯಂತ್ರಿಸಲು ಈ ಸ್ಕೂಟರ್ ಸಹಕಾರಿಯಾಗಿದೆ. ನಮ್ಮ ಕಾಲೇಜು ಆವರಣದಲ್ಲಿ ಪ್ರತಿನಿತ್ಯ ಕಡತ ಮತ್ತು ಇತರ ಪತ್ರಗಳ ಸಾಗಣೆಗೆ ಸುಮಾರು 20ರಿಂದ 25 ಕಿ.ಮೀ.ಗಳಷ್ಟು ಸಂಚಾರ ಮಾಡಬೇಕಾಗುತ್ತದೆ. ಇದರಿಂದ ವರ್ಷಕ್ಕೆ ಸುಮಾರು 10 ಕೆ.ಜಿ.ಯಷ್ಟು ಇಂಗಾಲ ಬಿಡುಗಡೆಯಾಗುತ್ತದೆ. ವಿಧ್ಯುಗ್ 2.1 ಬಳಸುವುದರಿಂದ ಈ ಇಂಗಾಲವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು’ ಎಂದುಕಾಲೇಜಿನ ಆನ್ವಯಿಕ ಮೆಕಾನಿಕ್ಸ್ ಮತ್ತು ಹೈಡ್ರಾಲಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪೃಥ್ವಿರಾಜ್ ಯು. ತಿಳಿಸಿದರು.
‘ಈ ಹಿಂದಿನ ವಿಧ್ಯುಗ್ 2.0 ಕುರಿತ ಪ್ರತಿಕ್ರಿಯೆಗಳನ್ನು ಗಮನ ದಲ್ಲಿಟ್ಟುಕೊಂಡು ಪೃಥ್ವಿರಾಜ್ ಯು, ಪ್ರಾಧ್ಯಾಪಕ ಪ್ರೊ. ಕೆ. ವಿ. ಗಂಗಾಧರನ್ ನೇತೃತ್ವದಲ್ಲಿ ಸಂಶೋಧನಾ ವಿಧ್ಯಾರ್ಥಿಗಳಾದ ರಕ್ಷಿತ್ ಕೋಟ್ಯಾನ್, ಸ್ಟೀವನ್ ಲಾಯ್ಡ್, ರಜತ್ ಸಿ. ಕೋಟೆಕಾರ್, ಲತೀಶ್ ಶೆಟ್ಟಿ, ಸಂದೇಶ್ ಭಕ್ತ, ಮತ್ತು ಅನುರಾಧ ಎಸ್. ಅವರ ತಂಡವು ವಿಧ್ಯುಗ್2.1 ಅಭಿವೃಧ್ದಿ ಪಡಿಸಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.