ADVERTISEMENT

ಇಂದಿನಿಂದ 29ನೇ ಆಳ್ವಾಸ್ ವಿರಾಸತ್‌: ನಾಲ್ಕು ದಿನ ಸಾಂಸ್ಕೃತಿಕ ರಸದೌತಣ

ಪ್ರಸನ್ನ ಹೆಗ್ಡೆ ಕಲ್ಲಬೆಟ್ಟು
Published 14 ಡಿಸೆಂಬರ್ 2023, 6:11 IST
Last Updated 14 ಡಿಸೆಂಬರ್ 2023, 6:11 IST
<div class="paragraphs"><p>ಆಳ್ವಾಸ್ ವಿರಾಸತ್‌ಗೆ ಸಾಂಸ್ಕೃತಿಕ ವೈಭವಕ್ಕೆ ಸಜ್ಜಾಗಿರುವ ವಿದ್ಯಾಗಿರಿ</p></div>

ಆಳ್ವಾಸ್ ವಿರಾಸತ್‌ಗೆ ಸಾಂಸ್ಕೃತಿಕ ವೈಭವಕ್ಕೆ ಸಜ್ಜಾಗಿರುವ ವಿದ್ಯಾಗಿರಿ

   

ಮೂಡುಬಿದಿರೆ: ‘ಆಳ್ವಾಸ್ ವಿರಾಸತ್ 2023’ ಸಾಂಸ್ಕೃತಿಕ ವೈಭವಕ್ಕೆ ವಿದ್ಯಾಗಿರಿ ಸಜ್ಜಾಗಿದೆ. ಪುತ್ತಿಗೆಯ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಗುರುವಾರದಿಂದ ಡಿ. 17ರವರೆಗೆ ಸಾಂಸ್ಕೃತಿಕ ವೈಭವ ನಡೆಯಲಿದೆ.

ಕೃಷಿಸಿರಿ ವೇದಿಕೆ ಸೇರಿ ಆವರಣದಲ್ಲಿ ‘ಸಪ್ತ ಮೇಳ’ಗಳ ಸಂಗಮವು ಜನರಿಗೆ ಖುಷಿ ನೀಡಲಿದೆ. ದೀಪಾಲಂಕಾರ, ಕಲಾಕೃತಿಗಳು, ಫಲ–ಪುಷ್ಪ ಪ್ರದರ್ಶನ ಕಲಾಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿದೆ. ಗುರುವಾರ ಸಂಜೆ 5:30ಕ್ಕೆ ರಾಜ್ಯಪಾಲ ಡಾ.ಥಾವರ್ ಚಂದ್ ಗೆಹಲೊತ್‌ ಆಳ್ವಾಸ್ ವಿರಾಸತ್ ಉದ್ಘಾಟಿಸುವರು. ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು.

ADVERTISEMENT

ಈ ಬಾರಿಯ ವಿರಾಸತ್‌ನ ವಿಶೇಷ ‘ರಥಾರತಿ’. ಉದ್ಘಾಟನೆ ಸಂದರ್ಭದಲ್ಲಿ ವೇದಿಕೆ ಬಲದಿಂದ ಎಡಕ್ಕೆ ಸಾಂಸ್ಕೃತಿಕ ರಥವನ್ನು ಎಳೆಯಲಾಗುತ್ತದೆ. ರಥದಲ್ಲಿ ಲೋಕ ಮಾರ್ಗದರ್ಶಕರಾದ ರಾಮ-ಕೃಷ್ಣರ ಮೂರ್ತಿ ಇರಲಿದೆ.  ಸಮಾರೋಪದ ದಿನ ರಥವು ಎಡದಿಂದ ಬಲಕ್ಕೆ ಸಂಚರಿಸಲಿದ್ದು, ಹರಿದ್ವಾರದಿಂದ ಬರುವ ಪ್ರಮುಖರು ಮಂತ್ರ ಘೋಷಗಳೊಂದಿಗೆ ಆರತಿ ಬೆಳಗಲಿದ್ದಾರೆ.

ಗುರುವಾರ ಸಂಜೆ 6ಕ್ಕೆ ನಡೆಯುವ ಸಾಂಸ್ಕೃತಿಕ ಮೆರವಣಿಗೆಗೆ 100ಕ್ಕೂ ಹೆಚ್ಚು ಕಲಾ ತಂಡಗಳ 5 ಸಾವಿರಕ್ಕೂ ಅಧಿಕ ಕಲಾವಿದರು ಮೆರುಗು ನೀಡಲಿದ್ದಾರೆ. ‘ಜಾನಪದ ಕಲೆ ಮತ್ತು ಕಲಾವಿದರಿಗೆ ಆದ್ಯತೆ ನೀಡುವುದು ಈ ಮೆರವಣಿಗೆಯ ಉದ್ದೇಶ ಎನ್ನುತ್ತಾರೆ’ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ.

ವಿರಾಸತ್ ಆವರಣ ಹೂವಿನಿಂದ ಅಲಂಕಾರದಿಂದ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಎರಡು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಆವರಣದಲ್ಲೇ ಬೆಳೆಸಲಾಗಿದೆ. 20ಕ್ಕೂ ಹೆಚ್ಚು ದೇಶಗಳ ವಿವಿಧ ಪುಷ್ಪ ತಳಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಆವರಣದಾದ್ಯಂತ 5 ಲಕ್ಷದಷ್ಟು ಸಸ್ಯಗಳು ಕಂಗೊಳಿಸುತ್ತಿವೆ. ಆನೆ, ಕುದುರೆ, ಜಿರಾಫೆ, ನವಿಲು ಇತ್ಯಾದಿ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿಸಿರಿ) ಆವರಣದಲ್ಲಿ ನಡೆಯುವ 7 ಮೇಳಗಳ 750ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ 'ಪ್ರದರ್ಶನ ಮತ್ತು ಮಾರಾಟ ಮೇಳವು' ವಿಶೇಷ ಆಕರ್ಷಣೆಯಾಗಿದೆ.

ಮಾಧ್ಯಮ ಕೇಂದ್ರ ಉದ್ಘಾಟನೆ

'ಆಳ್ವಾಸ್ ವಿರಾಸತ್ -23'ರ ಮಾಧ್ಯಮ ಕೇಂದ್ರವನ್ನು ಮೋಹನ್‌ ಆಳ್ವ ಉದ್ಘಾಟಿಸಿದರು. ‘ಸಣ್ಣ ಮಟ್ಟದಿಂದ ಆರಂಭಗೊಂಡ ವಿರಾಸತ್ ಇಂದು ಲಕ್ಷಾಂತರ ಜನರ ಪಾಲ್ಗೊಳ್ಳುವಿಕೆಯ ಕೇಂದ್ರವಾಗಿದೆ. ಇದಕ್ಕೆ ಮಾಧ್ಯಮವೂ ಉತ್ತಮ ಸ್ಪಂದನೆ ನೀಡುತ್ತಿದೆ’ ಎಂದರು.

ವನ್ಯಜೀವಿ ಛಾಯಾಗ್ರಾಹಕ,  ನಿವೃತ್ತ ಐಎಫ್ಎಸ್ ಅಧಿಕಾರಿ ಎಂ.ಎನ್. ಜಯಕುಮಾರ್ ಮಾತನಾಡಿ, ‘ಮಾಧ್ಯಮದಿಂದ ಜನರಿಗೆ ಒಳ್ಳೆಯ ಸಂದೇಶ ತಲುಪಲಿ’ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ, ಭಾಸ್ಕರ ರೈ, ಪುಷ್ಪರಾಜ್, ಮೂಡುಬಿದಿರೆ ತಾಲ್ಲೂಕು ಘಟಕದ ಅಧ್ಯಕ್ಷ ಯಶೋಧರ ಬಂಗೇರ, ಕಾರ್ಯದರ್ಶಿ ಪ್ರೇಮಾಶ್ರೀ ಕಲ್ಲಬೆಟ್ಟು, ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಇದ್ದರು.

ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸಂದೇಶವನ್ನು ವಿರಾಸತ್ ಹೊಂದಿದೆ. ಸತ್ಯವನ್ನೇ ಬರೆಯುವ ಧ್ಯೇಯವನ್ನು ಮಾಧ್ಯಮ ಹೊಂದಿದೆ. ಜೊತೆಯಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸ ಆಗಲಿ
ಎಂ. ಮೋಹನ ಆಳ್ವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.