ಮಂಗಳೂರು: ‘ಲೇಖಕರು ವೈಜ್ಞಾನಿಕ ಮನೋಭಾವ, ತಾರ್ಕಿಕತೆ ಮತ್ತು ಸಂವೇದನಾಶೀಲತೆಯನ್ನು ಮೈಗೂಡಿಸಿಕೊಂಡರೆ ಮಾತ್ರ ಉತ್ತಮ ಕೃತಿ ರಚಿಸಲು ಸಾಧ್ಯ’ ಎಂದು ಗೋವಾದ ಸಾಹಿತಿ ದತ್ತಾ ದಾಮೋದರ ನಾಯಕ್ ಅಭಿಪ್ರಾಯಪಟ್ಟರು.
ಮೈಕಲ್ ಡಿಸೋಜ ಅವರ ‘ವಿಷನ್ ಕೊಂಕಣಿ’ ಪುಸ್ತಕ ಪ್ರಕಟಣೆ ಯೋಜನೆಯಡಿ ಆಯ್ಕೆಯಾದ ಲೇಖಕರ ಬಳಗವನ್ನು ಉದ್ದೇಶಿಸಿ ಅವರು ಇಲ್ಲಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಭಾನುವಾರ ಮಾತನಾಡಿದರು.
‘25 ಮಿ.ಲಿ ಸುಗಂಧ ದ್ರವ್ಯ ತಯಾರಿಸಲು ಸಾವಿರಾರು ಹೂವಿನ ಪಕಳೆಗಳನ್ನು ಅರೆಯಬೇಕಾಗುತ್ತದೆಯೋ ಹಾಗೆ ಒಂದು ಸಾಹಿತ್ಯ ಕೃತಿ ರಚನೆಯ ಹಿಂದೆ ಸಾವಿರಾರು ಪುಟಗಳ ಓದು, ಅಭ್ಯಾಸ ಅಗತ್ಯ. ಬರವಣಿಗೆಯ ಭಾಷೆ ಸರಳ ಮತ್ತು ಹೃದ್ಯವಾದಾಗ ವಾಚಕನಿಗೆ ಓದಿನ ಅನುಭೂತಿ ದಕ್ಕುತ್ತದೆ. ಅತಿಯಾದ ಅಲಂಕಾರ, ಸಂಕೇತ, ಪ್ರತಿಮೆ - ಪ್ರತೀಕಗಳನ್ನು ಹೇರಿಕೊಂದು ರಚಿಸಿದ ಸಾಹಿತ್ಯ ಓದುಗರಿಂದ ವಿಮುಖರಾಗುವ ಸಾಧ್ಯತೆಗಳು ಹೆಚ್ಚು’ ಎಂದರು.
ಕವಿ ಟೈಟಸ್ ನೊರೊನ್ಹಾ ಸ್ವಾಗತಿಸಿದರು. ಕೊಂಕಣಿ ಸಾಹಿತಿಗಳ 21 ಕೃತಿಗಳು ಪುಸ್ತಕ ಅನುದಾನಕ್ಕೆ ಆಯ್ಕೆಯಾಗಿದ್ದು, ಕವಿ ಮೆಲ್ವಿನ್ ರೊಡ್ರಿಗಸ್ ಈ ಲೇಖಕರ ಹೆಸರು ಪ್ರಕಟಿಸಿದರು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗಿಲ್ಬರ್ಟ್ ಡಿಸೋಜ, ಸುಚಿತ್ರಾ ಎಸ್. ಶೆಣೈ ನಿರೂಪಿಸಿದರು. ವಿಶ್ವಸ್ಥರಾದ ವಿಲಿಯಮ್ ಡಿಸೋಜ, ಕಸ್ತೂರಿ ಮೋಹನ್ ಪೈ, ಖಜಾಂಜಿ ಬಿ. ಆರ್. ಭಟ್ ಮತ್ತು ಕಾರ್ಯ ನಿರ್ವಹಣಾ ಅಧಿಕಾರಿ ಬಿ. ದೇವದಾಸ ಪೈ ಭಾಗವಹಿಸಿದ್ದರು.
ಪತ್ರಕರ್ತ ಎಚ್.ಎಂ ಪೆರ್ನಾಲ್ ಅಧ್ಯಕ್ಷತೆಯಲ್ಲಿ ನಡೆದ ‘ಪುಸ್ತಕ ಪಂಚಾತಿಕೆ’ ಸಂವಾದದಲ್ಲಿ ಲೇಖಕರಾದ ಶಕುಂತಲಾ ಆರ್. ಕಿಣಿ, ಯೆಡ್ಡಿ ಸಿಕ್ವೇರಾ, ಪಯ್ಯನ್ನೂರು ರಮೇಶ ಪೈ ಮತ್ತು ಸೇಂಟ್ ಅಲೋಶಿಯಸ್ ಪ್ರಕಾಶನದ ನಿರ್ದೇಶಕಿ ವಿದ್ಯಾ ವಿನುತ ಡಿಸೋಜ ಅಭಿಪ್ರಾಯ ಮಂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.