ಮಂಗಳೂರು: ‘ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ ಮೇಲೆ ನಿಷೇಧ ಹೇರಿರುವುದು ಸುಪ್ರೀಂ ಕೋರ್ಟ್. ಈ ಆದೇಶದಿಂದಯಕ್ಷಗಾನಕ್ಕೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆಮುಸ್ಲೀಮರ ಆಜಾನ್ನಿಂದ ನಿತ್ಯವೂ ಆಗುವ ಕಿರಿಕಿರಿಯನ್ನು ಸಹಿಸಲಾಗದು‘ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಕ್ಷಗಾನ ಪ್ರತಿನಿತ್ಯ ನಡೆಯುವುದಿಲ್ಲ. ಅದಕ್ಕೆ ಧ್ವನಿವರ್ಧಕ ಬಳಸುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುವುದನ್ನು ಎಂದಾದರೆ, ಅದನ್ನು ತಡೆಯಲು ಕ್ರಮವಹಿಸಬೇಕು’ ಎಂದರು.
‘ಮಸೀದಿಗಳಲ್ಲಿ ದಿನದಲ್ಲಿ ಐದು ಸಲ ಧ್ವನಿವರ್ಧಕ ಬಳಸುವುದರಿಂದ ಜನರ ನೆಮ್ಮದಿ, ಆರೋಗ್ಯ, ಶಿಕ್ಷಣ, ವ್ಯವಹಾರಗಳಿಗೆ ಧಕ್ಕೆ ಆಗುತ್ತಿದೆ. ಮಂದಿರ, ಮಸೀದಿ, ಚರ್ಚ್, ಪಬ್ ಎಲ್ಲೇ ಇರಲಿ, ಧ್ವನಿವರ್ಧಕ ಬಳಕೆ ತಡೆಯಬೇಕು ಎಂದು ಸುಪ್ರೀಂ ಕೋರ್ಟ್ 15 ವರ್ಷಗಳ ಹಿಂದೆಯೇ ನಿರ್ದೇಶನ ನೀಡಿದ್ದರೂ ಇನ್ನೂ ಪಾಲನೆ ಆಗುತ್ತಿಲ್ಲ’ ಎಂದರು.
‘ಸುಪ್ರೀಂ ಕೋರ್ಟ್ ನಿರ್ದೇಶನಕ್ಕೂ ತಮಗೂ ಸಂಬಂಧ ಇಲ್ಲ, ಷರಿಯತ್ ಮಾತ್ರ ತಮ್ಮ ಕಾನೂನು ಎನ್ನುವ ಮುಸ್ಲೀಮರ ಮಾನಸಿಕತೆ ವಿರುದ್ಧ ನಮ್ಮ ಆಕ್ರೋಶವೇ ಹೊರತು, ಮುಸ್ಲಿಂ ಧರ್ಮದ ವಿರುದ್ಧ ಅಲ್ಲ. ಅವರು ಸುಪ್ರೀಂ ಕೋರ್ಟ್ ಮಾತನ್ನೂ ಕೇಳದಿದ್ದರೆ, ಪಾಕಿಸ್ತಾನಕ್ಕೆ ಹೋಗಿ ಎಂದೇ ನಾವು ಹೇಳುತ್ತೇವೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ಪ್ರಮುಖರಾದ ಆನಂದ ಅಡ್ಯಾರ್, ಮೋಹನ್ ಭಟ್, ಪ್ರದೀಪ್ ಮೂಡುಶೆಡ್ಡೆ, ಕುಮಾರ್ ಮಾಲೆಮಾರ್ ಇದ್ದರು.
‘ಪ್ರವೀಣ್ ನೆಟ್ಟಾರು ಹತ್ಯೆ: ಎನ್ಐಎ ತನಿಖೆ ಒಪ್ಪಲಾಗದು’
‘ಪ್ರವೀಣ್ ನೆಟ್ಟಾರು ಹತ್ಯೆಯನ್ನು ರಾಷ್ಟ್ರೀಯ ತನಿಖಾ ಏಜೆನ್ಸಿಗೆ (ಎನ್ಐಎ) ವಹಿಸಿದ್ದನ್ನು ಒಪ್ಪುವುದಿಲ್ಲ. ಪರೇಶ್ ಮೇಸ್ತ ಕೊಲೆ ತನಿಖೆಯನ್ನೂ ಎನ್ಐಎಗೆ ವಹಿಸಲಾಗಿತ್ತು. ಎನ್ಐಎ ಅಧಿಕಾರಿಗಳು ಅವರ ಮನೆಗೆ ಹೋಗಿ ವಿಚಾರಣೆಯನ್ನೂ ಮಾಡಿಲ್ಲ’ ಎಂದು ಮುತಾಲಿಕ್ ಹೇಳಿದರು.
‘ಪ್ರವೀಣ್ ಹತ್ಯೆ ಹುಡುಗಿ ಅಥವಾ ಆಸ್ತಿ ವಿಚಾರಕ್ಕಾಗಿ ನಡೆದದ್ದಲ್ಲ. ಹಿಂದೂ ಧರ್ಮಕ್ಕಾಗಿ ಕೆಲಸ ಮಾಡಿದ್ದ ವ್ಯಕ್ತಿಯ ಕೊಲೆ ಇದು. ಹಿಂದೂಗಳು ಯಾರೂ ನಿಮಗೆ ತೊಂದರೆ ಕೊಟ್ಟಿಲ್ಲ. ಆದರೂ, ಶಾಂತವಾಗಿದ್ದ ಹಿಂದೂ ಸಮಾಜವನ್ನು ಕೆರಳಿಸಿದ್ದೀರಿ. ಸೌಹಾರ್ದದ ಕಾಲ ಮುಗಿದಿದೆ. ಇನ್ನೇನಿದ್ದರೂ ಸಂಘರ್ಷ’ ಎಂದರು.
ಪರೇಶ್ ಮೇಸ್ತ, ಶರತ್ ಮಡಿವಾಳ, ರುದ್ರೇಶ್ ಕೊಲೆಯಾದಾಗ ನೀಡಿದ್ದ ಭರವಸೆಗಳನ್ನು ಮರೆತಂತೆ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನೀಡಿದ ಭರವಸೆಯನ್ನೂ ಮರೆತರೆ ಸಿ.ಎಂ. ಮನೆ ಎದುರು ಧರಣಿ ಮಾಡಬೇಕಾಗುತ್ತದೆ.
ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಮುಖ್ಯಸ್ಥ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.