ಮಂಗಳೂರು: ‘ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವಂತೆ ಜನರನ್ನು ಪ್ರೇರೇಪಿಸಲು ಹಾಗೂ ಶಾಲಾ ಮಕ್ಕಳಲ್ಲಿ ಹಾಗೂ ಅವರ ಪೋಷಕರಲ್ಲಿ ಸೈಕ್ಲಿಂಗ್ ಮತ್ತು ರಸ್ತೆ ಸುರಕ್ಷತೆಯ ಜಾಗೃತಿ ಮೂಡಿಸಲು ‘ವಿ ಆರ್ ಸೈಕ್ಲಿಂಗ್’ ಇದೇ ಭಾನುವಾರ (ಜ. 8ರಂದು) ‘ಹೀರೋ ಸೈಕಲ್ಸ್ ಸೈಕ್ಲೋಥಾನ್– 2023‘ ಅನ್ನು ಏರ್ಪಡಿಸಿದೆ’ ಎಂದು ಸಂಸ್ಥೆಯ ಕಾರ್ಯದರ್ಶಿ ಹರ್ನೀಶ್ ರಾಜ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಇಲ್ಲಿ ಬುಧವಾರ ಮಾತನಾಡಿದ ಅವರು, ‘ಇದೇ 8ರಂದು ಬೆಳಿಗ್ಗೆ 6.30ಕ್ಕೆ ಮಂಗಳಾ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಜಾಥಾವು ಲೇಡಿಹಿಲ್, ಲಾಲ್ಬಾಗ್, ಪಿವಿಎಸ್, ಬಂಟ್ಸ್ ಹಾಸ್ಟೆಲ್ ವೃತ್ತ, ಅಂಬೇಡ್ಕರ್ ವೃತ್ತ, ಹಂಪನಕಟ್ಟೆ, ಗಡಿಯಾರ ಗೋಪುರ, ಮಹಾತ್ಮಗಾಂಧಿ ರಸ್ತೆ ಮೂಲಕ ಸಾಗಿ ಉರ್ವ ಮೈದಾನದಲ್ಲಿ ಸಂಪನ್ನವಾಗಲಿದೆ. ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ಅವರು ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. 8 ವರ್ಷ ಮೇಲ್ಪಟ್ಟ ಮಕ್ಕಳು ಹಾಗೂ ಪೋಷಕರು ಹಾಗೂ ಆಸಕ್ತರು ಜಾಥಾದಲ್ಲಿ ಭಾಗವಹಿಸಬಹುದು’ ಎಂದರು.
ಸಂಸ್ಥೆಯ ಅಧ್ಯಕ್ಷ ಸರ್ವೇಶ್ ಸಾಮಗ, ‘ನಗರದಲ್ಲಿ ಸ್ಮಾರ್ಟ್ ರಸ್ತೆಗಳನ್ನು ಅಭಿವೃದ್ಧಿಪಡಿಸುವಾಗ ಸೈಕಲ್ ಸವಾರರಿಗೆ ಪ್ರತ್ಯೇಕ ಪಥವನ್ನು ಕಾಯ್ದಿರಿಸುವಂತೆ ಕೋರಿದ್ದೇವೆ. ಶಾಲಾ–ಕಾಲೇಜುಗಳ ಬಳಿ ಇರುವ ಓಣಿ ರಸ್ತೆಗಳನ್ನು ಸೈಕಲ್ ಪಥಗಳನ್ನಾಗಿ ಗುರುತಿಸುವಂತೆಯೂ ಕೋಡಿದ್ದೇವೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶ್ಯಾಂ ಪ್ರಸಾದ್ ಹಾಗೂ ಮುಬೀನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.