ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿದರು.
ವೆನ್ಲಾಕ್ ಆಸ್ಪತ್ರೆಯ ವಿವಿಧ ಅಭಿವೃದ್ಧಿ ಕಾರ್ಯಗಳ ಪ್ರಸ್ತಾವದ ಬಗ್ಗೆ ಚರ್ಚಿಸಿದರು. ಮೂರು ವರ್ಷಗಳಿಂದ ವೆನ್ಲಾಕ್ ಜಿಎನ್ಎಂ ನರ್ಸಿಂಗ್ ವಿದ್ಯಾರ್ಥಿನಿಯರ ಸ್ಟೈಪೆಂಡ್ ಹಣ ಬಿಡುಗಡೆ ಮಾಡುವಂತೆ ಸದಸ್ಯರು ವಿನಂತಿಸಿದಾಗ, ತಕ್ಷಣ ಬಿಡುಗಡೆಗೊಳಿಸುವಂತೆ ಸಚಿವರು ಆಯುಕ್ತರಿಗೆ ಸೂಚಿಸಿದರು.
ವರ್ಗಾವಣೆ ವೇಳೆ ತೆರವಾದ ವಿವಿಧ ಶ್ರೇಣಿಯ ವೈದ್ಯರು ಮತ್ತು ಸ್ಟಾಫ್ ನರ್ಸ್ಗಳ ಖಾಲಿ ಹುದ್ದೆ ಭರ್ತಿಗೊಳಿಸುವಂತೆ ಸದಸ್ಯರು ಆಗ್ರಹಿಸಿದಾಗ, ಭರ್ತಿ ಮಾಡಲು ಸಚಿವರು ತಿಳಿಸಿದರು. ವೆನ್ಲಾಕ್ಗೆ ಅತಿ ಹೆಚ್ಚು ವಿದ್ಯುತ್ ಬಿಲ್ ಬರುವುದರಿಂದ ಇಡೀ ಆಸ್ಪತ್ರೆಗೆ ಸೋಲಾರ್ ವ್ಯವಸ್ಥೆ ಮಾಡಲು ಸದಸ್ಯರು ಬೇಡಿಕೆ ಇಟ್ಟಾಗ, ಪರಿಶೀಲಿಸಿ ಅಂದಾಜು ಪಟ್ಟಿ ತಯಾರಿಸುವಂತೆ ಆಯುಕ್ತರಿಗೆ ಸೂಚಿಸಿದರು.
ಆಸ್ಪತ್ರೆಗೆ ಸುಮಾರು 13 ಜಿಲ್ಲೆಗಳಿಂದ ರೋಗಿಗಳು ಬರುತ್ತಾರೆ. ದಿನದ 24 ಗಂಟೆ ಜನಸಂಚಾರ ಇರುವುದರಿಂದ ಮತ್ತು ಆಸ್ಪತ್ರೆಯಲ್ಲಿ ದಿನದ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿ, ಸಿಬ್ಬಂದಿ, ರೋಗಿಗಳ ಜೊತೆ ಬರುವವರಿಗೆ ಭದ್ರತೆ ಹಿತದೃಷ್ಟಿಯಿಂದ ಪ್ರತ್ಯೇಕ ಪೋಲಿಸ್ ಔಟ್ ಪೋಸ್ಟ್ ಮಾಡಲು ಸದಸ್ಯರು ಸಚಿವರಿಗೆ ವಿನಂತಿಸಿದರು. ತಕ್ಷಣ ಮಂಗಳೂರು ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿದ ಸಚಿವರು, ಕ್ರಮವಹಿಸುವಂತೆ ಸೂಚಿಸಿದರು.
ಲೇಡಿಗೋಶನ್ ಆಸ್ಪತ್ರೆಯಲ್ಲಿ ಔಷಧ ಬಿಲ್ ಬಾಕಿ ಇರುವ ಬಗ್ಗೆ ಸಚಿವರ ಗಮನ ಸೆಳೆದಾಗ, ತಕ್ಷಣ ಬಿಡುಗಡೆಗೊಳಿಸಲು ಆಯುಕ್ತರಿಗೆ ಸೂಚಿಸಿದರು. ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಪದ್ಮನಾಭ ಅಮೀನ್, ಅಬ್ದುಲ್ ಕರೀಂ ಗೇರುಕಟ್ಟೆ, ಜೆ ಶಶಿಧರ್ ಬಜಾಲ್, ಅನಿಲ್ ಎಂ ರಸ್ಕಿನ್ಹಾ, ಜಯರಾಮ ದಿಡುಪೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.