ADVERTISEMENT

ಸುಹಾಸ್ ಮನೆಗೆ ಗೃಹಸಚಿವ ಭೇಟಿ ನೀಡಿಲ್ಲ ಏಕೆ: ಶಾಸಕಿ ಭಾಗಿರಥಿ ಮುರುಳ್ಯ ಪ್ರಶ್ನೆ

ಶಾಸಕಿ ಭಾಗಿರಥಿ ಮುರುಳ್ಯ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 5 ಮೇ 2025, 4:52 IST
Last Updated 5 ಮೇ 2025, 4:52 IST
ಭಾಗೀರಥಿ ಮುರುಳ್ಯ
ಭಾಗೀರಥಿ ಮುರುಳ್ಯ   

ಮಂಗಳೂರು: ‘ಹತ್ಯೆಗೀಡಾದ ಹಿಂದುತ್ವವಾದಿ ಕಾರ್ಯಕರ್ತ ಸುಹಾಸ್ ಶೆಟ್ಟಿ ಮನೆಗೆ ಗೃಹಸಚಿವ ಜಿ.ಪರಮೇಶ್ವರ ಅವರು ಭೇಟಿ ನೀಡಿಲ್ಲ. ಗೃಹಸಚಿವರು ಕೇವಲ ಮುಸ್ಲಿಂ ಮುಖಂಡರ ಸಭೆ ಕರೆದಿದ್ದಾರೆ. ಈ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದ್ದಾರೆ’ ಎಂದು ಶಾಸಕಿ ಭಾಗಿರಥಿ ಮುರುಳ್ಯ ಆರೋಪಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಹತ್ಯೆಗಳ ಬಳಿಕ ಜಿಲ್ಲೆಯಲ್ಲಿ ಕೋಮು ಪ್ರಕ್ಷುಬ್ಧ ವಾತಾವರಣವನ್ನು ತಿಳಿಗೊಳಿಸುವ ಕುರಿತು ಗೃಹಸಚಿವರು ಅಧಿಕಾರಿಗಳ ಸಭೆ ನಡೆಸುವಾಗ ನನ್ನನ್ನು ಸೇರಿದಂತೆ ಜಿಲ್ಲೆಯ ಯಾವುದೇ ಶಾಸಕರನ್ನು ಆಹ್ವಾನಿಸಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. 

‘ಸುಹಾಸ್ ಶೆಟ್ಟಿ ವಿರುದ್ಧ ಕೆಲವೊಂದು ಪ್ರಕರಣಗಳು ದಾಖಲಾಗಿವೆ ಎಂಬ ಕಾರಣಕ್ಕೆ ಕೆಲವು ಸಂಘಟನೆಗಳು ಗೂಂಡಾ ಎಂದು ಕೇವಲವಾಗಿ ಬಿಂಬಿಸುತ್ತಿವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಜಿ.ಪರಮೇಶ್ವರ ವಿರುದ್ಧವೂ ಪ್ರಕರಣಗಳು ದಾಖಲಾಗಿವೆ ಎಂಬ ಮಾತ್ರಕ್ಕೆ ಅವರನ್ನೂ ಗೂಂಡಾ ಎಂದು ಕರೆಯಬಹುದೇ‘ ಎಂದು ಪ್ರಶ್ನಿಸಿದರು. 

ADVERTISEMENT

ಸುಹಾಸ್ ಶೆಟ್ಟಿಯ ಹೆಸರನ್ನು ರೌಡಿ ಶೀಟ್‌ನಲ್ಲಿ ಸೇರಿಸಿದ್ದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.

‘ಹತ್ಯೆ ನಡೆದ ಸ್ಥಳದಲ್ಲಿ ಬುರ್ಖಾಧಾರಿ ಮಹಿಳೆಯರು ಆರೋಪಿಗಳು ತಪ್ಪಿಸಿಕೊಳ್ಳಲು  ನೆರವಾಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆ ಮಹಿಳೆಯರನ್ನು ಬಂಧಿಸಿಲ್ಲ. ಇದು ಪೊಲೀಸರ ವೈಫಲ್ಯವನ್ನು ತೋರಿಸುತ್ತದೆ. ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಬೇಕು‘ ಎಂದು ಅವರು ಒತ್ತಾಯಿಸಿದರು. 

ಕಾರ್ತಿಕ್ ಕೊಲೆ ಹಾಗೂ ದಲಿತ ದೌರ್ಜನ್ಯ ಪ್ರಕರಣಗಳಲ್ಲೂ ಸುಹಾಸ್‌ ಶೆಟ್ಟಿ ಆರೋಪಿಯಾಗಿದ್ದ ಕುರಿತ  ಪ್ರಶ್ನೆಗೆ, ‘ಈ ಬಗ್ಗೆ ಮಾತನಾಡುವುದಿಲ್ಲ’ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್‌, ಮುಖಂಡರಾದ ಪೂರ್ಣಿಮಾ ಮತ್ತಿತರರು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.