ಪುತ್ತೂರು: ಕೆಲ ದಿನಗಳಿಂದ ಪುತ್ತೂರು ತಾಲ್ಲೂಕಿನ ಮಾಡ್ನೂರು ಗ್ರಾಮ ವ್ಯಾಪ್ತಿಯ ಕೃಷಿ ಪ್ರದೇಶಗಳಲ್ಲಿ ಕೃಷಿ ಹಾನಿ ಮಾಡಿದ್ದ ಒಂಟಿ ಕಾಡಾನೆ ಇದೀಗ ಸಮೀಪದ ಕೆಯ್ಯೂರು ಗ್ರಾಮ ವ್ಯಾಪ್ತಿಯಲ್ಲಿ ಕೃಷಿ ಹಾನಿ ಮುಂದುವರಿಸಿದೆ. ಗುರುವಾರ ಹಗಲಲ್ಲೇ ಕಾಡಾನೆ ರಸ್ತೆ ಬದಿಯಲ್ಲಿ ಕಾಣಿಸಿಕೊಂಡಿದ್ದು, ಸ್ಥಳೀಯರು ಭಯಗೊಂಡಿದ್ದಾರೆ.
ಮಂಗಳವಾರ ರಾತ್ರಿ ಮಾಡ್ನೂರು ಗ್ರಾಮದ ಚಾಕೋಟೆ ಪರಿಸರದಲ್ಲಿ ಹಾನಿ ಮಾಡಿತ್ತು. ಬಳಿಕ ಕೆಯ್ಯೂರು ಭಾಗಕ್ಕೆ ತೆರಳಿತ್ತು. ಬುಧವಾರ ರಾತ್ರಿ ಕೆಯ್ಯೂರು ಗ್ರಾಮದ ಇಳಂತಾಜೆಯ ಸಂತೋಷ್ ರೈ ಇಳಂತಾಜೆ, ದೇರ್ಲ ಕೆಯ್ಯೂರು ಗ್ರಾಮ ಪಂಚಾಯಿತಿ ಸದಸ್ಯ ಬಟ್ಯಪ್ಪ ರೈ ದೇರ್ಲ ಅವರ ಬೆಳೆ ಹಾನಿ ಮಾಡಿದೆ. ಎಟ್ಯಡ್ಕದ ಬಾಲಕೃಷ್ಣ ನಾಯ್ಕ ಅವರ ತೋಟದ ತಂತಿ ಬೇಲಿ ಹಾನಿಗೊಳಿಸಿದೆ.
ಗುರುವಾರ ಮಧ್ಯಾಹ್ನ ವೇಳೆಗೆ ದೇರ್ಲದ ವಿನಯಕುಮಾರ್ ರೈ ಅವರ ಮನೆಯ ಮುಂಭಾಗದ ಗುಡ್ಡದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಸಂಜೆ ವೇಳೆ ಕೆಯ್ಯೂರು ನೆಟ್ಟಾಳ ಸಮೀಪ ರಸ್ತೆ ಬದಿಯಲ್ಲಿ ಸಾಗಿ ಗುಡ್ಡದಲ್ಲಿ ಬೀಡುಬಿಟ್ಟಿದೆ. ರಸ್ತೆ ಬದಿಯಲ್ಲೇ ಕಾಡಾನೆ ತಿರುಗಾಡುತ್ತಿದೆ.
ಪುತ್ತೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ., ಸಿಬ್ಬಂದಿ, ಕೆಯ್ಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶರತ್ಕುಮಾರ್ ಮಾಡಾವು, ಸದಸ್ಯರು, ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಕಾರ್ಯಾಚರಣೆ ನಡೆಸಿದರು.
ಇಳಂತಾಜೆ ರಸ್ತೆಯಲ್ಲಿ ಸಂಚರಿಸದಂತೆ ಸೂಚನೆ: ಇಳಂತಾಜೆ, ದೇರ್ಲ, ನೆಟ್ಟಾಳ ಭಾಗದಲ್ಲಿ ಕಾಡಾನೆ ಇರುವ ಬಗ್ಗೆ ಗುರುವಾರ ಸಂಜೆ ಜಾಗೃತಿ ಮೂಡಿಸಿದ್ದಾರೆ. ಕಟ್ಟತ್ತಾರು-ಇಳಂತಾಜೆ-ನೆಟ್ಟಾಳ ರಸ್ತೆಯಲ್ಲಿ ಯಾರೂ ಸಂಚರಿಸದಂತೆ ಸೂಚನೆ ನೀಡಿದ್ದಾರೆ. ಈ ನಡುವೆ ಕಾಡಾನೆಯನ್ನು ಅಲ್ಲಿಂದ ಓಡಿಸುವ ಪ್ರಯತ್ನ ನಡೆಸಿದ್ದಾರೆ.
ಜೀವ ಉಳಿಸಿಕೊಂಡ ಅರಣ್ಯ ಸಿಬ್ಬಂದಿ: ಕಟ್ಟತ್ತಾರು-ಇಳಂತಾಜೆ ರಸ್ತೆಯಲ್ಲಿ ಎ.ಕೆ.ಜಯರಾಮ ರೈ ಅವರ ಮನೆಯ ಸಮೀಪದ ಗುಡ್ಡದಲ್ಲಿದ್ದ ಕಾಡಾನೆಯನ್ನು ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗಾಗಿ ಕೋವಿ ಹಿಡಿದುಕೊಂಡು ಬೆನ್ನಟ್ಟಲು ಹೋಗಿದ್ದರು. ಈ ವೇಳೆ ಮತ್ತೊಂದು ಕಡೆಯವರು ಗರ್ನಾಲ್ ಸಿಡಿಸಿದ್ದರಿಂದ ಕಾಡಾನೆ ಗುಡ್ಡದಿಂದ ಕೆಳಗಿಳಿದು ಅವರಿದ್ದ ಭಾಗಕ್ಕೇ ಬಂದಿದೆ. ಕಾಡಾನೆ ಧಾವಿಸುತ್ತಿರುವುದನ್ನು ಕಂಡ ಇಬ್ಬರು ಅರಣ್ಯ ಸಿಬ್ಬಂದಿ ಕೋವಿಯನ್ನು ಅಲ್ಲೇ ಬಿಟ್ಟು ಓಡಿ ಅಪಾಯದಿಂದ ಪಾರಾಗಿದ್ದಾರೆ. ಅಲ್ಲಲ್ಲಿ ಗರ್ನಾಲ್, ಪಟಾಕಿ ಶಬ್ದ ಕೇಳಿ ಬರುತ್ತಿರುವುದರಿಂದ ಕಾಡಾನೆ ಆಕ್ರೋಶಗೊಂಡಿದೆ ಎಂಬ ಮಾಹಿತಿ ಲಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.