ADVERTISEMENT

ಮಾರಕ ಕಾಯ್ದೆ ಜಾರಿ ಜನವಿರೋಧಿ: ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಬಿ.ಸದಾಶಿವ

‘ಲಕ್ಷದ್ವೀಪ ನಿನ್ನೆ, ಇಂದು ನಾಳೆ ಆತ್ಮಾವಲೋಕನ’ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 4:07 IST
Last Updated 12 ಜುಲೈ 2021, 4:07 IST
ಸುಳ್ಯದಲ್ಲಿ ನಡೆದ ‘ಲಕ್ಷದ್ವೀಪ ನಿನ್ನೆ, ಇಂದು ನಾಳೆ ಆತ್ಮಾವಲೋಕನ’ ವಿಚಾರ ಸಂಕಿರಣದಲ್ಲಿ ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಬಿ.ಸದಾಶಿವ ಮಾತನಾಡಿದರು.
ಸುಳ್ಯದಲ್ಲಿ ನಡೆದ ‘ಲಕ್ಷದ್ವೀಪ ನಿನ್ನೆ, ಇಂದು ನಾಳೆ ಆತ್ಮಾವಲೋಕನ’ ವಿಚಾರ ಸಂಕಿರಣದಲ್ಲಿ ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಬಿ.ಸದಾಶಿವ ಮಾತನಾಡಿದರು.   

ಸುಳ್ಯ: ‘ಲಕ್ಷದ್ವೀಪದಲ್ಲಿನ ವಿದ್ಯಮಾನ ಮತ್ತು ಬೆಳವಣಿಗೆ ತಲ್ಲಣಗೊಳಿಸುತ್ತಿದೆ. ಕ್ರಿಮಿನಲ್ ಚಟುವಟಿಕೆ, ಅಪರಾಧಗಳೇ ಇಲ್ಲದ ಲಕ್ಷದ್ವೀಪದಲ್ಲಿ ಗೂಂಡಾ ಕಾಯ್ದೆಯಂತಹ ಮಾರಕ ಕಾಯ್ದೆ ಜಾರಿ ಮಾಡುವುದು ಜನವಿರೋಧಿ’ ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಬಿ.ಸದಾಶಿವ ಆತಂಕ ವ್ಯಕ್ತಪಡಿಸಿದರು.

ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಭಾನುವಾರ ಇಲ್ಲಿ ಆಯೋಜಿಸಿದ್ದ ‘ಲಕ್ಷದ್ವೀಪ ನಿನ್ನೆ, ಇಂದು ನಾಳೆ ಆತ್ಮಾವಲೋಕನ’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಬಹು ಸಂಸ್ಕೃತಿ ಮತ್ತು ವೈವಿಧ್ಯವನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲು. ಅಲ್ಲಿನ ಜನರ ಆಹಾರ ಪದ್ಧತಿಯನ್ನು ಬದಲಿಸುವುದು, ಮದ್ಯಪಾನ ಇಲ್ಲದ ನಾಡಿನಲ್ಲಿ ಮದ್ಯ ವ್ಯಾಪಾರ ಮಾಡುವುದು ಹೀಗೆ ಅಲ್ಲಿನ ಜನರ ಮೇಲೆ ಕಾನೂನು ಹೇರಲಾಗುತ್ತಿದೆ. ಕಾನೂನು ಜನರ ಪರವಾಗಿರಬೇಕೇ ಹೊರತು ಜನರಿಗೆ ಮಾರಕವಾಗಿರಬಾರದು’ ಎಂದರು.

ADVERTISEMENT

ಕೇಂದ್ರ ನಾರು ಮಂಡಳಿ ಮಾಜಿ ಸದಸ್ಯ ಟಿ.ಎಂ.ಶಹೀದ್ ಅಧ್ಯಕ್ಷತೆ ವಹಿಸಿದ್ದರು. ಲಕ್ಷದ್ವೀಪವು ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಲಕ್ಷದ್ವೀಪಕ್ಕೆ ಕೇಂದ್ರ ಸರ್ಕಾರ ನೇಮಿಸಿದ ಆಡಳಿತಾಧಿಕಾರಿಯ ಆಡಳಿತದಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕೇಂದ್ರ ಯಾವುದೋ ದುರುದ್ದೇಶದಿಂದ ಈ ರೀತಿಯ ಆಡಳಿತ ಬದಲಾವಣೆ ಮಾಡುತ್ತಿದೆ ಎಂದರು.

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ಮಾಧ್ಯಮ ವಕ್ತಾರ ಭರತ್ ಮುಂಡೋಡಿ, ಕೆಪಿಸಿಸಿ ಸಹಾಯ ಹಸ್ತ ಕಾರ್ಯಕ್ರಮದ ಚಿಕ್ಕಮಗಳೂರು ಉಸ್ತುವಾರಿ ಧನಂಜಯ ಅಡ್ಪಂಗಾಯ ಮಾತನಾಡಿದರು. ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಎಂ.ವೆಂಕಪ್ಪ ಗೌಡ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಇಕ್ಬಾಲ್ ಎಲಿಮಲೆ, ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಬ್ದುಲ್ ಕಲಾಂ, ಸಂಪಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಎಪಿಎಂಸಿ ನಿರ್ದೇಶಕ ಆದಂ ಹಾಜಿ ಕಮ್ಮಾಡಿ, ಅನ್ಸಾರಿಯಾ ಅನಾಥಾಲಯದ ಅಧ್ಯಕ್ಷ ಅಬ್ದುಲ್ ಮಜೀದ್, ಉದ್ಯಮಿ ಇಬ್ರಾಹಿಂ ಖತ್ತರ್, ಎಸ್‌ಎಸ್‌ಎಫ್ ಸುಳ್ಯ ವಲಯ ಪ್ರಧಾನ ಕಾರ್ಯದರ್ಶಿ ಸ್ವಬಾಹ್ ಹಿಮಾಮಿ ಸಖಾಫಿ ವೇದಿಕೆಯಲ್ಲಿದ್ದರು.

ಕೆ.ಎಂ.ಮುಸ್ತಫ ಸ್ವಾಗತಿಸಿದರು. ಅಬ್ದುಲ್ ಖಾದರ್ ಆರ್.ಕೆ.ಮಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಖಾದರ್ ಮೊಟ್ಟೆಂಗಾರ್ ವಂದಿಸಿದರು. ಸಿದ್ದಿಕ್ ಕೊಕ್ಕೋ ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.