ADVERTISEMENT

`ಅನ್ನಭಾಗ್ಯ' ಅಕ್ಕಿಗೆ ಅಧಿಕ ದರ ವಸೂಲಿ ಆರೋಪ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 8:14 IST
Last Updated 18 ಜುಲೈ 2013, 8:14 IST

ಹರಿಹರ:  ನ್ಯಾಯಯುತವಾಗಿ ಪಡಿತರ ಧಾನ್ಯ ವಿತರಣೆ ಮಾಡದ ತಾಲ್ಲೂಕಿನ ಗುಡ್ಡದಬೇವಿನಹಳ್ಳಿಯ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದುಪಡಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಬುಧವಾರ ತಹಶೀಲ್ದಾರ್ ಜಿ.ನಜ್ಮಾ ಅವರಿಗೆ ಮನವಿ ಸಲ್ಲಿಸಿದರು.

ಹಲವಾರು ಪಡಿತರ ಚೀಟಿಗಳಿಗೆ ಸೀಮೆಎಣ್ಣೆ ವಿತರಿಸದೇ, ಚೀಟಿದಾರರಿಗೆ ಮೋಸ ಮಾಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ 30 ಕೆ.ಜಿ. ಅಕ್ಕಿಗೆ ್ಙ 50 ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಕೇಳಲು ಹೋದವರ ಮೇಲೆ ಹಲ್ಲೆ ನಡೆಸುವ ಬೆದರಿಕೆ ಹಾಕಲಾಗುತ್ತಿದೆ. ಎರಡು ತಿಂಗಳಿಂದ ಪಡಿತರ ವಿತರಿಸಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಪರವಾನಗಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ನ್ಯಾಯಬೆಲೆ ಅಂಗಡಿ ಮಾಲೀಕ ಬಂಡೇರ ತಿಮ್ಮಣ್ಣ ವಿರುದ್ಧ 2012ರ ಸೆ.4ರಂದು ಪ್ರಕರಣ ದಾಖಲಾಗಿತ್ತು. ಸೆ.25ರಂದು ಅಂದಿನ ಜಿಲ್ಲಾಧಿಕಾರಿ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದುಪಡಿಸಿದ್ದರು. ಜಿಲ್ಲಾಧಿಕಾರಿ ಆದೇಶದ ವಿರುದ್ಧ ಬಂಡೇರ ತಿಮ್ಮಣ್ಣ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಆದರೂ, ಪಡಿತರ ವಿತರಣೆಯಲ್ಲಿ ಮಾಡುತ್ತಿರುವ ಲೋಪ ಹಾಗೂ ಅಕ್ರಮ ಕಡಿಮೆಯಾಗಿಲ್ಲ ಎಂದು ಆರೋಪಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಜಿ. ನಜ್ಮಾ, ಗ್ರಾಮದ ಟಿಎಪಿಸಿಎಂಎಸ್ ಮೂಲಕ ಗುರುವಾರದಿಂದ ಪಡಿತರ ಧಾನ್ಯ ವಿತರಣೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಬಂಡೇರ ತಿಮ್ಮಣ್ಣ ಮಾಲೀಕತ್ವದ ನ್ಯಾಯಬೆಲೆ ಪರವಾನಗಿ ರದ್ದುಪಡಿಸಲು ಶಿಫಾರಸು ಮಾಡಿದೆ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯ್ತಿ ಸದಸ್ಯ ಡಿ.ನಿಂಗಪ್ಪ, ಪಕ್ಕೀರಪ್ಪ, ಎಸ್.ಎಂ. ಮಂಜುನಾಥ, ಶಂಕ್ರಮ್ಮ, ಚಂದ್ರಪ್ಪ, ಅಣ್ಣಪ್ಪ, ಬೀರಪ್ಪ, ಬಸವರಾಜ್, ರೇಖಾ, ಚಂದ್ರಮ್ಮ, ನಿಂಗಮ್ಮ, ನೀಲಮ್ಮ, ಸಾಕಮ್ಮ, ಪ್ರಮೀಳಾ, ತುಂಗಮ್ಮ, ಲಿಂಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.