ಮಲೇಬೆನ್ನೂರು: ಸಮೀಪದ ನಂದಿಗುಡಿ ಹಾಲು ಉತ್ಪಾದಕರ ಸಹಕಾರ ಸಂಘ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹಾಲು ಪೂರೈಕೆದಾರರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಳೆದ 1 ತಿಂಗಳಿಂದ 4 ಬಾರಿ ಹಾಲನ್ನು ಸಂಘಕ್ಕೆ ತಂದು, ಹಾಕಿದ ಬಾಗಿಲು ನೋಡಿ ವಾಪಸ್ ಒಯ್ಯಲಾಗಿದೆ. 28 ವರ್ಷದಿಂದ ನಿರ್ದೇಶಕ ಮಂಡಳಿ ಬದಲಾಗಿಲ್ಲ. ಕೆಲಸ ಗೊತ್ತಿಲ್ಲದ ಅಧ್ಯಕ್ಷರನ್ನು ನೇಮಿಸಿ ನಿರ್ದೇಶಕರು ಆಟ ಆಡುತ್ತಿದ್ದಾರೆ.
ಹಾಲಿನ ಕೊಬ್ಬಿನ ಅಂಶಕ್ಕೆ ಸರಿಯಾಗಿ ದರ ಪಾವತಿಸುತ್ತಿಲ್ಲ. ಜತೆಗೆ ಕಾರ್ಯದರ್ಶಿ, ಹಾಲು ಪರೀಕ್ಷಕರೂ ನೇಮಿಸಿಲ್ಲ ಎಂದು ರೈತ ಸಂಘದ ಷಣ್ಮುಖಯ್ಯ, ನಿಂಗರಾಜು ಸಂಘದ ಕಾರ್ಯವೈಖರಿ ಖಂಡಿಸಿದರು.
ಕಳೆದ ಬಾರಿ ಇಂತಹ ಘಟನೆ ಸಂಭವಿಸಿದಾಗ ರೂಟ್ ಆಫೀಸರ್ ತುಳಜಾರಾಮ್ ಆಗಮಿಸಿದ್ದರು. ಇದು ಅಂತರಿಕ ಸಮಸ್ಯೆ ಪರಿಹರಿಸಿಕೊಳ್ಳಿ ಎಂದು ತಿಳಿಸಿ ತೆರಳಿದರು ಎಂದು ಬೇಸರ ವ್ಯಕ್ತಪಡಿಸಿದರು.ಸಾಲ ಪಡೆದು ಹಸು, ಎಮ್ಮೆ ಸಾಕಿ ಹಾಲು ಮಾರಿ ಜೀವನ ನಿರ್ವಹಿಸುತ್ತಿದ್ದು ಸಂಘದ ಆಡಳಿತ ಮಂಡಳಿ ತಪ್ಪಿನಿಂದ ಸಮಸ್ಯೆ ಉಧ್ಬವಿಸಿದೆ ಎಂದು ಶಾರದ, ಕಾಳಿಕಾಂಬ, ಪ್ರಗತಿ, ನಂದಿಸಿ ಸ್ತ್ರೀಶಕ್ತಿ ಸ್ವಸಹಾಯ ಸಂಘದ ವಿಜಯಲಕ್ಮೀ, ಲಕ್ಮೀ, ರೂಪ, ಕವಿತಾ, ಕುಸುಮಾ, ಸುಧಾ, ಗ್ರಾ.ಪಂ ಸದಸ್ಯೆ ಲೀಲಾವತಿ ಸಂಗ್ರಹವಾಗುವ 260 ಲೀ ಹಾಲಿಗೆ ಹಣ ನೀಡಲು ಆಗ್ರಹಿಸಿದರು.ಇಂದು ತಂದಿದ್ದ ಹಾಲು ಕೆಟ್ಟುಹೋದ ಕಾರಣ ತುಂಗಭದ್ರಾ ನದಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಸ್ಪಷ್ಟನೆ: ಕೆಲವು ನಿರ್ದೇಶಕರ ಅಸಹಕಾರ ಸಮಸ್ಯೆಗೆ ಕಾರಣ, ಎಲ್ಲ ಸರಿಪಡಿಸುವುದಾಗಿ ಸಂಘದ ಅಧ್ಯಕ್ಷ ಮಂಜಪ್ಪ ತಿಳಿಸಿದರು.
ನಿರ್ದೇಶಕರಾದ ಚಂದ್ರಯ್ಯ, ಡಿ.ಜಿ. ಶಿವರುದ್ರಯ್ಯ, ಕೆ.ಪಿ. ಪರಮೇಶ್ವರಯ್ಯ ಮಾತನಾಡಿ, ಕಾಯದರ್ಶಿ, ಹಾಲು ಪರೀಕ್ಷಕರನ್ನು ನೇಮಿಸಿ ಸಮಸ್ಯೆ ಪರಿಹರಿಸುವ ಆಶ್ವಾಸನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.