ದಾವಣಗೆರೆ: ತಂತ್ರಜ್ಞಾನದಲ್ಲಾಗುತ್ತಿರುವ ಕ್ಷಿಪ್ರ ಕ್ರಾಂತಿಯಿಂದಾಗಿ 2035ರ ವೇಳೆಗೆ ಆಟೊಮೊಬೈಲ್ ಕ್ಷೇತ್ರದ ಶೇ 70 ಉದ್ಯೋಗಗಳು ಕಡಿತವಾಗಲಿವೆ ಎಂದು ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್ ಅಧ್ಯಕ್ಷ ಪ್ರೊ.ಪ್ರತಾಪ್ಸಿನ್ ದೇಸಾಯಿ ಊಹಿಸಿದರು.
ಇಲ್ಲಿನ ಜಿಎಂಐಟಿಯಲ್ಲಿ ಎಂಜಿನಿಯರಿಂಗ್, ಸಂಶೋಧನೆ ಮತ್ತು ನಿರ್ವಹಣೆ ಕ್ಷೇತ್ರಗಳಲ್ಲಿನ ಉದಯೋನ್ಮುಖ ತಾಂತ್ರಿಕತೆಗಳ ಬಗ್ಗೆ ಹಮ್ಮಿಕೊಂಡಿರುವ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
2035ರ ವೇಳೆಗೆ ಸ್ವಯಂಚಾಲಿತ ಕಾರುಗಳದ್ದೇ ಕಾರುಬಾರು ಇರಲಿದೆ. ಇವೆಲ್ಲವೂ ಸೌರ ವಿದ್ಯುತ್ ಚಾಲಿತ ಕಾರುಗಳೇ ಆಗಿರುತ್ತವೆ. ಕಾರುಗಳ ಸಂಖ್ಯೆಯೂ ಶೇ 75ರಷ್ಟು ಕಡಿಮೆಯಾಗಲಿದೆ. ಅಪಘಾತಗಳ ಸಂಖ್ಯೆಯೂ ತಗ್ಗಲಿದೆ. ವಾಹನ ನಿಲುಗಡೆ ಸ್ಥಳದ ಕೊರತೆಯೂ ನಿವಾರಣೆಯಾಗಲಿದೆ. ತಂತ್ರಜ್ಞಾನ ಅಷ್ಟು ವೇಗವಾಗಿ ಅಭಿವೃದ್ಧಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ತಂತ್ರಜ್ಞಾನದ ಕ್ರಾಂತಿಯಿಂದ ಈಗಿನ ಉದ್ಯೋಗಗಳ ಸ್ವರೂಪ ಬದಲಾಗಲಿದೆ. ಹೊಸ ಮಾದರಿಯ ಉದ್ಯಮ, ಉದ್ಯೋಗಗಳು ಸೃಷ್ಟಿಯಾಗಲಿವೆ. ಇದಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಸಜ್ಜುಗೊಳ್ಳಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ಕ್ಷೇತ್ರದಲ್ಲೂ ನಿರೀಕ್ಷಿಸಲಾಗದಷ್ಟು ತಂತ್ರಜ್ಞಾನ ಬೆಳೆಯಲಿದೆ. ‘ತ್ರಿಡಿ’ ಪ್ರಿಂಟ್ ತಂತ್ರಜ್ಞಾನದಿಂದ ಅಂಗಾಂಗಗಳನ್ನು ಪ್ರಯೋಗಾಲಯದಲ್ಲಿ ತಯಾರಿಸಲು ಸಾಧ್ಯವಾಗಲಿದೆ. ತಂತ್ರಜ್ಞಾನದ ಪ್ರಗತಿಯಿಂದ ಶಸ್ತ್ರಚಿಕಿತ್ಸೆಗಳ ವೆಚ್ಚವೂ ಕಡಿಮೆಯಾಗಲಿದೆ. ಆರೋಗ್ಯ ಸೇವೆ ನಿಖರ ಮತ್ತು ಅಗ್ಗವಾಗಲಿದೆ ಎಂದು ಹೇಳಿದರು.
ಆಟೊಮೊಬೈಲ್: 2035ಕ್ಕೆ ಶೇ 70 ಉದ್ಯೋಗ ಕಡಿತಕೊನೆಗೆ ಕಸದ ಬೆಲೆಗೆ ಈ ಕಂಪೆನಿಗಳನ್ನು ಮಾರಲಾಯಿತು. ಮಾರುಕಟ್ಟೆಯಲ್ಲಿ ಈಗ ಉತ್ತುಂಗದಲ್ಲಿರುವ ಕಂಪೆನಿಗಳೂ ಹಿಂದಕ್ಕೆ ಬೀಳಬಹುದು. ಹೀಗಾಗಿ ಯಾವುದೇ ಸಂಸ್ಥೆಯಾದರೂ ನಿರಂತರವಾಗಿ ಅನ್ವೇಷಣೆ, ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯ ಎಂದರು.
ಈಗ ಎಂಜಿನಿಯರಿಂಗ್ ಕಾಲೇಜು ಸೇರಿರುವ ವಿದ್ಯಾರ್ಥಿಗಳು ಪದವಿ ಪಡೆಯುವ ವೇಳೆಗೆ ಅವರು ಕಲಿತ ಓದು ಅಪ್ರಸ್ತುತ ಆಗಲಿದೆ. ಅವರ ಜ್ಞಾನವೂ ಹಳತಾಗಲಿದೆ. ಹೀಗಾಗಿ ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನ ಮಾಡಲೇಬೇಕು. ಇಲ್ಲದಿದ್ದರೆ ಸ್ಪರ್ಧೆಯಿಂದ ಹಿಂದೆ ಬೀಳಬೇಕಾಗುತ್ತದೆ. ಸೋಲೊಪ್ಪಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್ ರಾಜ್ಯ ಘಟಕದ ಅಧ್ಯಕ್ಷ ಡಾ.ಸಿ.ಕೆ.ಸುಬ್ಬರಾಯ ಮಾತನಾಡಿ, ‘ಜ್ಞಾನವೇ ಆಧುನಿಕ ಯುಗದ ಶಕ್ತಿ. ವಿದ್ಯಾರ್ಥಿಗಳು ಮಾಹಿತಿಯನ್ನು ಅಧ್ಯಯನ ಮಾಡಿ ಜ್ಞಾನವಂತರಾಗಬೇಕು. ಜ್ಞಾನ ಚಿಂತನೆಗೆ ಹಚ್ಚುತ್ತದೆ. ಚಿಂತನೆಗಳಿಂದ ಸಂಶೋಧನೆಗಳು ನಡೆಯುತ್ತವೆ. ಸಂಶೋಧನೆಯಿಂದ ಅನ್ವೇಷಣೆ ನಡೆದು ಹೊಸ ತಂತ್ರಜ್ಞಾನ ಹುಟ್ಟಿಕೊಳ್ಳುತ್ತದೆ. ಹೀಗಾಗಿ ಜ್ಞಾನವಂತರಾಗಲು ವಿದ್ಯಾರ್ಥಿಗಳು ಶ್ರಮಿಸಬೇಕು ಎಂದರು.
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ಸಂಶೋಧಕಿ ಡಾ.ಚಿತ್ರಾ ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಎಂಐಟಿ ಪ್ರಾಂಶುಪಾಲ ಡಾ.ಪಿ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಬಿ.ಆರ್.ಶ್ರೀಧರ್, ಡಾ.ಕೆ.ಎನ್.ಭರತ್ ಹಾಜರಿದ್ದರು. ಡಾ.ಡಿ.ಬಿ.ಗಣೇಶ್ ಸ್ವಾಗತಿಸಿದರು. ಸಿ.ಪಿ.ಹರ್ಷಿತಾ ಪ್ರಾರ್ಥಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.