ADVERTISEMENT

ಆಡಳಿತ ಬಲವರ್ಧನೆಗೆ ಬಿಜೆಪಿ ಬೆಂಬಲಿಸಿ: ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 5 ಜೂನ್ 2012, 5:00 IST
Last Updated 5 ಜೂನ್ 2012, 5:00 IST
ಆಡಳಿತ ಬಲವರ್ಧನೆಗೆ ಬಿಜೆಪಿ ಬೆಂಬಲಿಸಿ: ಶೆಟ್ಟರ್
ಆಡಳಿತ ಬಲವರ್ಧನೆಗೆ ಬಿಜೆಪಿ ಬೆಂಬಲಿಸಿ: ಶೆಟ್ಟರ್   

ದಾವಣಗೆರೆ: ರಾಜ್ಯದ ಬಿಜೆಪಿ ಆಡಳಿತ ವ್ಯವಸ್ಥೆ ಬಲಪಡಿಸಲು ಶಿಕ್ಷಕ ಕ್ಷೇತ್ರದ ಮತದಾರರು ಕೈಜೋಡಿಸಬೇಕು ಎಂದು ಸಚಿವ ಜಗದೀಶ ಶೆಟ್ಟರ್ ಕೋರಿದರು.

ನಗರದಲ್ಲಿ ಸೋಮವಾರ ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವೈ.ಎ. ನಾರಾಯಣ ಸ್ವಾಮಿ ಅವರ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಿಸ್ತುಬದ್ಧ ಸಂಘಟನೆಯಾದ ಬಿಜೆಪಿಗೆ ಜನಸಂಘದ ಕಾಲದಿಂದಲೂ ಪದವೀಧರರು ಮತ್ತು ಶಿಕ್ಷಕರು ಬೆಂಬಲಿಸಿದ್ದಾರೆ. ಅವರಿಂದಾಗಿ ಪಕ್ಷ ಇಂದು ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹಾಗೂ ಮಾಜಿ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ  ಅವರು ಶಿಕ್ಷಕ ಸಮುದಾಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಈಗಾಗಲೇ ಶಿಕ್ಷಕರ 42 ಬೇಡಿಕೆಗಳ ಪೈಕಿ 31ನ್ನು ಈಡೇರಿಸಲಾಗಿದೆ.

ಇನ್ನೂ ಉಳಿದ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಲು ಮುಖ್ಯಮಂತ್ರಿ ಜತೆ ಸಮಾಲೋಚನೆ ಮಾಡಲಾಗುವುದು. ಸದ್ಯ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಅಧಿಕ ಬಹುಮತ ಹೊಂದಿದೆ. ಇದೇ ರೀತಿ ಮುಂದುವರಿದರೆ ಆಡಳಿತ ನಡೆಸಲು ಸುಲಭವಾಗುತ್ತದೆ. ವೈ.ಎ. ನಾರಾಯಣ ಸ್ವಾಮಿ ಅವರು ಶಿಕ್ಷಕರ ಹಿತರಕ್ಷಣೆ ಸಂಬಂಧಿಸಿದಂತೆ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.

ಮನೆಯಂಗಳದ ಮಲ್ಲಿಗೆ: ನಾರಾಯಣ ಸ್ವಾಮಿ ಅವರು ನಮ್ಮ ಮನೆಯಂಗಳದ ಮಲ್ಲಿಗೆ, ದಾವಣಗೆರೆ ಬಿಜೆಪಿ ಶಾಸಕ, ಸಂಸದರು ಅತ್ಯಂತ ಜನಾನುರಾಗಿಯಾಗಿದ್ದಾರೆ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಜನಪ್ರತಿನಿಧಿಗಳ ಗುಣಗಾನ ಮಾಡಿದರು.

ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ಇದು ಬಿಜೆಪಿ ಪಾಲಿಗೆ ಅತ್ಯಂತ ಮಹತ್ವದ ಚುನಾವಣೆ. ದಾವಣಗೆರೆ ಬಿಜೆಪಿಯ ಶಕ್ತಿ ಕೇಂದ್ರ. ಇಲ್ಲಿ 29 ಸಾವಿರ ಮತಗಳಿವೆ. ಈ ಶಕ್ತಿ ಕೇಂದ್ರದ ಬಲವರ್ಧನೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.

ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ, `ದೂಡಾ~ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಸಚಿವರಾದ ಶೋಭಾ ಕರಂದ್ಲಾಜೆ,  ಎಸ್.ಎ. ರವೀಂದ್ರನಾಥ್, ಶಾಸಕರಾದ ಎಂ. ಬಸವರಾಜ ನಾಯ್ಕ, ಎಸ್.ವಿ. ರಾಮಚಂದ್ರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಚಿದಾನಂದಪ್ಪ ಐಗೂರು, ಮೇಯರ್ ಸುಧಾ ಜಯರುದ್ರೇಶ್, ಗುರುಸಿದ್ದನಗೌಡ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿ ಭಾಗವಹಿಸಿದ್ದರು. ಡಿ.ಎಸ್. ಶಿವಶಂಕರ್ ಕಾರ್ಯಕ್ರಮ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.