ADVERTISEMENT

ಇಂದಿನಿಂದ ದೊಡ್ಡ ಮಾರಿಕಾಂಬ ಜಾತ್ರೆ

​ಪ್ರಜಾವಾಣಿ ವಾರ್ತೆ
Published 15 ಮೇ 2012, 5:55 IST
Last Updated 15 ಮೇ 2012, 5:55 IST
ಇಂದಿನಿಂದ ದೊಡ್ಡ ಮಾರಿಕಾಂಬ ಜಾತ್ರೆ
ಇಂದಿನಿಂದ ದೊಡ್ಡ ಮಾರಿಕಾಂಬ ಜಾತ್ರೆ   

ಜಗಳೂರು: ಪಟ್ಟಣದ ದೊಡ್ಡ ಮಾರಿಕಾಂಬ ದೇವಿ ಜಾತ್ರೆ ಮೇ 15ರಿಂದ 19ರವರೆಗೆ ಜರುಗಲಿದೆ.
ಪಟ್ಟಣ ಹಾಗೂ ಸಮೀಪದ ಗೊಲ್ಲರಹಟ್ಟಿಯಲ್ಲಿ ಐದು ವರ್ಷಕೊಮ್ಮೆ ಆಚರಿಸುವ ಜಾತ್ರೆಗೆ ಪಟ್ಟಣ ಸಜ್ಜುಗೊಂಡಿದೆ. ಪ್ರಸ್ತುತ ಬರಗಾಲದ ಹಿನ್ನೆಲೆಯಲ್ಲಿ ಜಾತ್ರೆಯನ್ನು  ಆಚರಿಸುವ ಬಗ್ಗೆ ಸಾಕಷ್ಟು ವಾದ, ವಿವಾದಕ್ಕೆ ಕಾರಣವಾಗಿತ್ತು.
 
ಆದರೆ, ಅಂತಿಮವಾಗಿ ಜಾತ್ರೆ ನಡೆಸಲು ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಮೇ 15ರಂದು ಗಂಗಾಪೂಜೆ ನಡೆಯಲಿದೆ. 16ರಂದು ದೇವಿಗೆ ಮೀಸಲು ಒಪ್ಪಿಸುವುದು, 17ರಂದು ದೇವತಾ ಕಾರ್ಯ ಮತ್ತು ಮೇ 18ರಂದು ರಥೋತ್ಸವ ನಡೆಯಲಿದೆ. ಮೇ 17ಮತ್ತು 18ರಂದು ಕಾಟಾ ನಿಕಾಲಿ ಜಂಗೀ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿದೆ.

ಪಟ್ಟಣ ಪಂಚಾಯ್ತಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಲವು ಸಭೆಗಳನ್ನು ನಡೆಸಿದ್ದು, ಜಾತ್ರೆ ಸಂದರ್ಭದಲ್ಲಿ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಕಾಪಾಡುವ ಬಗ್ಗೆ ಚರ್ಚಿಸಲಾಗಿದೆ.

ಜಾತ್ರೆಯ ಹಿನ್ನೆಲೆಯಲ್ಲಿ ಪಟ್ಟಣದ ಮಹಾತ್ಮಗಾಂಧಿ ವೃತ್ತ ಸೇರಿದಂತೆ ಬಹುತೇಕ ಸ್ಥಳಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿದೆ. ಬರಗಾಲವನ್ನೂ ಲೆಕ್ಕಿಸದೆ ಜನತೆ ಉತ್ಸಾಹದಿಂದ ಜಾತ್ರೆಯ ಆಚರಣೆಯಲ್ಲಿ ನಿರತರಾಗಿದ್ದಾರೆ.

ಫ್ಲೆಕ್ಸ್ ಭರಾಟೆ: 
ಜಾತ್ರೆಯ ಅಂಗವಾಗಿ ಪಟ್ಟಣದ ಮೂಲೆಮೂಲೆಗಳಲ್ಲಿ, ರಸ್ತೆಯುದ್ದಕ್ಕೂ ಎರಡೂ ಬದಿಯಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಪೈಪೋಟಿಯಿಂದ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದು, ಪಟ್ಟಣವಿಡೀ ಫ್ಲೆಕ್ಸ್‌ಮಯವಾಗಿದೆ.

ಕುಡಿಯುವ ನೀರಿನ ಸಮಸ್ಯೆ: ಶಾಂತಿ ಸಾಗರದಿಂದ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುವುದು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಜೆ.ಟಿ. ಹನುಮಂತರಾಜು ತಿಳಿಸಿದ್ದಾರೆ.

ಆದರೆ, ಪಟ್ಟಣದ ಹಲವು ಬಡಾವಣೆಗಳಲ್ಲಿ ಕಳೆದ ಮೂರು ದಿನಗಳಿಂದ ನೀರು ಪೂರೈಕೆಯಾಗಿಲ್ಲ. ಅತ್ತ ಶಾತಿಸಾಗರದ ನೀರೂ ಇಲ್ಲದೆ, ಇತ್ತ ಟ್ಯಾಂಕರ್‌ಗಳ ನೀರೂ ಇಲ್ಲದೆ ನಿವಾಸಿಗಳು ಪರದಾಡುವಂತಾಗಿದೆ. ಜಾತ್ರೆಗಾಗಿ ಪ್ರತಿ ಮನೆಯಲ್ಲಿ ಸಂಬಂಧಿಕರು, ನೆಂಟರಿಷ್ಟರು ತುಂಬ ಹೋಗಿದ್ದು, ನೀರಿನ ಸಮಸ್ಯೆಯಾಗಿದೆ. ಶಾಂತಿಸಾಗರದ ನೀರು ಪೂರೈಕೆಯಲ್ಲಿ ಸ್ವಲ್ಪ ವ್ಯತ್ಯಯವಾಗಿದ್ದು, ಸೋಮವಾರ ನೀರು ಪೂರೈಕೆ ಮಾಡಲಾಗಿದೆ ಎಂದು ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಜಾತ್ರೆ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರ ವಹಿಸಬೇಕಾಗಿದೆ. ಆದರೆ ಜೆಡಿ ಬಡಾವಣೆ ಸೇರಿದಂತೆ ಹಲವೆಡೆ ಚರಂಡಿಗಳು ತುಂಬಿ ತುಳುಕುತ್ತಿದ್ದು, ಹಂದಿಗಳ ಹಾಗೂ  ಸೊಳ್ಳೆಗಳ ಸಂತಾನೋತ್ಪತ್ತಿ ಕೇಂದ್ರಗಳಾಗಿ ಪರಿವರ್ತನೆಯಾಗಿವೆ. ಮಲೇರಿಯಾ, ಕಾಲರಾ ವ್ಯಾಪಿಸದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪಟ್ಟಣದ ನಿವಾಸಿಗಳು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.