ADVERTISEMENT

ಉರ್ದು ಸುಂದರ ಭಾಷೆ: ಡಾ.ಹಮೀದ್ ಅಕ್ಬರ್

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 6:20 IST
Last Updated 22 ಫೆಬ್ರುವರಿ 2011, 6:20 IST

ದಾವಣಗೆರೆ: ಉರ್ದು ಭಾಷೆ ಕೇವಲ ಮುಸ್ಲಿಮರಿಗಷ್ಟೇ ಸೀಮಿತವಲ್ಲ. ಇಡೀ ಭಾರತದಲ್ಲಿಯೇ ಎಲ್ಲ ಬಗೆಯ ಜನರು ಹಲವು ಸ್ವರೂಪದಲ್ಲಿ ಬಳಸುವ ಸುಂದರವಾದ ಭಾಷೆ ಎಂದು ಗುಲ್ಬರ್ಗ ವಿವಿ ಕಲಾ ವಿಭಾಗದ ಡೀನ್ ಡಾ.ಎಂ.ಎ. ಹಮೀದ್ ಅಕ್ಬರ್ ಹೇಳಿದರು.ನಗರದಲ್ಲಿ ಸೋಮವಾರ ಉರ್ದು ಅಸೋಸಿಯೇಷನ್ ವತಿಯಿಂದ ‘ಉರ್ದು ಕಾ ಜಶ್ನ್-ಎ-ಬಹಾರಾ (ಉರ್ದು ಹಬ್ಬ)ದ ಅಂಗವಾಗಿ  ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಉರ್ದು ಪ್ರೀತಿಯ ಭಾಷೆ, ಶಾಯಿರಿ, ಗಜಲ್‌ಗಳು ಬಹುತೇಕ ಉರ್ದುವಿನಲ್ಲೇ ರಚನೆಯಾಗಿವೆ. ವಾಜಪೇಯಿಯಂಥ ನಾಯಕರೂ ಉರ್ದು ತಿಳಿದವರಾಗಿದ್ದರು. ಅಮೀರ್ ಖುಸ್ರೋನಿಂದ ಹಿಡಿದು ಇಂದಿನ ಕವಿಗಳವರೆಗೆ ಉರ್ದುವಿನಲ್ಲಿ ಸಾಹಿತ್ಯ ರಚಿಸಿ ಅನೇಕರು ಹೆಸರು ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.ಉರ್ದು ಭಾರತದಲ್ಲೇ ಹುಟ್ಟಿದ ಭಾಷೆ. ಬೇರೆ ಬೇರೆ ಭಾಷೆಗಳ ಪ್ರಭಾವಕ್ಕೆ ಒಳಗಾಯಿತು. ಅರೇಬಿಯಾದಿಂದ ಅರಬ್ಬಿ ಭಾಷೆ, ಇರಾನ್‌ನಿಂದ ಪಾರ್ಸಿ ಹಾಗೂ ದೇಶದಲ್ಲಿ ಹಿಂದಿ ಹಾಗೂ ಸಂಸ್ಕೃತದ ಪ್ರಭಾವವನ್ನೂ ಅದರಲ್ಲಿ ಕಾಣಬಹುದು. ಮೊದಲು ಬರಹಗಳಿಗಾಗಿ ಪಾರ್ಸಿ ಲಿಪಿಯನ್ನು ಅನುಸರಿಸಬೇಕಾಗಿತ್ತು. ಒಟ್ಟಿನಲ್ಲಿ ನಮ್ಮದೇ ದೇಶದ ಸೊಗಡಿನ ಭಾಷೆಯ ಪ್ರಭಾವವನ್ನು ಅರಿಯಬೇಕಾದರೆ, ನಾವು ಇತಿಹಾಸದ ಪುಟಗಳನ್ನು ನೋಡಬೇಕಿದೆ ಎಂದು ಅವರು ಹೇಳಿದರು.

ಸೂಫಿಸಂತರು, ಕವಿ-ಸಾಹಿತಿಗಳು ಗುಜರಾತ್‌ನಿಂದ ವಿಜಾಪುರಕ್ಕೆ ವಲಸೆ ಬಂದು ಕೃತಿಗಳನ್ನು ರಚಿಸಿದರು. ವಿಜಾಪುರದಲ್ಲಿಯೂ ಕವಿ, ಸಂತರಿಗೆ ಬೇಕಾದಂತಹ ವಾತಾವರಣ ಇತ್ತು. ಕೃತಿಗಳಲ್ಲಿ ಗುಜರಾತಿನ ಪ್ರಭಾವ ಕಾಣಬಹುದು. ಆದರೆ, ಆ ಕೃತಿಗಳು ಪೂರ್ಣ ಪ್ರಮಾಣದ ಉರ್ದುವಿನಲ್ಲಿ ಇರಲಿಲ್ಲ ಎಂದು ನುಡಿದರು.ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಡಾ.ಕೆ. ಮಹಮದ್ ಷಹಾಬುದ್ದೀನ್ ಸ್ವಾಗತಿಸಿದರು. ಪ್ರೊ.ಮಹಮದ್ ಹಬೀಬುಲ್ಲಾ ವರದಿ ವಾಚಿಸಿದರು.ಮಿಲ್ಲತ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸೈಯದ್ ಸೈಫುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಡಾ.ಬಿ. ಮಹಮದ್ ದಾವೂದ್ ಪರಿಚಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.