ADVERTISEMENT

ಒಣಭೂಮಿ ಬೆಳೆ ಹಾನಿ ಪರಿಹಾರಕ್ಕೆ ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 8:30 IST
Last Updated 19 ಅಕ್ಟೋಬರ್ 2012, 8:30 IST

ಸಂತೇಬೆನ್ನೂರು: ಮಳೆ ಹಿನ್ನಡೆಯಾದ ಕಾರಣ ಒಣಭೂಮಿಯಲ್ಲಿನ ಬೆಳೆ ಹಾನಿಗೆ ಎಕರೆಗೆ ರೂ ಹತ್ತು ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಗುರುವಾರ ಪ್ರತಿಭಟನೆ ನಡೆಸಿದರು.

ಬೀಜ, ಗೊಬ್ಬರ, ಔಷಧ, ಕಳೆಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಲಾಗಿದೆ. ಕೈಗೆ ಬಂದ ಪೈರು ಬಾಯಿಗೆ ಬರಲಿಲ್ಲ. ಫಸಲು ಬರುವ ವೇಳೆಗೆ ಮಳೆ ಕೈಕೊಟ್ಟು ರೈತರು ಸಂಕಷ್ಟದಲ್ಲಿದ್ದಾರೆ. ದನ, ಕರುಗಳಿಗೆ ಮೇವಿನ ಸಮಸ್ಯೆ ತಲೆದೋರಿದೆ. ಸರ್ಕಾರ ರೈತರ ನೆರವಿಗೆ ಬರಬೇಕು. ನಷ್ಟ ತುಂಬಿ ರೈತರ ಸಮಸ್ಯೆಗೆ ಪರಿಹಾರ ಸೂಚಿಸಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಮುಗಳಿ ಹಳ್ಳಿ ಶ್ರೀ ಕಂಠಪ್ಪ ಒತ್ತಾಯಿಸಿದರು.

ಮುಖ್ಯ ವೃತ್ತದಿಂದ ನಾಡ ಕಚೇರಿವರೆಗೆ ಒಣ ಮೆಕ್ಕೆಜೋಳದ ದಂಟುಗಳನ್ನು ಕೈಯಲ್ಲಿ ಹಿಡಿದು ಪರಿಹಾರಕ್ಕೆ ಒತ್ತಾಯಿಸಿ ಘೋಷಣೆ ಕೂಗಿದರು. ಉಪ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಎನ್. ಹಾಲಪ್ಪ, ಲಕ್ಷ್ಮೀಪತಿ, ರುದ್ರಯ್ಯ, ಪ್ರಸನ್ನ, ಗೌಡ್ರ ಲೋಕಪ್ಪ, ಷಾಹೀಶ್, ಷರೀಫ್, ಮಲ್ಲೇಶಪ್ಪ, ಮಲಹಾಳ್ ಕೃಷ್ಣಪ್ಪ, ಜಿ. ಕೃಷ್ಣಪ್ಪ, ಕೆ. ಶಂಕರಪ್ಪ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.