ADVERTISEMENT

ಕಲೆ, ಕಲಾವಿದನಿಗಿಂತ ಸಂಘಟನೆ ಶ್ರೇಷ್ಠ: ಜೋಶಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 8:55 IST
Last Updated 15 ಜುಲೈ 2012, 8:55 IST

ದಾವಣಗೆರೆ: ಕಲೆ, ಕಲಾವಿದನಿಗಿಂತ ಸಂಘಟನೆ ಶ್ರೇಷ್ಠ ಇದನ್ನು ಕಲಾವಿದರು ತಿಳಿಯಬೇಕು ಎಂದು ಹಿರಿಯ ಯಕ್ಷಗಾನ ಸಾಹಿತಿ ಡಾ.ಎಂ. ಪ್ರಭಾಕರ ಜೋಶಿ ನುಡಿದರು.

ನಗರದ ಬಾಪೂಜಿ ಸಭಾಂಗಣದಲ್ಲಿ ಶನಿವಾರ ಯಕ್ಷಗಾನ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸಂಸ್ಥೆಯ 19ನೇ ವಾರ್ಷಿಕೋತ್ಸವದ ಅಂಗವಾಗಿ `ದಾವಣಗೆರೆ ಯಕ್ಷಜಾತ್ರೆ-2012~ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಕ್ಷಗಾನ ಕಲಾವಿದರು ಸಂಘಟನೆ ಮಾಡಬೇಕು. `ವೇದಿಕೆ ನಮಗಾಗಿ ಅಲ್ಲ; ವೇದಿಕೆಗಾಗಿ ನಾವು~ ಎಂಬುದನ್ನು ಕಲಾವಿದರು ತಿಳಿದುಕೊಳ್ಳಬೇಕು. ಒಂದು ನಾಡಿನ ಸಂಸ್ಕೃತಿ ಮತ್ತೊಂದೆಡೆ ಸ್ಥಾನ ಪಡೆಯುವುದು ಸುಲಭದ ಕೆಲಸವಲ್ಲ. ಪ್ರತಿಯೊಂದು ಸ್ಥಳದಲ್ಲೂ ಒಂದಲ್ಲ ಒಂದು ಸಂಸ್ಕೃತಿ, ಕಲೆ ಅಲ್ಲಿ ನೆಲೆಸಿರುತ್ತದೆ ಎಂದರು.

ಕನ್ನಡದ ಶ್ರೇಷ್ಠ ಕಲೆಗಳಲ್ಲಿ ಯಕ್ಷಗಾನ ಪ್ರಮುಖವಾದ ಕಲೆಯಾಗಿದೆ. ಪ್ರಸ್ತುತ ಟಿ.ವಿ. ಮಾಧ್ಯಮಗಳ ನಡುವೆ ಕಲೆ ಉಳಿಯಬೇಕು. ಯಾವುದೇ ಕಾರ್ಯಕ್ರಮ ರೂಪುಗೊಳ್ಳಲು ತಿಂಗಳುಗಟ್ಟಲೆ ಶ್ರಮ, ಪೂರ್ವತಯಾರಿ ನಡೆದಿರುತ್ತದೆ. ಪ್ರೇಕ್ಷಕರ ಪ್ರಮಾಣ ಹೆಚ್ಚಿಸಲು ಸಂಘಟನೆ ಅನಿವಾರ್ಯ. ಕಾರ್ಯಕ್ರಮದ ಯಶಸ್ವಿಗೆ ಅವರೇ ಕಾರಣರಾಗುತ್ತಾರೆ ಎಂದರು.

ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ, ಕುಂದಾಪುರದ ಹಿರಿಯ ಯಕ್ಷಗಾನ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ, ಜಬ್ಬಾರ್ ಸುಮೊ, ಜಗದೀಶ ಹೆಗಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ನಿರ್ದೇಶಕ  ಎಸ್.ಎಚ್. ಶಿವರುದ್ರಪ್ಪ, ಯಕ್ಷಗಾನ ಕಲಾವಿದ ಐರಬೈಲು ಆನಂದ ಶೆಟ್ಟಿ, ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ, ಅಧ್ಯಕ್ಷ ಮಲ್ಯಾಡಿ ಪ್ರಭಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬೇಳೂರು ಸಂತೋಷಕುಮಾರ್ ಶೆಟ್ಟಿ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್. ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ರೇಖಾ ನಾಗರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.