ADVERTISEMENT

ಕಾಣಿಕೆ ಹುಂಡಿಯಲ್ಲಿ ಓ ದೇವರೇ ಸಾಲ ತೀರಿಸು...

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2011, 9:05 IST
Last Updated 5 ಮಾರ್ಚ್ 2011, 9:05 IST

ಹರಿಹರ: ‘ಓ ದೇವರೆ ನನ್ನ ಸಾಲದ ಪಟ್ಟಿಯನ್ನು ನಿನಗೆ ಒಪ್ಪಿಸುತ್ತಿದ್ದೇನೆ. ದಯವಿಟ್ಟು ಸಾಲಗಳನ್ನು ತೀರಿಸು’.‘ನನ್ನ ಸ್ನೇಹಿತರನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸು ಮಾಡಿಸು. ನನ್ನ ತಂದೆ ಕೈ ಅರಾಮಾಗಬೇಕು. ಎಸ್‌ಎಸ್‌ಎಲ್‌ಸಿ ಪಾಸ್ ಆದ ಮೇಲೆ ಪಿಯುಸಿಯಲ್ಲಿ ಉತ್ತಮ ಅಂಕ ಪಡೆಯಬೇಕು.

‘ನಾನು ಚಿಕ್ಕವನಿದ್ದಗಿನಿಂದ ಪ್ರೀತಿಸುತ್ತಿದ್ದ ಹುಡುಗಿ ನನ್ನ ಸೊಸೆಯಾಗಿ ಬಂದಿದ್ದಾಳೆ. ನನ್ನ ಕಾಮ, ಕ್ರೋಧಗಳನ್ನು ನಾಶ ಮಾಡು. ನನಗೆ ಒಳ್ಳೆಯ ಬುದ್ದಿಕೊಡಪ್ಪ’
-ಹೀಗೆ ಹಲವಾರು ವಿವಿಧ ಬಗೆಯ ಸಮಸ್ಯೆಗಳನ್ನು ವಿವರಿಸಿ ಅವುಗಳಿಗೆ ಸೂಕ್ತ ಪರಿಹಾರ ನೀಡುವಂತೆ ಪ್ರಾರ್ಥಿಸಿದ ಚೀಟಿಗಳು ಸಿಕ್ಕಿದ್ದು ಶುಕ್ರವಾರ ತೆರೆಯಲಾದ ಪೇಟೆ ಆಂಜನೇಯ ದೇವಸ್ಥಾನದ ಹುಂಡಿಯಲ್ಲಿ.

2005ರ ಸೆಪ್ಟೆಂಬರ್‌ನಲ್ಲಿ ದೇವಸ್ಥಾನದ ಹುಂಡಿಯನ್ನು ತೆರೆಯಲಾಗಿತ್ತು. ಆಗ ಹುಂಡಿಯಲ್ಲಿ ಒಟ್ಟು ` 7,290 ಶೇಖರಣೆಯಾಗಿತ್ತು. ಶುಕ್ರವಾರ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಒಟ್ಟು ` 2,15,500 ದೊರೆತಿದೆ.ಇಂದಿನ ಆಧುನಿಕ ಯುಗದಲ್ಲೂ ದೇವರ ಬಗ್ಗೆ ಉತ್ಕಟ ಹಾಗೂ ಬಲವಾದ ನಂಬಿಕೆ ಇಟ್ಟು, ಅವನಿಗೆ ಮೌಖಿಕವಾಗಿ, ಮಾನಸಿಕವಾಗಿ ಅಷ್ಟೇ ಅಲ್ಲದೇ ಪತ್ರಮುಖೇನ ತಮ್ಮ ಸಮಸ್ಯೆಗಳನ್ನು ಕಾಣದ ದೇವರಿಗೆ ವಿವರಿಸುವ ಮುಗ್ಧ ಮುಗ್ಧರಿದ್ದಾರೆ ಎನ್ನುವುದಕ್ಕೆ ಹುಂಡಿಯಲ್ಲಿ ದೊರಕಿದೆ ಚೀಟಿಗಳೇ ಸಾಕ್ಷಿ ಅಲ್ಲವೇ!

ದೇವಸ್ಥಾನ ಉದ್ಘಾಟನೆ
‘ಆಸೆಗಳಿಗೆ ದಾಸರಾದವರು ಗುದ್ದಿಗೆ ಹೋದರೆ, ಆಸೆಗಳನ್ನೇ ದಾಸನ್ನಾಗಿ ಮಾಡಿಕೊಂಡವರು ಮಾತ್ರ ಗದ್ದುಗೆ ಏರುತ್ತಾರೆ’ ಎಂದು ರಾಂಪುರ ಸುಕ್ಷೇತ್ರದ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಅಭಿಪ್ರಾಯಪಟ್ಟರು.ತಾಲ್ಲೂಕಿನ ನಂದಿಗಾವಿಯಲ್ಲಿ ನೂತನವಾಗಿ ನಿರ್ಮಿಸಿರುವ ಗುರುಕೊಟ್ರಪ್ಪಜ್ಜ ಅವರ ಗದ್ದುಗೆ ದೇವಸ್ಥಾನ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಾಜಿ ಶಾಸಕ ಕೆ. ಮಲ್ಲಪ್ಪ ಸಮಾರಂಭ ಉದ್ಘಾಟಿಸಿದರು. ಗದ್ದುಗೆ ದೇವಸ್ಥಾನವನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು. ದಾವಣಗೆರೆ -ಹರಿಹರ ಅರ್ಬನ್ ಬ್ಯಾಂಕ್‌ನ ಅಧ್ಯಕ್ಷ ಎನ್.ಎಂ.ಜೆ.ಬಿ. ಆರಾಧ್ಯ ಅವರನ್ನು ಗೌರವಿಸಲಾಯಿತು. ದೇವಸ್ಥಾನ ಸಮಿತಿಯ ಅಧ್ಯಕ್ಷ ಎನ್.ಎಂ. ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆ.ಪಿ. ಸಿದ್ಧಬಸಪ್ಪ, ಎನ್. ಹುಚ್ಚಪ್ಪ, ಟಿ. ಓಬಳಪ್ಪ, ಎಂ.ವಿ. ಮಹಾಬಲ ಶ್ರೇಷ್ಠಿ, ಭರಮಗೌಡ, ರುದ್ರಗೌಡ, ಬೀರಪ್ಪ ಇದ್ದರು. ಪೂಜಾ ಸ್ವಾಗತಿಸಿದರು. ಎಸ್.ಎಚ್. ಹೂಗಾರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.