ಮಾಯಕೊಂಡ: ಹೋಬಳಿಯ ಬಾಡ, ಮಳಲಕೆರೆ ಮತ್ತು ಶ್ಯಾಗಲೆ ಗ್ರಾಮಗಳಲ್ಲಿ ರಿಯಾಯಿತಿ ದರದಲ್ಲಿ ಭತ್ತದ ಬಿತ್ತನೆ ಬೀಜ ವಿತರಣಾ ಕೇಂದ್ರ ತೆರೆಯಲಾಗಿದೆ.
1 ಕೆ.ಜಿಗೆರೂ 7ರಂತೆ ಸಹಾಯ ಧನ ನೀಡಿರೂ 637ಗೆ 25 ಕೆ.ಜಿ ಭತ್ತದ ಚೀಲ ವಿತರಿಸಲಾಗುತ್ತಿದೆ. ವಿತರಣಾ ಕೇಂದ್ರ ತೆರೆದ ಗ್ರಾಮಗಳ ವ್ಯವಸಾಯ ಪತ್ತಿನ ಸಹಕಾರಿ ಕೇಂದ್ರಗಳಲ್ಲಿ ಭತ್ತದ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ.
ಕೃಷಿ ಇಲಾಖೆ ಸದ್ಯಕ್ಕೆ ಜೆಜೆಎಲ್- 1798 ತಳಿಯ ಬಿತ್ತನೆ ಬೀಜ ಸರಬರಾಜು ಮಾಡಿದೆ. ಬಿಪಿಟಿ ಸೋನಾ, ಜೆಜೆಎಲ್ 1010, ಐ.ಆರ್.64 ತಳಿಗಳನ್ನು ವಿತರಿಸಲಾಗುತ್ತದೆ.
ಆದರೆ ರೈತರು ಹೆಚ್ಚಾಗಿ ಕಾವೇರಿ ಸೋನಾ, ಜಯಶ್ರೀ ಸೋನಾ, ಮತ್ತು ನಲ್ಲೂರು ಸೋನಾ ತಳಿಗಳ ಭತ್ತದ ಬಿತ್ತನೆ ಬೀಜ ಅಪೇಕ್ಷಿಸುತ್ತಿದ್ದು, ಇಲಾಖೆ ಅಂಥ ತಳಿಗಳ ಬೀಜ ರಿಯಾಯಿತಿ ದರದಲ್ಲಿ ವಿತರಿಸುತ್ತಿಲ್ಲ. ರಿಯಾಯಿತಿ ದರದಲ್ಲಿ ವಿತರಿಸುವ ಬಿತ್ತನೆ ಬೀಜಗಳಿಗೆ ಹೆಚ್ಚಾಗಿ ಬೇಡಿಕೆ ಇಲ್ಲದಾಗಿ ವಹಿವಾಟು ನೀರಸವಾಗಿದೆ.
ಇಲಾಖೆ ವಿತರಿಸುವ ಜೆಜೆಎಲ್ 1798 ಮತ್ತಿತರ ತಳಿಗಳು ಫಸಲಿಗೆ ಬರಲು 110-120 ದಿನಗಳನ್ನು ತೆಗೆದುಕೊಳ್ಳುತ್ತವೆ. ಇಳುವರಿಯೂ ಮಾರುಕಟ್ಟೆಯಲ್ಲಿ ಮಾರಾಟವಾಗುವ ತಳಿಗಳಿಗೆ ಹೋಲಿಸಿದರೆ ಕಡಿಮೆಯಾಗಿ ರುತ್ತದೆ. ಮಾರುಕಟ್ಟೆ ಧಾರಣೆಯೂ ಸುಮಾರುರೂ 200ರಷ್ಟು ಕಡಿಮೆ ಇರುತ್ತದೆ. ಇದರಿಂದಾಗಿ ಸಹಜವಾಗಿ ರೈತರು ಕಡಿಮೆ ಅವಧಿಯಲ್ಲಿ ಕೊಯ್ಲಿಗೆ ಬರುವ, ಉತ್ತಮ ಇಳುವರಿ ನೀಡುವ ಬಿತ್ತನೆ ಬೀಜ ಬಯಸುತ್ತಿದ್ದಾರೆ. ಇಲಾಖೆ ವಿತರಿಸುವ ಬೀಜಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದೆ ಎಂಬ ಅಸಮಾಧಾನವೂ ರೈತರಲ್ಲಿದೆ.
ಬಾಡದ ಮಾರಾಟ ಕೇಂದ್ರದಲ್ಲಿ 2010-11ರಲ್ಲಿ 650 ಕ್ವಿಂಟಲ್, 2011-12ರಲ್ಲಿ 450 ಕ್ವಿಂಟಲ್ ಮತ್ತು 2012-13ರಲ್ಲಿ 200 ಕ್ವಿಂಟಲ್ ಬಿತ್ತನೆ ಬೀಜ ಮಾರಾಟವಾಗಿದೆ. ಮೂರು ವರ್ಷಗಳಿಂದ ಮಾರಾಟ ಕಡಿಮೆ ಯಾಗುತ್ತಿದ್ದರೂ ಇಲಾಖೆಯು ರೈತರು ಬಯಸುವ ತಳಿಯ ಬಿತ್ತನೆ ಬೀಜ ವಿತರಿಸಲು ಮುಂದಾಗಿಲ್ಲ ಎಂದು ರೈತರು ದೂರುತ್ತಾರೆ.
ಉತ್ತಮ ತಳಿಗಳ ಕೊರತೆ ಒಂದು ಕಡೆಯಾದರೆ, ಬಿತ್ತನೆ ಬೀಜದ ಜತೆಗೆರೂ 355 ಬೆಲೆಯ ಜಿಂಕ್, ಬೋರಾನ್ ಮತ್ತು ಜಿಪ್ಸಂ ಕಡ್ಡಾಯವಾಗಿ ಖರೀದಿ ಸಬೇಕಾಗಿದೆ. ಸಬ್ಸಿಡಿ ದರವೂ ಕಡಿಮೆ ಇದೆ. ಆದಷ್ಟು ಸಹಾಯಧನ ಹೆಚ್ಚಿಸಿ, ಸ್ಪರ್ಧಾತ್ಮಕ ಮಾರುಕಟ್ಟೆ ಬೆಲೆಗೆ ಬಿತ್ತನೆ ಬೀಜ ಒದಗಿಸಬೇಕು ಎಂದು ರೈತರು ಆಗ್ರಹಿಸುತ್ತಾರೆ.
ತಾಲ್ಲೂಕಿನಲ್ಲಿ 22 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಪ್ರದೇಶವಿದ್ದು, 5,500 ಕ್ವಿಂಟಲ್ ಬಿತ್ತನೆ ಬೀಜ ಅವಶ್ಯಕತೆಯಿದೆ. ಕಳೆದ ಬೇಸಿಗೆಯಲ್ಲಿ 3,900 ಕ್ವಿಂಟಲ್ ದಾಖಲೆಯ ಭತ್ತದ ಬೀಜ ಮಾರಾಟವಾಗಿದೆ. `ಭೂ ಚೇತನ'ದಡಿ ವಿತರಿಸಲಾಗುವ ಜಿಂಕ್, ಜಿಪ್ಸಂ ಮತ್ತು ಬೋರಾನ್ಗಳನ್ನು ಬಳಸಿದರೆ ಭೂ ಸಾರ ಹೆಚ್ಚುತ್ತದೆ. ಕಳೆದ ಬಾರಿ 50-60 ಕ್ವಿಂ. ಇಳುವರಿ ಪಡೆದ ರೈತರು ಸಾವಯವ ಮತ್ತು ಭೂ ಚೇತನ ಪರಿಕರ ಬಳಸಿದ್ದಾರೆ ಎಂಬುದನ್ನು ರೈತರು ಗಮನಿಸಬೇಕು. ಇಲಾಖೆ ವಿತರಿಸುವ ಬೀಜ ಕರ್ನಾಟಕ ರಾಜ್ಯ ಬಿತ್ತನೆ ಬೀಜ ಪ್ರಮಾಣನ ಸಂಸ್ಥೆಯಿಂದ ಮತ್ತು ಪ್ರಮಾಣನ ಏಜೆನ್ಸಿಯಿಂದಲೂ ಶಿಫಾರಸುಗೊಂಡಿದೆ. ರೈತರು ಇಲಾಖೆ ವಿತರಿಸುವ ಬೀಜಗಳನ್ನೇ ಬಳಸಬೇಕು ಎನ್ನುತ್ತಾರೆ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಆರ್.ಜಿ. ಗೊಲ್ಲರ್.
ಉತ್ತಮ ಬೆಲೆಗೆ ಅಧಿಕ ಇಳುವರಿ ಮತ್ತು ಕಡಿಮೆ ಅವಧಿಯ ತಳಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಇಲಾಖೆ ಇನ್ನೂ ಕಡಿಮೆ ಬೆಲೆಗೆ ಬೀಜ ವಿತರಣೆ ಮಾಡಿದರೆ ಅನುಕೂಲ ವಾಗುತ್ತದೆ. ಭೂ ಚೇತನದಡಿ ನೀಡುವ ಪೋಷಕಾಂಶ ಬಳಸಿದರೆ ಭೂಮಿ ಫಲವತ್ತಾದರೂ ಸಬ್ಸಿಡಿ ದರ ಹೆಚ್ಚಿಸಿ ರೈತರಿಗೆ ನೆರವಾಗಬೇಕು ಎನ್ನುತ್ತಾರೆ ಬಾಡ ಗ್ರಾಮದ ಬಿ.ಎಚ್. ರುದ್ರೇಶ್, ಜಿ. ಮಂಜಪ್ಪ ಮತ್ತು ಜೆಡಿಎಸ್ ಮುಖಂಡ ಅಣಬೇರು ಅನಿಲ್ ಕುಮಾರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.