ಹೊನ್ನಾಳಿ: ಜವಾಬ್ದಾರಿಯುತ ಸ್ಥಾನದಲ್ಲಿರುವರು ಬೇಜವಾಬ್ದಾರಿ ಯುತ ಹೇಳಿಕೆ ನೀಡಬಾರದು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎಚ್.ಜಿ. ಬಸವರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಯೂರಿಯಾ ಗೊಬ್ಬರ ಬಳಕೆಯಿಂದ ಬೆಳೆ ನಾಶವಾಗಿದೆ ಎಂಬ ಜಂಟಿ ಕೃಷಿ ನಿರ್ದೇಶಕರ ಹೇಳಿಕೆ ಖಂಡಿಸಿ ಶುಕ್ರವಾರ ಹೊನ್ನಾಳಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಬೀಗ ಜಡಿದು ಪ್ರತಿಭಟನೆ ನಡೆಸಿದ ವೇಳೆ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಬರಗಾಲದಿಂದ ಜನ-ಜಾನುವಾರುಗಳು ನೀರಿಲ್ಲದೇ ನರಳುತ್ತಿವೆ. ಮಳೆ ಕೊರತೆಯಿಂದ ಬೆಳೆಗಳು ಒಣಗಿವೆ. ಆದರೆ, ಜಂಟಿ ನಿರ್ದೇಶಕರು ಯೂರಿಯಾ ಗೊಬ್ಬರ ಬಳಕೆಯಿಂದ ಬೆಳೆ ನಾಶವಾಗಿದೆ ಎಂದು ಹೇಳುತ್ತಾರೆ. ಇದು ಸರಿಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಹಸಿರು ಸೇನೆ ಅಧ್ಯಕ್ಷ ಭರ್ಮಪ್ಪ ಮಾಸಡಿ ಮಾತನಾಡಿ, ಜಂಟಿ ಕೃಷಿ ನಿರ್ದೇಶಕರಿಗೆ ವಯಸ್ಸಾಗಿದೆ. ತಮಗೆ ಹುದ್ದೆ ನಿರ್ವಹಿಸುವುದು ಸಾಧ್ಯವಾಗದಿದ್ದರೆ ಗೌರವಯುತವಾಗಿ ಸ್ವಯಂ ನಿವೃತ್ತಿ ಪಡೆದು ಮನೆಗೆ ತೆರಳಲಿ. ಅನೇಕ ವಿದ್ಯಾವಂತ ನಿರುದ್ಯೋಗಿಗಳಿದ್ದಾರೆ. ಅವರಿಗೆ ಕೆಲಸ ನಿರ್ವಹಿಸಲು ಅವಕಾಶ ನೀಡಲಿ ಎಂದು ಕುಟುಕಿದರು.
ಎಂ. ಬೆನಕಯ್ಯ, ಎಂ. ಮಂಜಪ್ಪ, ವೆಂಕಟೇಶ್ ಮಾಸಡಿ, ಎಸ್. ರವೀಂದ್ರ, ಫಾಲಾಕ್ಷಪ್ಪ ಎಚ್. ಗೋಪಗೊಂಡನಹಳ್ಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.