ಚನ್ನಗಿರಿ: ರೈತರ ಮತ್ತು ಬಡವರ ವಿರೋಧಿಯಾದ ಕೇಂದ್ರ ಸರ್ಕಾರವನ್ನು ಮನೆಗೆ ಕಳುಹಿಸಲು ಜನರು ಕಾದಿದ್ದಾರೆ ಎಂದು ಕಾಂಗ್ರೆಸ್ ವೀಕ್ಷಕ ರಕ್ಷಿತ್ ಶಿವರಾಂ ಹೇಳಿದರು.
ಚನ್ನಗಿರಿಯ ಜವಳಿ ಸಮುದಾಯ ಭವನದಲ್ಲಿ ಸೋಮವಾರ ನಡೆದ ಚನ್ನಗಿರಿ ಬ್ಲಾಕ್ ಬೂತ್ ಮಟ್ಟದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಕಾರ್ಯಕರ್ತ ಸಭೆಯಲ್ಲಿ ಅವರು ಮಾತನಾಡಿದರು.
ಪ್ರದಾನಮಂತ್ರಿಯಾಗಿ ನರೇಂದ್ರ ಮೋದಿ ಕೈಗೊಂಡ ನಿರ್ಧಾರಗಳಿಂದ ಜನಸಾಮಾನ್ಯರ ಬ್ಯಾಂಕ್ ವ್ಯವಹಾರಗಳಿಗೆ ತೊಂದರೆಯಾಗಿದೆ. ನೋಟು ಅಮಾನ್ಯೀಕರಣದಿಂದಾಗಿ ಬ್ಯಾಂಕ್ ವ್ಯವಹಾರಗಳೆಲ್ಲ ಏರುಪೇರಾಗಿವೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವುದು ಖಚಿತ ಎಂದರು.
ಕೊನೆಯ ಚುನಾವಣೆ:
ಶಾಸಕ ವಡ್ನಾಳ್ ರಾಜಣ್ಣ ಮಾತನಾಡಿ ‘ಚನ್ನಗಿರಿ ತಾಲ್ಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಕ್ಷೇತ್ರದ ಇತಿಹಾಸದಲ್ಲೇ ಇಷ್ಟೊಂದು ಅನುದಾನ ಬಂದಿಲ್ಲ. ಈಗಾಗಲೇ ಪ್ರತೀ ಹಳ್ಳಿಯ ಮನೆಗಳ ಸದಸ್ಯರನ್ನು ಕಾರ್ಯಕರ್ತರೊಂದಿಗೆ ಭೇಟಿ ಮಾಡಿದ್ದೇನೆ. ಇದು ನನಗೆ ಕೊನೆಯ ಚುನಾವಣೆ. ಮುಂದೆ ಬೇರೆಯವರಿಗೆ ಅವಕಾಶ ನೀಡುವ ಉದ್ದೇಶದಿಂದ ಇದನ್ನು ಮೊದಲೇ ಘೋಷಣೆ ಮಾಡಿಕೊಂಡಿದ್ದೇನೆ’ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಯೋಗೇಶ್ ಸೇರಿದಂತೆ ಹಲವರು ಕಾಂಗ್ರೆಸ್ ಸೇರಿದರು. ಸಂಘಟನಾ ಕಾರ್ಯದರ್ಶಿ ಶಶಿಕಲಾ ಮೂರ್ತಿ, ಅಮಾನುಲ್ಲಾ, ಸಿ.ಎಚ್.ಶ್ರೀನಿವಾಸ್, ಸಿ.ನಾಗರಾಜ್, ಶಿವರಾಜ್, ಸರ್ದಾರ್, ಪಾಂಡೂಮಟ್ಟಿ ಲೋಕಣ್ಣ, ಕೆ.ಜಿ.ಬಸಲಿಂಗಪ್ಪ, ಶಿವರತ್ನಮ್ಮ, ಜವಳಿ ಪ್ರಕಾಶ್, ಜಗದೀಶ್, ಜಯಣ್ಣ, ಬಿ.ಆರ್.ಹಾಲೇಶ್, ಶಿವಗಂಗ ಬಸವರಾಜ್, ಕೆ.ಆರ್.ಮಂಜುನಾಥ್, ಜಬೀವುಲ್ಲಾ ಚನ್ನಗಿರಿ ಬ್ಲಾಕ್ ಬೂತ್ ಮಟ್ಟದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಕಾರ್ಯದರ್ಶಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.