ADVERTISEMENT

ಗ್ರಾಮೀಣ ಪ್ರದೇಶದಲ್ಲೂ ಕನ್ನಡದ ತಾತ್ಸಾರ

ಹರಪನಹಳ್ಳಿ: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡುಂಡಿರಾಜ್ ಕಳವಳ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 5:19 IST
Last Updated 25 ಡಿಸೆಂಬರ್ 2012, 5:19 IST

ಹರಪನಹಳ್ಳಿ (ನೊಳಂಬ ಮಹಾದೇವಿ ವೇದಿಕೆ): ಕನ್ನಡ ಭಾಷೆ ಬಗ್ಗೆ ಜನರಲ್ಲಿ ಕೀಳರಿಮೆ ಮನೋಭಾವ ಮೂಡಿದ್ದು, ಇದು ಪಟ್ಟಣ ಪ್ರದೇಶದಲ್ಲಿ ಮಾತ್ರ ಕಾಣುತ್ತಿದ್ದೇವೆ. ಆದರೆ, ಇಂದು ಗ್ರಾಮೀಣ ಪ್ರದೇಶದಲ್ಲಿಯೂ ಕೂಡ ಕನ್ನಡದ ಬಗ್ಗೆ ತಾತ್ಸಾರ ಬೆಳೆದಿರುವುದು ಅಪಾಯಕಾರಿ ಬೆಳವಣಿಗೆ ಎಂದು ಖ್ಯಾತ ಹಾಸ್ಯ ಸಾಹಿತಿ, ಅಂಕಣಕಾರ ಎಚ್. ಡುಂಡಿರಾಜ್ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಹಮ್ಮಿಕೊಂಡಿರುವ ತಾಲ್ಲೂಕಿನ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಸೋಮವಾರ ಅವರು ಮಾತನಾಡಿದರು.

ಬೌದ್ಧಿಕ ಹಸಿವು ನೀಗಿಸಲು ಸಾಹಿತ್ಯ ಬೇಕು. ಸಾಹಿತ್ಯಾಸಕ್ತಿ ಇಲ್ಲದವರು ಪಶು ಇದ್ದಂತೆ ಎಂದ ಅವರು ಸಾಹಿತ್ಯ ಎಂಬುದು ಕನ್ನಡಕವಿದ್ದಂತೆ. ಸಾಹಿತ್ಯದ ಅರಿವಿಲ್ಲದೇ ಬರಿಗಣ್ಣಿನಿಂದ ನೋಡಿದರೇ ಏನೂ ಕಾಣಿಸದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಕರುಣಾಕರ ರೆಡ್ಡಿ ಮಾತನಾಡಿ, ಅನೇಕ ವರ್ಷಗಳ ಇತಿಹಾಸದ ಹಿನ್ನೆಲೆಯಿರುವ ಕನ್ನಡ ಭಾಷೆಯನ್ನು ಅನೇಕ ಕವಿಗಳು ಶ್ರೀಮಂತಗೊಳಿಸಿದ್ದಾರೆ. ಪ್ರತಿಯೊಬ್ಬರೂ ಕನ್ನಡ ಮಾತಾಡುವ ಮೂಲಕ ಭಾಷೆ ಉಳಿಸಬೇಕಿದೆ ಎಂದು ಹೇಳಿದರು.

ಸಮ್ಮೇಳನ ಅಧ್ಯಕ್ಷ ಡಿ. ರಾಮನಮಲಿ ಅವರು, ಕೇಂದ್ರ ಸರ್ಕಾರದ ಹಿಂದಿ ದಬ್ಬಾಳಿಕೆ, ರಾಜ್ಯ ಸರ್ಕಾರದ ಇಂಗ್ಲೀಷ್ ವ್ಯಾಮೋಹ ನೆರೆ ರಾಜ್ಯಗಳ ಭಾಷಾ ಒತ್ತುವರಿ ಮೇಲಾಗಿ ಅಮೇರಿಕದಂತಹ ರಾಷ್ಟ್ರಗಳ ಇಂಗ್ಲಿಷ್ ದಾಳಿಯಿಂದ ಕನ್ನಡವನ್ನು ರಕ್ಷಿಸಿಕೊಳ್ಳಬೇಕಾದ ಅಗ್ನಿ ಪರೀಕ್ಷೆ ನಮ್ಮ ಮುಂದಿದೆ. ಕನ್ನಡ ಭಾಷೆಯು ಪಂಡಿತರ ವ್ಯಾಕರಣ ಅಥವಾ ಹುಸಿ ಹೋರಾಟಗಾರರ ಘೋಷಣೆಗಳಿಂದ ಸೋಗಲಾಡಿಗಳ ಭಾಷಣಗಳಿಂದ ಉಳಿಯುವುದಿಲ್ಲ. ಅದು ಈ ಮಣ್ಣಿನ ದುಡಿಮೆಗಾರರ ಕೈ ಬಲಪಡಿಸುವುದರಿಂದ ಮಾತ್ರ ಉಳಿಯುತ್ತದೆ ಎಂದರು. 

ತಾ.ಪಂ. ಸದಸ್ಯ ಎನ್. ಕೋಟ್ರೇಶ್, ಹಿರಿಯ ವಕೀಲಪಿ. ರಾಮನಗೌಡ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎ.ಆರ್.ಉಜ್ಜನಪ್ಪ, ಮುಖಂಡ ಜಿ. ನಂಜನಗೌಡ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಚ್.ಎಂ. ವೀರಭದ್ರಯ್ಯ ಮಾತನಾಡಿದರು.

ಉಪನ್ಯಾಸಕ ಎಂ.ಪಿ.ಎಂ. ಶಾಂತವೀರಯ್ಯ ಅಧ್ಯಕ್ಷತೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಹರಪನಹಳ್ಳಿ ತಾಲ್ಲೂಕಿನ ಕೊಡುಗೆ  ಕುರಿತು ಕನ್ನಡ ವಿವಿ ಪ್ರಾಧ್ಯಾಪಕ ಎ.ಎಸ್. ಪ್ರಭಾಕರ್, ಕೃಷಿ ಮತ್ತು ಜಾಗತೀಕರಣದ ಸವಾಲುಗಳು ಕುರಿತು ಸಹಾಯಕ ಕಷಿ ನಿರ್ದೇಶಕ ಆರ್. ತಿಪ್ಪೇಸ್ವಾಮಿ, ಹರಪನಹಳ್ಳಿ ತಾಲ್ಲೂಕು ಐತಿಹಾಸಿಕ ಸಂದರ್ಭಗಳು ವಿಷಯ ಕುರಿತು ಡಾ.ಮಾಡ್ಲಿಗೇರಿ ಕೊಟ್ರೇಶ್ ಉಪನ್ಯಾಸ ನೀಡಿದರು. ಸಾಹಿತಿ ಜಿ.ಬಸವಂತಪ್ಪ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಸಾಹಿತಿ ಲಕ್ಷ್ಮಣಗಂಟೆ, ಡಾ.ಕೆ. ರುದ್ರಪ್ಪ ಇದ್ದರು.

ಮುಖಂಡರಾದ ಆರುಂಡಿ ನಾಗರಾಜ್, ಪುರಸಭೆ ಅಧ್ಯಕ್ಷ ಬಿ.ಮಹಬೂಬ್‌ಸಾಹೇಬ್, ಗುಂಡಗತ್ತಿ ಕೊಟ್ರಪ್ಪ, ಡಾ.ಎಸ್.ಎನ್. ಮಹೇಶ್, ಎಂ.ಪಿ.ಚಂದ್ರಪ್ಪ, ಬಿ. ರಾಮಪ್ರಸಾದ್‌ಗಾಂಧಿ, ಎಚ್. ದೇವರಾಜ್, ಕಾರ್ಯದರ್ಶಿ ಪದ್ಮರಾಜ್‌ಜೈನ್, ಕೆ.ಎಸ್. ವೀರಭದ್ರಪ್ಪ, ರಾಘವೇಂದ್ರಶೇಷ್ಠಿ, ತೆಲಿಗಿ ಯೋಗಿಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.