ADVERTISEMENT

ಚನ್ನಗಿರಿ: ಆಮೆಗತಿಯಲ್ಲಿ ಕ್ರೀಡಾಂಗಣ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 6:10 IST
Last Updated 3 ಫೆಬ್ರುವರಿ 2011, 6:10 IST

ಚನ್ನಗಿರಿ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಒಂದು ವರ್ಷದ ಹಿಂದೆ ಪ್ರಾರಂಭಗೊಂಡ ತಾಲ್ಲೂಕು ಕ್ರೀಡಾಂಗಣದ ಕಾಮಗಾರಿ ಮುಕ್ತಾಯಗೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಅಂದು ಕ್ರೀಡಾ ಸಚಿವರಾಗಿದ್ದ ಗೂಳಿಹಟ್ಟಿ ಡಿ. ಶೇಖರ್ ಅವರು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ವತಿಯಿಂದ ಈ ಕ್ರೀಡಾಂಗಣ ನಿರ್ಮಾಣಕ್ಕೆ ್ಙ 1.50 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದರು. ಭೂ ಸೇನಾ ನಿಗಮಕ್ಕೆ ಕಾಮಗಾರಿಯ ಗುತ್ತಿಗೆ ನೀಡಲಾಗಿತ್ತು. ಪ್ರಾರಂಭದ ದಿನಗಳಲ್ಲಿ ವೇಗವಾಗಿ ನಡೆದ ಕಾಮಗಾರಿ ಕಳೆದ ಐದಾರು ತಿಂಗಳಿಂದ ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿರುವುದು ಕ್ರೀಡಾಪಟುಗಳಿಗೆ ಬೇಸರ ತರಿಸುವಂತಾಗಿದೆ.

ಅದೇ ರೀತಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕ್ರೀಡಾಂಗಣದ ಮುಂದೆ 34 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಇಲಾಖೆ ಮುಂದಾಗಿತ್ತು. ಕಾಮಗಾರಿ ಆರಂಭಗೊಂಡು ಒಂದು ವರ್ಷ ಕಳೆದರೂ ಕ್ರೀಡಾಪಟುಗಳಿಗೆ ಕ್ರೀಡಾಂಗಣ ಸಮರ್ಪಣೆಯಾಗಿಲ್ಲ. ಈಗ ನಡೆಯುತ್ತಿರುವ ಕಾಮಗಾರಿಯ ವೇಗವನ್ನು ನೋಡಿದರೆ ಕಾಮಗಾರಿ ಮುಕ್ತಾಯಗೊಳ್ಳಲು ಇನ್ನು ಆರು ತಿಂಗಳಾಗಬಹುದು.

ಇನ್ನು ವಾಣಿಜ್ಯ ಮಳಿಗೆಗಗಳ ನಿರ್ಮಾಣ ಕಾರ್ಯವೇ ಮುಗಿದಿಲ್ಲ. ಮೈದಾನ ಸಮತಟ್ಟು ಮಾಡುವ ಕಾರ್ಯ ಯಾವಾಗ ಆರಂಭವಾಗುತ್ತದೆಯೋ ಗೊತ್ತಿಲ್ಲ. ಕ್ರೀಡಾಪಟುಗಳು ತರಬೇತಿ ಪಡೆಯಲು ಈ ಪಟ್ಟಣದಲ್ಲಿ ಇರುವುದು ಇದೊಂದೇ ಮೈದಾನವಾಗಿದೆ. ಕಾಮಗಾರಿ ಮಗಿಯದೇ ಇರುವುದರಿಂದ ಕ್ರೀಡಾಪಟುಗಳಿಗೆ ತುಂಬಾ ತೊಂದರೆಯಾಗಿದೆ. ಜ. 26ಕ್ಕೆ ಕ್ರೀಡಾಂಗಣ ಉದ್ಘಾಟನೆಯಾಗಲಿದೆ ಎಂದು ಗುತ್ತಿಗೆದಾರರು ತಿಳಿಸಿದ್ದರು. ಆದರೆ. ನೀಡಿದ ಭರವಸೆ ಹುಸಿಯಾಗಿದೆ.
ಆದ್ದರಿಂದ, ಆಗಸ್ಟ್ 15ಕ್ಕೆ ಈ ಕ್ರೀಡಾಂಗಣ ಕಾಮಗಾರಿ ಮುಕ್ತಾಯಗೊಳಿಸಿ ಕ್ರೀಡಾಪಟುಗಳಿಗೆ ಸಮರ್ಪಿಸಲು ಸಂಬಂಧಪಟ್ಟ ಇಲಾಖೆಯವರು ಮುಂದಾಗಬೇಕೆಂದು ಪಟ್ಟಣದ ಕ್ರೀಡಾಭಿಮಾನಿಗಳಾದ ಮಂಜುನಾಥ್, ಅಣ್ಣಪ್ಪ, ಹರೀಶ್ ಒತ್ತಾಯಿಸಿದ್ದಾರೆ.

ಹೆದ್ದಾರಿ ದುರಸ್ತಿಗೆ ಆಗ್ರಹ
ತಾಲ್ಲೂಕಿನ ನಲ್ಲೂರಿನಿಂದ -ದಾವಣಗೆರೆಗೆ ಹೋಗುವ ರಾಜ್ಯ ಹೆದ್ದಾರಿ- 65 ಸಂಪೂರ್ಣ ಹಾಳಾಗಿದ್ದು, ಅಲ್ಲಲ್ಲಿ ಗುಂಡಿಗಳು ಬಿದ್ದು ಸುಗಮ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಚನ್ನಗಿರಿಯಿಂದ ದಾವಣಗೆರೆ ನಗರಕ್ಕೆ ಕೇವಲ 50 ಕಿ.ಮೀ ದೂರವಿದೆ. ಈ ದೂರವನ್ನು ಕ್ರಮಿಸಲು ಬಸ್‌ಗಳು ಎರಡೂವರೆ ಗಂಟೆ ಅವಧಿಯನ್ನು ತೆಗೆದುಕೊಳ್ಳುತ್ತವೆ ಎಂದರೆ ಈ ಹೆದ್ದಾರಿ ಯಾವ ರೀತಿ ಇದೆಯೆಂಬುದನ್ನು ತಿಳಿದುಕೊಳ್ಳಬಹುದು. ಹೆದ್ದಾರಿಯುದ್ದಕ್ಕೂ ದೊಡ್ಡ ಗುಂಡಿ ಬಿದ್ದಿವೆ. ಎರಡೂವರೆ ಗಂಟೆ ಬಸ್‌ನಲ್ಲಿ ಕುಳಿತು ಪ್ರಯಾಣ ಮಾಡುವರು ಮೈಕೈ ನೋವು ಖಚಿತ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಾರೆ.

ಹೆದ್ದಾರಿಯಲ್ಲಿ ಗುಂಡಿ ತಪ್ಪಿಸಲು ಹೋಗಿ ವಾಹನಗಳು ಅಪಘಾತಕ್ಕೆ ಒಳಗಾಗುತ್ತಿವೆ. ಒಟ್ಟಾರೆ ಪ್ರತಿದಿನ ಮೂರ್ನಾಲ್ಕು ಅಪಘಾತಗಳಾದರೂ ಈ ಹೆದ್ದಾರಿಯಲ್ಲಿ ಸಂಭವಿಸುತ್ತವೆ.

ಈ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿ ಮುಚ್ಚಲು ಲೋಕೋಪಯೋಗಿ ಇಲಾಖೆ ನಡೆಸುವ ತೇಪೆ ಕಾರ್ಯವೂ ಕಳಪೆಯಾಗಿದೆ. ಆದ್ದರಿಂದ ಜನಪ್ರತಿನಿಧಿಗಳು ಈ ಹೆದ್ದಾರಿ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆ ಮಾಡಿಸಿ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಮುಂದಾಗಬೇಕೆಂದು ನಲ್ಲೂರು ಗ್ರಾಮದ ವೆಂಕಟೇಶ್, ಮಂಜುನಾಥ್, ಅಯೂಬ್‌ಖಾನ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.