ADVERTISEMENT

ಚಿಂತೆಗೀಡಾಗಿರುವ ರೈತ ಸಮೂಹ...

​ಪ್ರಜಾವಾಣಿ ವಾರ್ತೆ
Published 6 ಜೂನ್ 2012, 6:00 IST
Last Updated 6 ಜೂನ್ 2012, 6:00 IST

ಹೊನ್ನಾಳಿ: ತಾಲ್ಲೂಕಿನ ಬಹುತೇಕ ರೈತರು ಬಿತ್ತನೆಗೆ ಹೊಲಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಆದರೆ, ಈ ಬಾರಿ ಮುಂಗಾರು ಕೊಂಚ ತಡವಾದ ಕಾರಣ ರೈತ ಸಮೂಹ ಚಿಂತಾಕ್ರಾಂತವಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 52 ಸಾವಿರ ಹೆಕ್ಟೇರ್ ಬಿತ್ತನೆ ಕ್ಷೇತ್ರ ಇದ್ದು, ಮೆಕ್ಕೆಜೋಳ ಮತ್ತು ಬತ್ತ ಪ್ರಧಾನ ಬೆಳೆಗಳು. ಶೇಂಗಾ, ಹತ್ತಿ, ಊಟದ ಜೋಳ ಮತ್ತು ಅಕ್ಕಡಿ ಬೆಳೆಗಳಾದ ಅಲಸಂದೆ, ಹೆಸರು, ಎಳ್ಳು, ಅವರೆ ಬೆಳೆಗಳನ್ನು ಅಲ್ಪಪ್ರಮಾಣದಲ್ಲಿ ಬೆಳೆಯಲಾಗುತ್ತದೆ.

ಈ ಪೈಕಿ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ. 14.5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬತ್ತ. 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ. 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ. 3.5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಊಟದ ಜೋಳ ಹಾಗೂ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಕ್ಕಡಿ ಬೆಳೆ ಬೆಳೆಯಲಾಗುತ್ತದೆ.

ಹತ್ತಿ ಬಿತ್ತನೆಗೆ ಮೇ 10ರಿಂದ ಜೂನ್ 8ರವರೆಗೆ ಪ್ರಶಸ್ತ ಕಾಲ. ಉತ್ತಮ ಮಳೆ ನಿರೀಕ್ಷೆಯಲ್ಲಿ ಈಗಾಗಲೇ ತಾಲ್ಲೂಕಿನ ಶೇ 70ರಷ್ಟು ಭಾಗದಲ್ಲಿ ಹತ್ತಿ ಬಿತ್ತನೆ ಪೂರ್ಣಗೊಂಡಿದೆ. ಆದರೆ, ಈ ಬಾರಿ ಮಳೆ ಕೊರತೆಯಿಂದ ಹತ್ತಿ ಬಿತ್ತನೆ ಮಾಡಿರುವ ರೈತರು ಕಂಗಾಲಾಗಿದ್ದಾರೆ. ಅಕ್ಕ-ಪಕ್ಕ ನೀರಾವರಿ ಸೌಲಭ್ಯ ಇರುವ ಕೆಲವರು ಬೆಳೆ ರಕ್ಷಣೆ ಮಾಡಿಕೊಂಡಿದ್ದಾರೆ.

ಉಳಿದ ರೈತರು ಅನಿವಾರ್ಯವಾಗಿ ಬಿತ್ತನೆ ಮಾಡಿದ ಹತ್ತಿ ಅಳಿಸಿ ಮೆಕ್ಕೆಜೋಳ ಬಿತ್ತನೆ ಮಾಡಲೇಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ಕೆ. ರೇವಣಸಿದ್ದನಗೌಡ ವಿವರಿಸುತ್ತಾರೆ. ಜನವರಿಯಿಂದ ಮೇ ಅಂತ್ಯದವರೆಗೆ ವಾಡಿಕೆ ಮಳೆ 135.8 ಮಿ.ಮೀ. ಕಳೆದ ಬಾರಿ ಈ ಅವಧಿಯಲ್ಲಿ 154.2 ಮಿ.ಮೀ. ಮಳೆ ಸುರಿದಿತ್ತು. ಆದರೆ, ಈ ಬಾರಿ 139.4 ಮಿ.ಮೀ. ಮಾತ್ರ ಮಳೆ ಸುರಿದಿದೆ.

ಕಳೆದ ವರ್ಷ ಉತ್ತಮ ಮುಂಗಾರು ಹಿನ್ನೆಲೆಯಲ್ಲಿ ಜೂನ್ ಮೊದಲ ವಾರದವರೆಗೆ ಶೇ 50 ರಷ್ಟು ಬಿತ್ತನೆ ಪೂರ್ಣಗೊಂಡಿತ್ತು. ಆದರೆ, ಈ ಬಾರಿ ಹತ್ತಿ ಹೊರತುಪಡಿಸಿ ಯಾವುದೇ ಬಿತ್ತನೆಯಾಗಿಲ್ಲ ಎನ್ನುತ್ತಾರೆ ತಾಲ್ಲೂಕಿನ ಉಜ್ಜನೀಪುರದ ರೈತ ಎಲ್.ಡಿ. ಮೋಹನ್‌ದಾಸ್ ನಾಯ್ಕ, ಯಕ್ಕನಹಳ್ಳಿಯ ರೈತ ಉದ್ದಜ್ಜಾರ ಯು.ಬಿ. ನಾಗರಾಜ್. 

ತಾಲ್ಲೂಕಿಗೆ ಅವಶ್ಯ ಇರುವಷ್ಟು ಬಿತ್ತನೆಬೀಜ, ಗೊಬ್ಬರ ದಾಸ್ತಾನು ಇದೆ. ಮಳೆ ಕೊರತೆ ಹಿನ್ನೆಲೆಯಲ್ಲಿ ರೈತರು ಏಕಬೆಳೆಗೆ ಮಾರುಹೋಗದೇ, ಮಿಶ್ರಬೆಳೆ ಪದ್ಧತಿ ಅನುಸರಿಸಬೇಕು. ದೊಡ್ಡ ರೈತರು ಒಂದೇ ತಳಿ ಬಿತ್ತನೆಬೀಜ ಉಪಯೋಗಿಸಬಾರದು. ಕೃಷಿ ಅಧಿಕಾರಿಗಳ ಶಿಫಾರಸಿನಂತೆ ಬೆಳೆಗಳಿಗೆ ಪೋಷಕಾಂಶಗಳನ್ನು ಬಳಸಬೇಕು ಎಂದು ಡಾ.ಎಚ್.ಕೆ. ರೇವಣಸಿದ್ದನಗೌಡ ಸಲಹೆ ನೀಡುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.