ADVERTISEMENT

ಚಿತ್ರದುರ್ಗದಲ್ಲಿ ಸಿಂಕ್ರೋಟಾನ್ ಘಟಕ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 8:45 IST
Last Updated 21 ಜನವರಿ 2011, 8:45 IST

ದಾವಣಗೆರೆ: ಚಿತ್ರದುರ್ಗದಲ್ಲಿ ಶೀಘ್ರವೇ ಸಿಂಕ್ರೋಟಾನ್ ಸಂಶೋಧನಾ ಘಟಕ ಸ್ಥಾಪನೆಯಾಗಲಿದೆ ಎಂದು ಚಿತ್ರದುರ್ಗ ಜಿಲ್ಲೆಯ ಸಂಸದ ಜನಾರ್ದನ ಸ್ವಾಮಿ ತಿಳಿಸಿದರು.

ನಗರದ ಶಿವಯೋಗಾಶ್ರಮದಲ್ಲಿ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರ 54ನೇ ಸ್ಮರಣೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಜಾನಪದ ಕಲಾವೈಭವ ಹಾಗೂ ಜಮುರಾ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂದಾಜು ರೂ 6ಸಾವಿರ ಕೋಟಿಯ ಯೋಜನೆ ಇದಾಗಿದೆ. ಕ್ಷಿಪ್ರ ಗತಿಯಲ್ಲಿ ಎಕ್ಸ್-ರೇ ತೆಗೆಯಲು ಬಳಸುವ ಬೆಳಕಿನ ಉತ್ಪಾದನೆ ಮಾಡುವಂತಹ ಘಟಕವಿದು. ಇಂದು ಭಾರತದ ವಿಜ್ಞಾನಿಗಳು ಈ ಸಂಶೋಧನೆಗೆ ವಿದೇಶಗಳಿಗೆ ಹೋಗುತ್ತಿದ್ದಾರೆ. ಆದರೆ, ಪ್ರಯತ್ನದ ಫಲವಾಗಿ ಇಂದು ವಿದೇಶಿ ಕಂಪೆನಿಗಳು ಚಿತ್ರದುರ್ಗದಲ್ಲಿ ಇಂತಹ ಸಂಶೋಧನಾ ಘಟಕ ಸ್ಥಾಪನೆಗೆ ಮುಂದೆ ಬಂದಿವೆ ಎಂದು ಹೇಳಿದರು.

ಉದ್ಯೋಗ ಸೃಷ್ಟಿಸುವ ಸಲುವಾಗಿ ಒಂದು ್ಙ ಸಾವಿರಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಘಟಕಕ್ಕೆ ಇದೇ 26ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡುವರು ಎಂದರು.

ಹೊಸದುರ್ಗ ಒಪ್ಪತ್ತಿನ ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಹಣ ಗಳಿಸುವ ಉದ್ದೇಶದಿಂದ ಮನುಷ್ಯ ಇಂದು ನೆಮ್ಮದಿ ಹಾಗೂ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾನೆ. ಸ್ವಾರ್ಥ ಹೆಚ್ಚಾಗಿದೆ. ಸಾರ್ಥಕ ಜೀವನ ನಡೆಸಬೇಕಾದರೆ ಮೌಲಿಕ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಮಾನಸಿಕ ನೆಮ್ಮದಿಗೆ ರಂಗಕಲೆ ಸೂಕ್ತ ಮಾಧ್ಯಮ. ಇದು ಸಮಾಜದ ಓರೆಕೋರೆಗಳನ್ನು ತಿದ್ದುವ ಜತೆಗೆ, ಜೀವನ ಪಾಠವನ್ನೂ ಕಲಿಸಿಕೊಡುತ್ತದೆ. ದೃಶ್ಯ ಮಾಧ್ಯಮ ಜೀವನದ ದಿಕ್ಕು ತಪ್ಪಿಸುವಂತಹ ಈ ಸಂದರ್ಭದಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವ್ಯವಸ್ಥೆಯ ಕನ್ನಡಿ ಎಂದೇ ಬಿಂಬಿತವಾಗಿರುವ ರಂಗಕಲೆ ಆವಶ್ಯಕ ಎಂದು ಹೇಳಿದರು.ಮಹಾಂತ ಸ್ವಾಮೀಜಿ ಉಪಸ್ಥಿತರಿದ್ದರು. ದಾವಣಗೆರೆ ಶಿವಯೋಗಾಶ್ರಮದ ಚರಮೂರ್ತಿ ಬಸವಪ್ರಭು ಸ್ವಾಮೀಜಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.