ದಾವಣಗೆರೆ: ಇಲ್ಲಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಯ ವೇಳೆ ಚುನಾವಣಾಧಿಕಾರಿಗಳು ಮಾಡಿದ ಲೋಪದಿಂದ ಅನ್ಯಾಯವಾಗಿದೆ ಎಂದು ನ್ಯಾಷನಲ್ ಪೀಪಲ್ಸ್ ಪಕ್ಷದಿಂದ ಸ್ಪರ್ಧಿಸಿದ್ದ ಆರ್.ಮಾಲತೇಶ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಚುನಾವಣೆಯ ವೇಳೆ ಪಕ್ಷೇತರ ಅಭ್ಯರ್ಥಿ ಬಿ.ಆರ್.ಸಲೀಂಬಾಯಿಗೆ ಕ್ರ.ಸಂ. 12, ಸುಬಾನ್ ಸಾಬ್ಗೆ ಕ್ರ.ಸಂ. 13, ಮೊಹಮದ್ ಬ್ರೂಹಾನ್ಗೆ ಕ್ರ.ಸಂ. 14 ಹಾಗೂ ಕೆ.ಸಿ.ರೆಹಮತ್ ಉಲ್ಲಾಗೆ 15ರ ಕ್ರಮ ಸಂಖ್ಯೆ ನೀಡಲಾಗಿತ್ತು. ಅದರಂತೆ ನಾವು ಚುನಾವಣೆ ಪ್ರಚಾರ ಕೂಡ ನಡೆಸಿದೆವು.
ಬಳಿಕ ನಮಗೆ ತಿಳಿಸದೇ ಸಲೀಂಬಾಯಿಗೆ 14, ಸುಬಾನ್ ಸಾಬ್ಗೆ 15, ಮೊಹಮದ್ ಬ್ರೂಹಾನ್ಗೆ 12 ಹಾಗೂ ರೆಹಮತ್ ಉಲ್ಲಾಗೆ 13ರ ಕ್ರಮ ಸಂಖ್ಯೆ ಬದಲಾವಣೆ ಮಾಡಿದರು. ಇದರಿಂದ ನಾಲ್ಕು ಮಂದಿ ಅಭ್ಯರ್ಥಿಗಳಿಗೂ ಚುನಾವಣೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಚುನಾವಣೆ ವೇಳೆಯೇ ಗಮನಕ್ಕೆ ತರಲಾಯಿತು. ಅಧಿಕಾರಿಗಳು ಸರಿಪಡಿಸಲಿಲ್ಲ. ಅದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಯಿತು.
ಕೋರ್ಟ್ ಚುನಾವಣೆ ಪ್ರಕ್ರಿಯೆ ಇರುವ ಕಾರಣಕ್ಕೆ ಮಧ್ಯಪ್ರವೇಶಿಸಲಿಲ್ಲ. ಈಗ ಕೋರ್ಟ್ಗೆ ಸಲ್ಲಿಸಲು ಮೂಲ ದಾಖಲಾತಿಗಳು ಅಗತ್ಯವಿದ್ದು, ಅಧಿಕಾರಿಗಳು ನೀಡುತ್ತಿಲ್ಲ. ರಾಜ್ಯ ಚುನಾವಣಾ ಆಯೋಗದಲ್ಲಿ ಕೇಳಿದರೆ ಜಿಲ್ಲಾ ಚುನಾವಣಾ ವಿಭಾಗದಲ್ಲಿ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ಕೂಡಲೇ ನಮಗೆ ಮೂಲ ದಾಖಲೆ ನೀಡಬೇಕು ಎಂದು ಆಗ್ರಹಿಸಿದರು.
ನ್ಯಾಯಾಲಯದಲ್ಲಿ ಮರು ಚುನಾವಣೆ ನಡೆಸುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಇಂದಿರಮ್ಮ, ಮುದ್ದಾಪುರದ ರೆಹಮಾನ್ ಸಾಬ್, ಕೆಂಚವೀರಪ್ಪ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.