ADVERTISEMENT

ಜಗಳೂರು: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ್ಙ 30 ಲಕ್ಷ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 9:20 IST
Last Updated 10 ಫೆಬ್ರುವರಿ 2012, 9:20 IST

ಜಗಳೂರು: ತಾಲ್ಲೂಕಿನಲ್ಲಿ ಸಂಧ್ಯಾ ಸುರಕ್ಷಾ, ಅಂಗವಿಕಲ ಹಾಗೂ ವಿಧವಾ ವೇತನ ಯೋಜನೆ ಅಡಿ 4,400ಕ್ಕೂ ಹೆಚ್ಚು  ಅನರ್ಹ ಫಲಾನುಭವಿಗಳಿಗೆ ಪಿಂಚಣಿಯನ್ನು ರದ್ದುಗೊಳಿಸಲಾಗಿದೆ ಎಂದು ತಹಶೀಲ್ದಾರ್ ಎಚ್.ಪಿ. ನಾಗರಾಜ್ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 19,259 ಫಲಾನುಭವಿಗಳಿದ್ದು, ಇಲಾಖೆ ವತಿಯಿಂದ ನಡೆಸಿದ ಸಮೀಕ್ಷೆಯಲ್ಲಿ ಒಂದಕ್ಕೂ ಹೆಚ್ಚು ಯೋಜನೆಗಳಲ್ಲಿ ಫಲಾನುಭವಿ  ಆಗಿರುವವರು ಹಾಗೂ ಗ್ರಾಮದಲ್ಲಿ ವಾಸವಿಲ್ಲದವರು ಕಂಡುಬಂದ ಕಾರಣ 4,406 ಅನರ್ಹ ಫಲಾನುಭವಿಗಳನ್ನು ವಜಾಗೊಳಿಸಿ ಆದೇಶಿಸಲಾಗಿದೆ ಎಂದು ಅವರು ಈಚೆಗೆ ಸುದ್ದಿಗಾರರಿಗೆ ವಿವರಿಸಿದರು.

ಸಂಧ್ಯಾ ಸುರಕ್ಷಾ ಯೋಜನೆ ಅಡಿ 10,902 ಫಲಾನುಭವಿಗಳಲ್ಲಿ 1,869 ಅನರ್ಹರನ್ನು ಪಟ್ಟಿ ಮಾಡಿ ವಜಾಗೊಳಿಸಲಾಗಿದೆ. ಮಾಸಿಕ ್ಙ 400 ಪಿಂಚಣಿ ಪಡೆಯುವ ಅಂಗವಿಕಲ ಯೋಜನೆಯ 1,870 ಫಲಾನುಭವಿಗಳಲ್ಲಿ 750, ಮಾಸಿಕ ್ಙ 1 ಸಾವಿರ ಅಂಗವಿಕಲ  ಯೋಜನೆ ಅಡಿ 1,111 ಫಲಾನುಭವಿಗಳಲ್ಲಿ 136, ವಿಧವಾ ಯೋಜನೆಯ 3,641ರಲ್ಲಿ 883 ಅಕ್ರಮ ಫಲಾನುಭವಿಗಳ ಪಟ್ಟಿ ಮಾಡಿ ವಜಾಗೊಳಿಸಲಾಗಿದೆ ಎಂದು ಅವರು ವಿವರಿಸಿದರು.

ರಾಷ್ಟ್ರೀಯ ಕುಟುಂಬ ಸೇವಾ ಯೋಜನೆ ಅಡಿ ದುಡಿಯುವ ವ್ಯಕ್ತಿ ಮೃತಪಟ್ಟ ತಾಲ್ಲೂಕಿನ 286  ಕುಟುಂಬಗಳಿಗೆ  ತಲಾ ್ಙ 10 ಸಾವಿರ, ಅಂತ್ಯಸಂಸ್ಕಾರ ಯೋಜನೆ ಅಡಿ 1,533 ಫಲಾನುಭವಿಗಳಿಗೆ ತಲಾ ್ಙ 1 ಸಾವಿರ, ಆದರ್ಶ ವಿವಾಹ ಯೋಜನೆಯಲ್ಲಿ 58 ದಂಪತಿಗೆ ತಲಾ ್ಙ 10 ಸಾವಿರ ಸಹಾಯಧನ ವಿತರಿಸಲಾಗಿದೆ ಎಂದು ನಾಗರಾಜ್ ಸ್ಪಷ್ಟಪಡಿಸಿದರು.

ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಇರುವ 14 ಗ್ರಾಮಗಳಲ್ಲಿ ತುರ್ತು ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ್ಙ 30 ಲಕ್ಷದ ಪ್ರಸ್ತಾವವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.