ಚನ್ನಗಿರಿ: ದೇವಸ್ಥಾನ, ಗುಡಿ ಗುಂಡಾರಗಳು ಪ್ರಾಚೀನ ಕಾಲದಿಂದಲೂ ಇವೆ. ಜನರಲ್ಲಿ ದೇವರ ಬಗ್ಗೆ ನಂಬಿಕೆ ಹೆಚ್ಚಿದೆ. ದೇವಸ್ಥಾನಗಳು ಶಾಂತಿ, ನೆಮ್ಮದಿಯ ಕೇಂದ್ರಗಳಾಗಬೇಕು. ಹಾಗೆಯೇ, ಜೀವನದಲ್ಲಿ ವಿಪತ್ತು ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಗುಳ್ಳೇಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಈಶ್ವರ ದೇವಸ್ಥಾನ ಜೀರ್ಣೊದ್ಧಾರ ಹಾಗೂ ಕಳಸಾರೋಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಶರೀರ ಎಂಬುದು ಭೂತ ಬಂಗಲೆಯಾಗಬಾರದು. ಸದ್ಗುಣಗಳನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕು. ಆಧ್ಯಾತ್ಮಿಕ ಚಿಂತನೆ, ಆತ್ಮ ಸಾಕ್ಷಾತ್ಕಾರ, ದೃಢವಾದ ನಂಬಿಕೆ ಹೊಂದುವುದು ಅಗತ್ಯವಾಗಿದೆ.
ಅಂತರಂಗದ ಭಕ್ತಿ, ಶ್ರದ್ಧೆ ನಮ್ಮಲ್ಲಿ ಇರಬೇಕು. ದೈವೀಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮರಾಗಿ ಬದುಕಬೇಕು ಎಂದರು. ಮಾಜಿ ಶಾಸಕ ವಡ್ನಾಳ್ ರಾಜಣ್ಣ ಮಾತನಾಡಿ, ದೇವಸ್ಥಾನಗಳನ್ನು ನಿರ್ಮಿಸುವುದು ತುಂಬಾ ಸುಲಭ. ಆದರೆ, ನಂತರ ಅವುಗಳ ನಿರ್ವಹಣೆ ತುಂಬಾ ಕಷ್ಟ. ದೇವಸ್ಥಾನಗಳು ಎಲ್ಲರನ್ನೂ ಆಕರ್ಷಿಸುವ ಶಕ್ತಿ ಕೇಂದ್ರಗಳಾಗಿವೆ ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಎಲ್.ಪಿ. ಚಿದಾನಂದಮೂರ್ತಿ ಉಪಸ್ಥಿತರಿದ್ದರು. ಎಸ್.ಟಿ. ಶಾಂತಗಂಗಾಧರ್ ಉಪನ್ಯಾಸ ನೀಡಿದರು. ಸಹನಾ ಪ್ರಾರ್ಥಿಸಿದರು. ಎಚ್.ಎಸ್. ಮಲ್ಲಿಕಾರ್ಜುನಪ್ಪ ಸ್ವಾಗತಿಸಿದರು. ಎಂ.ಬಿ. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಹಾಲೇಶ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.