ADVERTISEMENT

`ಟಿಪ್ಪು ಮಹಾನ್ ದೇಶಪ್ರೇಮಿ'

ಟಿಪ್ಪು ಸುಲ್ತಾನ್ ಸಹಬಾಳ್ವೆ ರಕ್ಷಣಾ ವೇದಿಕೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 6:14 IST
Last Updated 24 ಡಿಸೆಂಬರ್ 2012, 6:14 IST

ಹರಿಹರ: `ಮೈಸೂರು ರಾಜ್ಯದ ರಕ್ಷಣೆಗಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟ ಮಹಾನ್ ದೇಶ ಪ್ರೇಮಿ, ಮೈಸೂರು ಹುಲಿ ಎಂದು ಪ್ರಖ್ಯಾತನಾದ ಸ್ವಾಭಿಮಾನಿ ಟಿಪ್ಪು ಸುಲ್ತಾನ್' ಎಂದು ಬೆಂಗಳೂರಿನ ಟಿಪ್ಪು ಸುಲ್ತಾನ್ ಪ್ರಚಾರ ಸಮಿತಿ ಅಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ ಬಣ್ಣಿಸಿದರು.

ನಗರದ ಅಂಜುಮನ್ ಶಾದಿಮಹಲ್‌ನಲ್ಲಿ ಭಾನುವಾರ ನಡೆದ  ಕರ್ನಾಟಕ ಟಿಪ್ಪು ಸುಲ್ತಾನ್ ಸಹಬಾಳ್ವೆ ರಕ್ಷಣಾ ವೇದಿಕೆ ಉದ್ಘಾಟನೆ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

ಟಿಪ್ಪು ಸುಲ್ತಾನ್ ತನ್ನ ಅಧಿಕಾರ ಅವಧಿಯಲ್ಲಿ ರಾಜ್ಯದ ಅನೇಕ ದೇವಾಲಯಗಳಿಗೆ ದಾನ ನೀಡಿದ್ದಾರೆ. ದಾಳಿಗೆ ತುತ್ತಾದ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದ್ದಾರೆ. ಉಳುವವನೇ ಒಡೆಯ ಎಂಬ ಕಾನೂನಿನ ಮೂಲಕ ಭೂರಹಿತರಿಗೆ ಭೂಮಿ ನೀಡಿದ್ದಾರೆ. ಕನ್ನಡವನ್ನೇ ಆಡಳಿತ ಭಾಷೆಯನ್ನಾಗಿ ಬಳಸಿದ್ದಾರೆ. ಆದರೂ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಟಿಪ್ಪು ಸುಲ್ತಾನ್‌ನನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಈ ಕುರಿತ ಚರ್ಚೆಗೆ ಟಿಪ್ಪು ಸುಲ್ತಾನ್ ಪ್ರಚಾರ ಸಮಿತಿ ಸಿದ್ಧವಾಗಿದೆ ಎಂದು ಸವಾಲು ಹಾಕಿದರು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಇತಿಹಾಸ ಅರಿಯದೇ, ಹೊಸ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಸರ್ವ ಧರ್ಮಗಳನ್ನು ಸಮನ್ವಯತೆಯಿಂದ ಉತ್ತಮ ಆಡಳಿತ ನೀಡಬಹುದು ಎಂಬುದನ್ನು ಟಿಪ್ಪು ಸುಲ್ತಾನ್ ಸಾಧಿಸಿ ತೋರಿಸಿಕೊಟ್ಟಿದ್ದಾರೆ.

ಇದು ಪ್ರಸ್ತುತ ರಾಜಕಾರಣಿಗಳಿಗೆ ಹಾಗೂ ರಾಜಕೀಯ ವ್ಯವಸ್ಥೆಗೆ ಮಾದರಿಯಾಗಬೇಕಿದೆ. ನನ್ನ ಅಧಿಕಾರ ಅವಧಿಯಲ್ಲಿ ತಾಲ್ಲೂಕಿನ ಎಲ್ಲಾ ಧರ್ಮಗಳ ಜನತೆ ಉತ್ತಮ ಸಹಕಾರ ನೀಡಿದ ಕಾರಣ, ತಾಲ್ಲೂಕು ಉತ್ತಮ ಪ್ರಗತಿ ಸಾಧಿಸಲು ಸಾಧ್ಯವಾಯಿತು. ಎಲ್ಲರ ಸಹಕಾರ ಇದೇ ರೀತಿ ಇರಲಿ ಎಂದು ಕೋರಿದರು.

ಕರ್ನಾಟಕ ಟಿಪ್ಪು ಸುಲ್ತಾನ್ ಸಹಬಾಳ್ವೆ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಎಂ.ಎಸ್. ಬಾಬುಲಾಲ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯರಾದ ಎಸ್. ರಾಮಪ್ಪ, ರಮೇಶ ಮೆಹರ‌್ವಾಡೆ, ಬಿ.ಕೆ. ಸೈಯದ್ ರೆಹಮಾನ್, ಹಾಜಿ ಅಲಿಖಾನ್, ತಾಲ್ಲೂಕು ಕಸಾಪ ಘಟಕದ ಗೌರವ ಕಾರ್ಯದರ್ಶಿಗಳಾದ ರೇವಣ್ಣ ನಾಯ್ಕ, ಎ. ರಿಯಾಜ್ ಅಹಮದ್, ತಾಲ್ಲೂಕು ಅಂಜುಮನ್ ಸಮಿತಿ ಅಧ್ಯಕ್ಷ ಅಲ್ತಮಶ್, ಪ್ರಧಾನ ಕಾರ್ಯದರ್ಶಿ ಅತಾವುಲ್ಲಾ, ಬಿ. ಮಹಮದ್ ಫೈರೋಜ್, ಅಸೀಫ್ ಅಲಿಖಾನ್, ಸೈಯ್ಯದ್ ನಜೀರ್ ಅಹಮದ್, ಎಂ.ಆರ್. ಸನಾವುಲ್ಲಾ, ಮಹಮದ್ ಅಶ್ಪಕ್, ಎಂ. ಸಾಧಿಕ್ ಉಲ್ಲಾ, ವೇದಿಕೆ ಅಧ್ಯಕ್ಷ ಅಬ್ದುಲ್ ರೆಹಮಾನ್, ಸಿಕಂದರ್ ಶಾ ದರವೇಶ್, ಅಬುಸಲೀಹ, ಆದಾಬ್ ಹುಸೇನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.