ದಾವಣಗೆರೆ: ದೇವದಾಸಿ ಮಹಿಳೆಯರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಯಿತು.
ಜಿಲ್ಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ದೇವದಾಸಿ ಮಹಿಳೆಯರ ವಿಮೋಚನೆಗಾಗಿ ತಮ್ಮ ಸಂಘಟನೆಯ ನೇತೃತ್ವದಲ್ಲಿ 14 ಬೇಡಿಕೆಗಳ ಪಟ್ಟಿ ಇಟ್ಟು ಹೋರಾಟ ಮಾಡಲಾಗುತ್ತಿದೆ. ಆದರೆ, ಸರ್ಕಾರ ಈವರೆಗೂ ತಮ್ಮ ಬೇಡಿಕೆಗಳನ್ನು ಈಡೇರಿಸಲು ಮೀನಮೇಷ ಎಣಿಸುತ್ತಿದೆ. ಆದ್ದರಿಂದ ಸರ್ಕಾರದ ಮೇಲೆ ಮತ್ತೆ ಒತ್ತಡ ಹೇರಲು ಈ ಧರಣಿ ನಡೆಸಲಾಗುತ್ತಿದೆ ಎಂದು ಧರಣಿನಿರತರು ತಿಳಿಸಿದರು.
ಬೇಡಿಕೆಗಳು: ಸರ್ಕಾರದ ಅಂಕಿ- ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 2,620 ಮಂದಿ ದೇವದಾಸಿಯರಿದ್ದಾರೆ. ಅವರಿಗೆ ್ಙ 400 ಮಾಸಿಕ ಪಿಂಚಣಿ, ಮನೆ, ಅವರ ಮಕ್ಕಳಿಗಾಗಿ ಹಾಸ್ಟೆಲ್ ಸ್ಥಾಪಿಸಲು ಸರ್ಕಾರ ಒಪ್ಪಿದೆ. ಆದರೆ, ಅದು ಈ ಒಪ್ಪಂದದಂತೆ ನಡೆದುಕೊಂಡಿಲ್ಲ ಎಂದು ದೂರಿದರು.
ಆದ್ದರಿಂದ ಇದೇ ತಿಂಗಳ 24ರಂದು ಮಂಡಿಸುವ ಬಜೆಟ್ನಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ದೇವದಾಸಿ ಮಹಿಳೆಯರಿಗೆ ಎಲ್ಲ ಸೌಲಭ್ಯಗಳು ದೊರೆಯುವಂತಾಗಬೇಕು. ಮಾಸಿಕ ಪಿಂಚಣಿಯನ್ನು ್ಙ 1 ಸಾವಿರಕ್ಕೆ ಹೆಚ್ಚಿಸಬೇಕು. ಅವರಿಗೆ ಮನೆ ಕಟ್ಟಿಸಿಕೊಡಬೇಕು. ಹೈನುಗಾರಿಕೆ ನಡೆಸಲು ಶೇ. 75 ಸಬ್ಸಿಡಿ ಹಾಗೂ ಶೇ. 25ರಷ್ಟು ಬಡ್ಡಿರಹಿತ ಸಾಲ, ತಲಾ 2 ಎಕರೆ ಕೃಷಿ ಜಮೀನು ಒದಗಿಸಬೇಕು. ದೇವದಾಸಿ ಮಹಿಳಾ ಕುಟುಂಬದ ಕಲ್ಯಾಣ ನಿಧಿ ಸ್ಥಾಪಿಸಬೇಕು. ಅವರಿಗೆ ಸ್ವ ಉದ್ಯೋಗ ತರಬೇತಿ ನೀಡಬೇಕು ಎಂದು ಒತ್ತಾಯಿಸಿದರು.
ಅಂತರ್ಜಾತಿ ಮತ್ತು ದೇವದಾಸಿ ಮಹಿಳೆಯರ ಮದುವೆಗಳನ್ನು ಪ್ರೋತ್ಸಾಹಿಸಲು ್ಙ 1 ಲಕ್ಷ ಪ್ರೋತ್ಸಾಹಧನ ನೀಡಬೇಕು ಎಂದು ಆಗ್ರಹಿಸಿದರು.ಸಂಘದ ಗೌರವಾಧ್ಯಕ್ಷ ಕೆ.ಎಲ್. ಭಟ್, ರಾಜ್ಯ ಘಟಕದ ಉಪಾಧ್ಯಕ್ಷರಾದ ಟಿ. ಪದ್ಮಾವತಿ, ಕೆ. ಕೆಂಚಮ್ಮ, ಜಿಲ್ಲಾ ಘಟಕದ ಕಾರ್ಯದರ್ಶಿ ಟಿ.ವಿ. ರೇಣುಕಮ್ಮ, ಹಿರಿಯಮ್ಮ, ಹುಲಿಗೆಮ್ಮ ಇತರರು ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.