ADVERTISEMENT

ದೇವರ ಎದುರು ಪ್ರಮಾಣಕ್ಕೆ ನಾವು ಸಿದ್ಧ; ಅವರೂ...?

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 4:05 IST
Last Updated 22 ಅಕ್ಟೋಬರ್ 2012, 4:05 IST

ದಾವಣಗೆರೆ: ನಗರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ದುರ್ಗಾಂಬಿಕಾ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದ ಮೇಯರ್ ಸುಧಾ ಜಯರುದ್ರೇಶ್, ದೇವಸ್ಥಾನಕ್ಕೆ ದೊರೆತ ಅನುದಾನ ಸದ್ಬಳಕೆಯಾಗಿದೆಯೇ ಎಂದು ಧರ್ಮದರ್ಶಿಗಳ ಸಮಿತಿ ಸದಸ್ಯರೂ ಆದ ನಗರಸಭೆ ಮಾಜಿ ಸದಸ್ಯ ಜೆ.ಕೆ. ಕೊಟ್ರಬಸಪ್ಪ ಪ್ರಮಾಣ ಮಾಡುವರೇ ಎಂದು ಪ್ರತಿಸವಾಲು ಹಾಕಿದರು.

`ಪಾಲಿಕೆ ಸದಸ್ಯರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ನನ್ನ ಅವಧಿಯಲ್ಲಂತೂ ಯಾವುದೇ ಅವ್ಯವಹಾರ ನಡೆದಿಲ್ಲ; ಭಾಗಿಯಾಗಿಲ್ಲ. ಹೀಗಿರುವಾಗ ಕೊಟ್ರಬಸಪ್ಪ ಅವರು ಆಣೆಪ್ರಮಾಣದ ಹೇಳಿಕೆ  ನೀಡಿರುವುದು  ಖಂಡನೀಯ~  ಎಂದು  ಭಾನುವಾರ  ಸುದ್ದಿಗೋಷ್ಠಿಯಲ್ಲಿ  ಹೇಳಿದರು.

ಅವರು (ಜೆ.ಕೆ. ಕೊಟ್ರಬಸಪ್ಪ), ದೇವಸ್ಥಾನಕ್ಕೆ ಬಂದ ಅನುದಾನ ಶೇ 100ರಷ್ಟು ಖರ್ಚು ಮಾಡಿದ್ದಾರೆಯೇ ಎಂಬುದನ್ನು ಹೇಳಿದರೆ ಮರುನಿಮಿಷವೇ ದೇವಸ್ಥಾನ ದಲ್ಲಿ ಪ್ರಮಾಣ ಮಾಡುತ್ತೇನೆ ಎಂದು ತಿರುಗೇಟು ನೀಡಿದರು.

ಚುನಾವಣೆ ಸಂದರ್ಭದಲ್ಲಿ ಇಂತಹ ಹೇಳಿಕೆಗಳು ಸಹಜ. ಅವುಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಕೆಟ್ಟ ಆಲೋಚನೆ ಹೊಂದಿರುವವರು ಕೆಟ್ಟದಾಗಿಯೇ ಮಾತನಾಡುತ್ತಾರೆ ಎಂದು ಟೀಕಿಸಿದರು.

ಮಾಜಿ ಮೇಯರ್ ವಸಂತಕುಮಾರ್ ಮಾತನಾಡಿ, ಸಣ್ಣ ದೇವಸ್ಥಾನಗಳು ಬಹಳಷ್ಟು ಅಭಿವೃದ್ಧಿ ಹೊಂದಿವೆ. ಆದರೆ, ಪುರಾತನ ದುರ್ಗಾಂಬಿಕಾ ದೇವಸ್ಥಾನ ನಾನು ಚಿಕ್ಕವನಾಗಿದ್ದಾಗಿನಿಂದಲೂ ಇದ್ದಂತೆಯೇ ಇದೆ. ಅಷ್ಟೊಂದು ಧರ್ಮದರ್ಶಿಗಳು ಇದ್ದರೂ ಅಭಿವೃದ್ಧಿ ಕಂಡಿಲ್ಲ ಏಕೆ. ಅನುದಾನ ಎಲ್ಲಿಗೆ ಬಳಕೆಯಾಗುತ್ತಿದೆ ಎಂದು ಪ್ರಶ್ನಿಸಿದರು.

ಹಿಂದೆ ಆಡಳಿತ ನಡೆಸಿದವರು ನಗರದಲ್ಲಿ ಯಾವುದೇ ಅಭಿವೃದ್ಧಿ ಕೈಗೊಂಡಿರಲಿಲ್ಲ. ಇಲ್ಲಿನ ಕೊಳೆ ತೊಳೆಯುವುದಕ್ಕೆ ್ಙ 400 ಕೋಟಿ ಬೇಕಾಯಿತು. ಮುಂದೆಯೂ ನಮಗೆ ್ಙ 400 ಕೋಟಿ ದೊರೆತರೆ ನಗರವನ್ನು ಸುಂದರಗೊಳಿಸಬಹುದು ಎಂದು ಹೇಳಿದರು.

ಉಪ ಮೇಯರ್ ಮಹೇಶ್ ರಾಯಚೂರು ಮಾತನಾಡಿ, ಜೆ.ಕೆ. ಕೊಟ್ರಬಸಪ್ಪ ಅವರು ಪಾಲಿಕೆ ಸದಸ್ಯರನ್ನಲ್ಲ ನಗರದ ಮತದಾರರನ್ನೆಲ್ಲಾ ಅವಮಾನಿಸಿದ್ದಾರೆ ಎಂದರು.

ಆರೋಪ ನಿರಾಧಾರ: ವಿದ್ಯಾನಗರ ಪಾರ್ಕ್ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಪಾರ್ಕ್‌ಗಳ ಅಭಿವೃದ್ಧಿಗೆ ದೊರೆತ ಹಣವನ್ನು ಸದ್ಬಳಕೆ ಮಾಡಲಾಗಿದೆ. ಈ ಸಂಬಂಧ ಜೆಡಿಎಸ್ ಮುಖಂಡ ಶ್ರೀನಿವಾಸ ಬಸಾಪತಿ ಮಾಡಿರುವ ಆರೋಪ ನಿರಾಧಾರ ಎಂದು ಸ್ಪಷ್ಟಪಡಿಸಿದರು.

ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಉದ್ದೇಶದ ಹೇಳಿಕೆ ನೀಡಿರುವುದು ಖಂಡನೀಯ. ಅಭಿವೃದ್ಧಿ ಕಾರ್ಯಕ್ಕೆ ವಿರೋಧ ಪಕ್ಷದವರು ಸಹಕಾರ ನೀಡಬೇಕು ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.