ADVERTISEMENT

ದೇಶದ 3.7 ದಶಲಕ್ಷ ಜನರಿಗೆ ಮರೆವಿನ ರೋಗ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 8:20 IST
Last Updated 14 ಅಕ್ಟೋಬರ್ 2011, 8:20 IST

ದಾವಣಗೆರೆ: ಭಾರತದಲ್ಲಿ 3.7 ದಶಲಕ್ಷ ಜನರು ಮರೆವಿನ ರೋಗಕ್ಕೆ ಒಳಗಾಗಿದ್ದಾರೆ ಎಂದು ಮೈಸೂರಿನ ಸಿಎಫ್‌ಟಿಆರ್‌ಐ ಸಂಸ್ಥೆಯ ವಿಜ್ಞಾನಿ ಡಾ.ಶೈಲಜಾ ಧರ್ಮೇಶ್ ಹೇಳಿದರು.

ದಾವಣಗೆರೆ ವಿವಿಯ ಸ್ನಾತಕೋತ್ತರ ಸಮಾಜಕಾರ್ಯ ಮತ್ತು ಜೀವ ರಸಾಯನಶಾಸ್ತ್ರ ಮತ್ತು ಆಹಾರ ತಂತ್ರಜ್ಞಾನ ವಿಭಾಗಗಳ ಆಶ್ರಯದಲ್ಲಿ ಗುರುವಾರ ವಿವಿಯ ಎಸ್ಸೆಸ್ ಸಭಾಂಗಣದಲ್ಲಿ ಜಾಗತಿಕ ಮರೆವಿನ ರೋಗ ದಿನಾಚರಣೆ ಅಂಗವಾಗಿ ನಡೆದ `ಮರೆವಿನ ರೋಗ ಮತ್ತು ವೃದ್ಧಾಪ್ಯದ ಮಾನಸಿಕ ಆರೋಗ್ಯ~ ಎಂಬ ವಿಷಯದ ಕುರಿತು ಅಂತರಶಿಸ್ತೀಯ ಭಾಷಣ ಮಾಲೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ 2030ರ ವೇಳೆಗೆ ಈ ರೋಗಕ್ಕೆ ಒಳಗಾದವರ ಸಂಖ್ಯೆ 7 ದಶಲಕ್ಷ ತಲುಪುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಜಗತ್ತಿನಲ್ಲಿ 5 ದಶಲಕ್ಷ ಜನರು ಮರೆವಿನ ರೋಗಕ್ಕೆ ಬಲಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಜೆಜೆಎಂ ವೈದ್ಯಕೀಯ ಕಾಲೇಜಿನ ಮನೋವೈದ್ಯೆ ಡಾ.ಅನುಪಮಾ ಮಾತನಾಡಿ, ಪ್ರಸ್ತುತ ಜಗತ್ತಿನಲ್ಲಿ ಮರೆವಿನ ರೋಗಕ್ಕೆ ಒಳಗಾಗಿರುವವರ ಸಂಖ್ಯೆ, ವೃದ್ಧರು ಅನುಭವಿಸುವ ಮಾನಸಿಕ ರೋಗ ಮತ್ತು ಅವುಗಳ ವೈಜ್ಞಾನಿಕ ಲಕ್ಷಣಗಳನ್ನು ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ದಾವಣಗೆರೆ ವಿವಿ ಕುಲಪತಿ ಪ್ರೊ.ಎಸ್. ಇಂದುಮತಿ ಮಾತನಾಡಿ, ಈ ಭಾಷಣಮಾಲೆ ಮೂಲಕ ನಾವೆಲ್ಲರೂ ಭವಿಷ್ಯತ್ತಿನ ಬಗ್ಗೆ ಚಿಂತನೆ ನಡೆಸೋಣ ಎಂದು ತಿಳಿಸಿದರು.

ಬೆಂಗಳೂರಿನ ನಿಮ್ಹೋನ್ಸ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ದೇವರತ್ ಕುಮಾರ್ ಮಾತನಾಡಿದರು.  ಡಾ.ತಿರುಮೂರ್ತಿ ಅವರು ವೃದ್ಧಾಪ್ಯದ ಮನೋ- ಸಾಮಾಜಿಕ ಅಂಶ ಕುರಿತು ಹೇಳಿದರು.

ಮಹಾರಾಷ್ಟ್ರದ ಕೊಲ್ಹಾಪುರದ ಡಾ.ಇಕ್ಬಾಲ್ ಸುಬೇದಾರ್ ಅವರು ವೃದ್ಧಾಪ್ಯದ ಸಾಮಾಜಿಕ ಅಂಶಗಳ ಕುರಿತು ಮಾತನಾಡಿದರು. ಈ ಭಾಷಣ ಮಾಲೆಯನ್ನು ಸಮಾಜ ಕಾರ್ಯ ವಿಭಾಗದ ಡಾ.ಆರ್.ಎಂ. ಚನ್ನವೀರ ಮತ್ತು ಜೀವರಸಾಯನಶಾಸ್ತ್ರ ವಿಭಾಗದ ಡಾ.ಮಧುಸೂದನ್ ಆಯೋಜಿಸಿದ್ದರು.

ನಾಳೆ ರಾಜ್ಯಮಟ್ಟದ ಕಮ್ಮಟ

ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ದಾವಣಗೆರೆ ಸ್ನಾತಕೋತ್ತರ ಕೇಂದ್ರದ ವತಿಯಿಂದ ಅ. 15ರಂದು ರಾಜ್ಯಮಟ್ಟದ ಒಂದು ದಿನದ ಕಮ್ಮಟ ಏರ್ಪಡಿಸಲಾಗಿದೆ.

ಕಾಲೇಜಿನ ಆವರಣದಲ್ಲಿ ಬೆಳಿಗ್ಗೆ 10ಕ್ಕೆ ಕಾರ್ಯಕ್ರಮವನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಹಂಪ ನಾಗರಾಜಯ್ಯ ಉದ್ಘಾಟಿಸುವರು. 

ಶಾಸಕ ವೈ.ಎ. ನಾರಾಯಣಸ್ವಾಮಿ ಪ್ರೊ.ಆರ್. ತಿಪ್ಪಾರೆಡ್ಡಿ ಮತ್ತಿತರರು ಭಾಗವಹಿಸುವರು. ಪ್ರಾಂಶುಪಾಲ ಪ್ರೊ.ಡಿ. ಬಸವರಾಜ್ ಅಧ್ಯಕ್ಷತೆ ವಹಿಸುವರು. ಸಮಾರೋಪ ಸಂಜೆ 4.30ಕ್ಕೆ ನಡೆಯಲಿದೆ ಪ್ರಕಟಣೆ ತಿಳಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.